ತೆಲಂಗಾಣದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಹೈದರಾಬಾದ್ ಹೆಸರು ಭಾಗ್ಯನಗರ್
ಹೈದರಾಬಾದ್, ನವೆಂಬರ್ 8: ತೆಲಂಗಾಣದಲ್ಲಿ ಬಿಜೆಪಿ ಅಧಿಕಾರದ ಗದ್ದುಗೆಗೆ ಏರಿದರೆ ಹೈದರಾಬಾದ್ ನಗರದ ಹೆಸರನ್ನು ಭಾಗ್ಯನಗರ್ ಎಂದು ಬದಲಿಸುತ್ತೇವೆ ಎಂದು ಬಿಜೆಪಿ ಮುಖಂಡ ರಾಜ ಸಿಂಗ್ ಹೇಳಿದ್ದಾರೆ. ಅಷ್ಟೇ ಅಲ್ಲ, ಸಿಕಂದರಾಬಾದ್ ಹಾಗೂ ಕರೀಮ್ ನಗರ್ ಹೆಸರುಗಳನ್ನು ಸಹ ಬದಲಿಸುವುದಾಗಿ ಹೇಳಿದ್ದಾರೆ.
ಮೊದಲಿಗೆ ಹೈದರಾಬಾದ್ ಹೆಸರು ಭಾಗ್ಯನಗರ್ ಅಂತಲೇ ಇತ್ತು. ಆದರೆ ಕುತುಬ್ ಷಾ ಬಂದ ನಂತರ ಹೈದರಾಬಾದ್ ಎಂದು ಬದಲಾಯಿಸಿದ. ಆದ್ದರಿಂದ ಹೈದರಾಬಾದ್ ಹೆಸರು ಬದಲಿಸುವ ಆಲೋಚನೆ ಮಾಡುತ್ತಿದ್ದೇವೆ ಎಂದು ಅವರು ಹೇಳಿದ್ದಾರೆ.
ತೆಲಂಗಾಣದಲ್ಲಿ ಬಹುಮತದೊಂದಿಗೆ ಬಿಜೆಪಿ ಅಧಿಕಾರಕ್ಕೆ ಬರುತ್ತದೆ. ಆ ನಂತರ ಮೊದಲ ಗುರಿ ರಾಜ್ಯದ ಅಭಿವೃದ್ಧಿ. ಆ ನಂತರ ಹೈದರಾಬಾದ್ ಅನ್ನು ಭಾಗ್ಯನಗರ್ ಎಂದು ಬದಲಾಯಿಸುತ್ತೇವೆ. ಜತೆಗೆ ಸಿಕಂದರಾಬಾದ್ ಹಾಗೂ ಕರೀಮ್ ನಗರ್ ಹೆಸರು ಸಹ ಬದಲಿಸುತ್ತೇವೆ ಎಂದು ಹೇಳಿದ್ದಾರೆ.

ತೆಲಂಗಾಣದಲ್ಲಿ ಡಿಸೆಂಬರ್ ಏಳರಂದು ಚುನಾವಣೆ ನಡೆಯಲಿದೆ. ಮೊಘಲರು ಹಾಗೂ ನಿಜಾಮರು ಹೆಸರು ಇಟ್ಟಿರುವ ಪ್ರದೇಶಗಳಿಗೆ ತೆಲಂಗಾಣಕ್ಕಾಗಿ ಹಾಗೂ ದೇಶಕ್ಕಾಗಿ ಹೋರಾಡಿದವರ ಹೆಸರನ್ನು ಇಡಲಾಗುವುದು ಎಂದಿದ್ದಾರೆ.
ಗುಜರಾತ್ ನ ಅಹ್ಮದಾಬಾದ್ ಗೆ ಕರ್ಣಾವತಿ ಎಂದು ಬದಲಿಸಲು ಚಿಂತಿಸುತ್ತಿರುವುದಾಗಿ ಅಲ್ಲಿನ ಉಪ ಮುಖ್ಯಮಂತ್ರಿ ನಿತಿನ್ ಪಟೇಲ್ ಘೋಷಣೆ ಮಾಡಿದ ಒಂದು ದಿನದ ನಂತರ ಬಿಜೆಪಿಯ ರಾಜ ಸಿಂಗ್ ಈ ಹೇಳಿಕೆ ನೀಡಿದ್ದಾರೆ.












Click it and Unblock the Notifications