ವೈಎಸ್ ಆರ್ ಕಾಂಗ್ರೆಸ್, ಜನ ಸೇನಾ ಪಾರ್ಟಿ ತೆಲಂಗಾಣ ಸ್ಪರ್ಧೆಯಿಲ್ಲ!
ಹೈದರಾಬಾದ್, ಅಕ್ಟೋಬರ್ 31: ಡಿಸೆಂಬರ್ 7ರಂದು ನಡೆಯಲಿರುವ ತೆಲಂಗಾಣ ವಿಧಾನಸಭಾ ಚುನಾವಣೆಗೆ ವೈಎಸ್ ಆರ್ ಕಾಂಗ್ರೆಸ್ ಹಾಗೂ ಜನ ಸೇನಾ ಪಾರ್ಟಿ ಸ್ಪರ್ಧಿಸುವ ಸಾಧ್ಯತೆಗಳಿಲ್ಲ.
"ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಬೇಕೋ ಬೇಡವೋ ಎಂಬ ಬಗ್ಗೆ ಇನ್ನೂ ನಿರ್ಧಾರ ಮಾಡಬೇಕಿದೆ. ನಮಗೆ ನಮ್ಮ ಮಿತಿಗಳು ಗೊತ್ತಿವೆ. ಏನೇ ಆಗಲೀ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗುವ ನವೆಂಬರ್ 12ರಂದು ಈ ಬಗ್ಗೆ ನಿರ್ಧಾರ ಮಾಡ್ತೀವಿ" ವೈಎಸ್ ಆರ್ ಸಿ ತೆಲಂಗಾಣ ಘಟಕದ ಅಧ್ಯಕ್ಷ ಘಟ್ಟು ಶ್ರೀಕಾಂತ್ ರೆಡ್ಡಿ ಹೇಳಿದ್ದಾರೆ.
ಜನ ಸೇನಾ ಪಾರ್ಟಿ ಮುಖ್ಯಸ್ಥ ಪವನ್ ಕಲ್ಯಾಣ್ ಇತ್ತೀಚೆಗೆ ತೆಲಂಗಾಣದಲ್ಲಿ ನಡೆದ ಸಭೆಯಲ್ಲಿ ಇಂಥದ್ದೇ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಚುನಾವಣೆಗೆ ಸ್ಪರ್ಧಿಸುವುದರಿಂದ ಹಣ ಹಾಗೂ ಶ್ರಮ ವ್ಯರ್ಥವಾಗುತ್ತದೆ ಎಂದು ಅವರು ಹೇಳಿದ್ದಾರೆ.

ಇತ್ತೀಚೆಗೆ ವೈ.ಎಸ್.ಜಗನ್ ಮೋಹನ್ ರೆಡ್ಡಿ ಹಾಗೂ ಪವನ್ ಕಲ್ಯಾಣ್ ಇಬ್ಬರೂ ಕೆ.ಚಂದ್ರಶೇಖರ್ ರಾವ್ ನೇತೃತ್ವದ ತೆಲಂಗಾಣ ರಾಷ್ಟ್ರೀಯ ಸಮಿತಿಯನ್ನು ಹಲವು ಸಲ ಹೊಗಳಿದ್ದಾರೆ.
ಕೆಸಿಆರ್ ರ ಮಗ ಕೆ.ಟಿ.ರಾಮ ರಾವ್ ಆಂಧ್ರಪ್ರದೇಶದಲ್ಲಿ ಪವನ್ ಕಲ್ಯಾಣ್ ರ ಸಭೆಗಳನ್ನು ಬೆಂಬಲಿಸಿದ್ದು, ಈಚೆಗೆ ಜಗನ್ ಮೋಹನ್ ರೆಡ್ಡಿ ಮೇಲೆ ನಡೆದ ಚಾಕು ಇರಿತವನ್ನು ಖಂಡಿಸಿದ್ದಾರೆ. "ನಮಗೆ ಟಿಆರ್ ಎಸ್ ಜತೆಗೆ ಉತ್ತಮ ಸಂಬಂಧವಿದೆ. ಆದರೆ ಅದನ್ನು ಬೆಂಬಲಿಸುವ ಬಗ್ಗೆ ಇನ್ನೂ ತೀರ್ಮಾನ ಮಾಡಿಲ್ಲ" ಎಂದು ಶ್ರೀಕಾಂತ್ ರೆಡ್ಡಿ ಹೇಳಿದ್ದಾರೆ.
ಕಳೆದ ಲೋಕಸಭಾ ಚುನಾವಣೆಯಲ್ಲಿ ವೈಎಸ್ ಆರ್ ಕಾಂಗ್ರೆಸ್ ಅಭ್ಯರ್ಥಿಗಳನ್ನು ತೆಲಂಗಾಣದಲ್ಲಿ ಕಣಕ್ಕೆ ಇಳಿಸಲಾಗಿತ್ತು. ಮೂರು ಶಾಸಕ ಸ್ಥಾನ ಹಾಗೂ ಒಂದು ಲೋಕಸಭಾ ಸ್ಥಾನ ಗಳಿಸಿತ್ತು. ಜನ ಸೇನಾ ಪಾರ್ಟಿ ಆಗಷ್ಟೇ ಸ್ಥಾಪನೆ ಆಗಿದ್ದರಿಂದ ಸ್ಪರ್ಧೆ ಮಾಡಿರಲಿಲ್ಲ. ಆದರೆ ತೆಲುಗು ದೇಶಂ ಪಾರ್ಟಿ ಹಾಗೂ ಭಾರತೀಯ ಜನತಾ ಪಾರ್ಟಿಯನ್ನು ಬೆಂಬಲಿಸಿತ್ತು.












Click it and Unblock the Notifications