ವೈಕುಂಠ ಏಕಾದಶಿ: ದರ್ಶನ ಟಿಕೆಟ್ ಇಲ್ಲದ ಭಕ್ತರಿಗೆ ಪ್ರವೇಶವಿಲ್ಲ
ಹೈದರಾಬಾದ್, ಡಿಸೆಂಬರ್ 24: ವೈಕುಂಠ ಏಕಾದಶಿ ಹಬ್ಬದ ಆಚರಣೆಯ ವೇಳೆ ತಿರುಮಲ ತಿರುಪತಿಯಲ್ಲಿ ನಡೆಯುವ ವಿಶೇಷ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಮುಂಗಡ ಟಿಕೆಟ್ ಕಾಯ್ದಿರಿಸಿದ ಭಕ್ತರಿಗೆ ಮಾತ್ರ ಅವಕಾಶ ನೀಡಲಾಗುವುದು ಎಂದು ತಿರುಮಲ ತಿರುಪತಿ ದೇವಸ್ಥಾನದ (ಟಿಟಿಡಿ) ಕಾರ್ಯನಿರ್ವಾಹಕ ಅಧಿಕಾರಿ ಡಾ. ಕೆಎಸ್ ಜವಹರ್ ರೆಡ್ಡಿ ತಿಳಿಸಿದ್ದಾರೆ.
ದೇವಸ್ಥಾನದ ಮಂಡಳಿಯು ಕೋವಿಡ್ 19 ಶಿಷ್ಟಾಚಾರಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿದೆ. ಇಲ್ಲಿಗೆ ಭೇಟಿ ನೀಡುವ ಭಕ್ತರ ಸುರಕ್ಷತೆಗೆ ಅತ್ಯಧಿಕ ಆದ್ಯತೆ ನೀಡುತ್ತಿದೆ. ಟಿಟಿಡಿಯು ವೈಕುಂಠ ಏಕಾದಶಿ ದರ್ಶನಕ್ಕಾಗಿ ದಿನಕ್ಕೆ ಕೇವಲ 35,000 ಜನರಿಗೆ ಪ್ರವೇಶ ನೀಡಬಹುದಾಗಿದೆ. 10 ದಿನಗಳ ವೈಕುಂಠ ಏಕಾದಶಿ ಆಚರಣೆಗಾಗಿ 300 ರೂ ವಿಶೇಷ ಪ್ರವೇಶದ ಟಿಕೆಟ್ಗಳನ್ನು ಎರಡು ಲಕ್ಷ ಜನರಿಗೆ ಟಿಟಿಡಿ ವಿತರಿಸಿದೆ ಎಂದು ಅವರು ಹೇಳಿದ್ದಾರೆ.
'ಇದರ ಜತೆಗೆ ಟಿಟಿಡಿ 20 ಸಾವಿರ ಶ್ರೀವಾರಿ ದರ್ಶನ ವಿಐಪಿ ಟಿಕೆಟ್ಗಳನ್ನು ಸಹ ವಿತರಿಸಿದೆ. ಈ ಎಲ್ಲ ದರ್ಶನ ಟಿಕೆಟ್ಗಳನ್ನು ಭಕ್ತರು ತೀರಾ ಕಡಿಮೆ ಅವಧಿಯಲ್ಲಿ ಬುಕ್ ಮಾಡಿದ್ದಾರೆ. ಡಿ 24ರಂದು ತಿರುಪತಿಯ ಜನರಿಗೆ 1 ಲಕ್ಷ ಸರ್ವದರ್ಶನ ಟಿಕೆಟ್ಗಳನ್ನು ವಿತರಿಸಲಿದೆ' ಎಂದು ತಿಳಿಸಿದ್ದಾರೆ.

ದರ್ಶನ ಟಿಕೆಟ್ಗಳಿಲ್ಲದೆ ಭಕ್ತರು ತಿರುಮಲಕ್ಕೆ ಬರಬಾರದು. ಅಧಿಕೃತ ದರ್ಶನ ಟಿಕೆಟ್ ಹೊಂದಿಲ್ಲದ ಭಕ್ತರಿಗೆ ಬೆಟ್ಟ ಪಟ್ಟಣಕ್ಕೆ ಪ್ರವೇಶ ನೀಡುವುದಿಲ್ಲ ಎಂದು ಮಾಹಿತಿ ನೀಡಿದ್ದಾರೆ.
ಅತ್ತ ತಿರುಮಲದಲ್ಲಿ ಭಕ್ತರು ಎರಡು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ದರ್ಶನಕ್ಕಾಗಿ ತುಂಬಾ ದೂರದ ಊರುಗಳಿಂದ ಅಲ್ಲಿಗೆ ಬಂದಿದ್ದೇವೆ. ಆದರೆ ಟಿಟಿಡಿ ಸಿಬ್ಬಂದಿ ಉಚಿತ ದರ್ಶನ ಕೋಟಾವನ್ನು ಇನ್ನು ಮೂರು ದಿನಗಳವರೆಗೆ ನಿರ್ಬಂಧಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.












Click it and Unblock the Notifications