ಜಿಎಚ್ಎಂಸಿ ಚುನಾವಣೆಯಲ್ಲಿ 100 ಸ್ಥಾನದಲ್ಲಿ ಗೆಲುವು; ಕೆ. ಕವಿತಾ
ಹೈದರಾಬಾದ್, ಡಿಸೆಂಬರ್ 04 : "ಗ್ರೇಟರ್ ಹೈದರಾಬಾದ್ ಮಹಾನಗರ ಪಾಲಿಕೆ (ಜಿಎಚ್ಎಂಸಿ) ಚುನಾವಣೆಯಲ್ಲಿ ಟಿಆರ್ಎಸ್ ಪಕ್ಷ 100 ಸ್ಥಾನಗಳಲ್ಲಿ ಗೆಲ್ಲುವ ನಿರೀಕ್ಷೆ ಇದೆ" ಎಂದು ಪಕ್ಷದ ನಾಯಕಿ ಕೆ. ಕವಿತಾ ಹೇಳಿದರು. ಚುನಾವಣೆ ಮತ ಎಣಿಕೆ ಆರಂಭವಾಗಿದೆ.
ಶುಕ್ರವಾರ ಬೆಳಗ್ಗೆ ಹೈದರಾಬಾದ್ನಲ್ಲಿ ಮಾತನಾಡಿದ ಮುಖ್ಯಮಂತ್ರಿ ಕೆ. ಚಂದ್ರಶೇಖರರಾವ್ ಪುತ್ರಿ ಕೆ. ಕವಿತಾ,"ಬಿಜೆಪಿ ದೊಡ್ಡ ದೊಡ್ಡ ನಾಯಕರು ಪ್ರಚಾರಕ್ಕೆ ಬಂದು ಸುಳ್ಳು ಮಾಹಿತಿಯನ್ನು ನೀಡಿ ಹೋಗಿದ್ದಾರೆ" ಎಂದು ಆರೋಪಿಸಿದರು.
"ನಮಗೆ ಸಂತೋಷವಾಗಿದೆ ಹೈದರಾಬಾದ್ನ ಜನರು ಬಿಜೆಪಿ ನಾಯಕರ ಸುಳ್ಳು ಹೇಳಿಕೆಗಳನ್ನು ನಂಬಿಲ್ಲ. ಕೆಸಿಆರ್ ನಾಯಕತ್ವದ ಮೇಲೆ ಜನರು ನಂಬಿಕೆ ಇಟ್ಟಿದ್ದಾರೆ" ಎಂದು ಕೆ. ಕವಿತಾ ಹೇಳಿದರು.

ಗ್ರೇಟರ್ ಹೈದರಾಬಾದ್ ಮಹಾನಗರ ಪಾಲಿಕೆ ಚುನಾವಣೆಯ ಮತ ಎಣಿಕೆ ಬೆಳಗ್ಗೆ 8ಗಂಟೆಗೆ ಆರಂಭವಾಗಿದೆ. 150 ವಾರ್ಡ್ಗಳಿಗೆ ನಡೆದ ಚುನಾವಣೆಯ ಫಲಿತಾಂಶ ಮಧ್ಯಾಹ್ನದ ವೇಳೆಗೆ ಹೊರ ಬರುವ ನಿರೀಕ್ಷೆ ಇದೆ. 1,122 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಾರೆ.
ಹೈದರಾಬಾದ್ ನಗರದ 30 ಕೇಂದ್ರಗಳಲ್ಲಿ ಮತ ಎಣಿಕೆ ಪ್ರಕ್ರಿಯೆ ನಡೆಯುತ್ತಿದೆ. 8,152 ಸಿಬ್ಭಂದಿಗಳು ಮತ ಎಣಿಕೆ ಪ್ರಕ್ರಿಯೆಯಲ್ಲಿ ತೊಡಗಿದ್ದಾರೆ. ಬಿಜೆಪಿ ಅಭ್ಯರ್ಥಿಗಳು 149 ವಾರ್ಡ್ನಲ್ಲಿ ಕಣಕ್ಕಿಳಿಸಿದ್ದಾರೆ. 100 ಸ್ಥಾನದಲ್ಲಿ ಜಯಗಳಿಸುವುದಾಗಿ ಬಿಜೆಪಿ ಹೇಳಿದೆ.
2016ರ ಚುನಾವಣೆಯಲ್ಲಿ ಟಿಆರ್ಎಸ್ ಪಕ್ಷ 99, ಎಐಎಂಐಎಂ 44 ಸ್ಥಾನಗಳಲ್ಲಿ ಜಯಗಳಿಸಿದ್ದವು. ಈ ಬಾರಿಯ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ಅಧ್ಯಕ್ಷ ಜೆ. ಪಿ. ನಡ್ಡಾ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಆಗಮಿಸಿದ್ದರು.












Click it and Unblock the Notifications