ಬಾರಾಮುಲ್ಲಾದಲ್ಲಿ ಉಗ್ರನ ಹೊಡೆದುರುಳಿಸಿದ ರಕ್ಷಣಾ ಸಿಬ್ಬಂದಿ
ಶ್ರೀನಗರ, ಜನವರಿ 3: ಜಮ್ಮು-ಕಾಶ್ಮೀರದ ಬಾರಾಮುಲ್ಲಾದಲ್ಲಿ ರಕ್ಷಣಾ ಸಿಬ್ಬಂದಿ ಎನ್ ಕೌಂಟರ್ ನಲ್ಲಿ ಉಗ್ರನೊಬ್ಬನನ್ನು ಹೊಡೆದುರುಳಿಸಿದೆ. ಇದೇ ವೇಳೆ ರಕ್ಷಣಾ ಪಡೆಯು ಅಪಾರ ಪ್ರಮಾಣದ ಶಸ್ತ್ರಾಸ್ತ್ರ, ಮದ್ದು-ಗುಂಡುಗಳನ್ನು ವಶಪಡಿಸಿಕೊಂಡಿದೆ. ಬಾರಾಮುಲ್ಲಾ ಜಿಲ್ಲೆಯ ಹರಿತರ್ ತರ್ಜೂ ಪ್ರದೇಶದಲ್ಲಿ ಮಂಗಳವಾರ ರಕ್ಷಣಾ ಪಡೆ ಹಾಗೂ ಉಗ್ರಗಾಮಿಗಳ ಮಧ್ಯೆ ಗುಂಡಿನ ಚಕಮಕಿ ನಡೆದಿದೆ.
ಕಾರ್ಯಾಚರಣೆ ವೇಳೆ ಇಬ್ಬರು ಉಗ್ರಗಾಮಿಗಳು ಇದ್ದರೆಂದು ರಕ್ಷಣಾ ಸಿಬ್ಬಂದಿ ಶಂಕೆ ವ್ಯಕ್ತಪಡಿಸಿದ್ದಾರೆ. ಆ ಪೈಕಿ ಒಬ್ಬನನ್ನು ಕೊಲ್ಲಲಾಗಿದೆ. ಮತ್ತೊಬ್ಬನಿಗಾಗಿ ಶೋಧ ಮುಂದುವರಿದಿದೆ. ಉತ್ತರ ಕಾಶ್ಮೀರದ ಬಂಡಿಪೋರ್ ನಲ್ಲಿ ಎನ್ ಕೌಂಟರ್ ನಡೆದ ಐದು ದಿನಗಳ ನಂತರ ಈ ಘಟನೆ ನಡೆದಿದೆ.[ಪಾಕ್ ಗೆ ಒತ್ತಡ, ಉಗ್ರ ಹಫೀಜ್ ಗೆ ಕೈ-ಬಾಯಿ ಕಟ್ಟಲು ಸಿದ್ಧತೆ!]
ಈ ಉಗ್ರರು ಯಾವ ಭಯೋತ್ಪಾದನಾ ಸಂಘಟನೆಗೆ ಸೇರಿದವರು ಎಂಬುದು ಗೊತ್ತಾಗಿಲ್ಲ. ಹಿರಿಯ ಅಧಿಕಾರಿಯೊಬ್ಬರು ಈ ಬಗ್ಗೆ ಮಾಹಿತಿ ನೀಡಿದ್ದು, ಕಾರ್ಯಾಚರಣೆಯು ಇನ್ನೂ ನಡೆಯುತ್ತಿದೆ. ಈಗಿನ ಸನ್ನಿವೇಶದಲ್ಲಿ ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡುವುದು ಸಾಧ್ಯವಿಲ್ಲ. ಆದರೆ ಸದ್ಯದಲ್ಲೇ ಇನ್ನಷ್ಟು ವಿವರಗಳು ಲಭ್ಯವಾಗಲಿದೆ.