ಪಂಕ್ಚರ್ ಆಯಿತೆಂದು ಗಾಡಿ ನಿಲ್ಲಿಸಿದ ಪಶುವೈದ್ಯೆ, ಸಿಕ್ಕಿದ್ದು ಸುಟ್ಟ ಶವವಾಗಿ
Recommended Video
ಹೈದರಾಬಾದ್, ನವೆಂಬರ್ 28: ಮುತ್ತಿನ ನಗರಿ ಹೈದರಾಬಾದ್ನಲ್ಲಿ ಬೆಚ್ಚಿಬೀಳಿಸುವ ಘಟನೆ ನಡೆದಿದೆ. ಬುಧವಾರ ರಾತ್ರಿ ನಾಪತ್ತೆಯಾಗಿದ್ದ 26 ವರ್ಷದ ಪಶುವೈದ್ಯೆ, ಗುರುವಾರ ಬೆಳಿಗ್ಗೆ ಬಹುತೇಕ ಸುಟ್ಟ ಸ್ಥಿತಿಯಲ್ಲಿನ ಶವವಾಗಿ ಪತ್ತೆಯಾಗಿದ್ದಾರೆ. ಎದೆನಡುಗಿಸುವ ಈ ಘಟನೆಗೆ ತೆಲಂಗಾಣ ತಲ್ಲಣಗೊಂಡಿದೆ.
ತೆಲಂಗಾಣದ ಕೊಲ್ಲೂರು ಗ್ರಾಮದ ಪಶು ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ 26 ವರ್ಷದ ಮಹಿಳೆ, ಶಡ್ನಗರ್ನಲ್ಲಿರುವ ತಮ್ಮ ಮನೆಗೆ ದ್ವಿಚಕ್ರ ವಾಹನದಲ್ಲಿ ಮರಳುತ್ತಿದ್ದರು. ಶಮ್ಷಾಬಾದ್ ಎಂಬಲ್ಲಿ ಅವರ ದ್ವಿಚಕ್ರ ವಾಹನದ ಟೈರ್ ಪಂಕ್ಚರ್ ಆಗಿತ್ತು. ಈ ಘಟನೆ ನಡೆದ ಬಳಿಕ ಗುರುವಾರ ಬೆಳಿಗ್ಗೆ ಆ ಸ್ಥಳದಿಂದ ಸುಮಾರು 30 ಕಿ.ಮೀ. ದೂರದಲ್ಲಿರುವ ಕೆಳಸೇತುವೆಯೊಂದರ ಅಡಿಯಲ್ಲಿ ಮೃತದೇಹ ಪತ್ತೆಯಾಗಿದೆ. ಸೇತುವೆ ಕೆಳಗೆ ನಡೆದುಕೊಂಡು ಹೋಗುತ್ತಿದ್ದವರ ಕಣ್ಣಿಗೆ ದೇಹ ಕಾಣಿಸಿದೆ. ಅವರ ಮೇಲೆ ಅತ್ಯಾಚಾರ ನಡೆದಿದೆಯೇ ಇಲ್ಲವೇ ಎಂಬ ಬಗ್ಗೆ ಪೊಲೀಸರು ಮಾಹಿತಿ ನೀಡಿಲ್ಲ.
ರಾತ್ರಿ 9.15ರ ವೇಳೆಗೆ ಸಹೋದರಿ ಭವ್ಯಾಗೆ ಕರೆ ಮಾಡಿದ್ದ ಮಹಿಳೆ, ಟೈರ್ ಪಂಕ್ಚರ್ ಆಗಿದ್ದು, ಅದನ್ನ ಸರಿಪಡಿಸಿಕೊಡುವುದಾಗಿ ಯಾರೋ ಹೇಳಿದ್ದಾಗಿ ತಿಳಿಸಿದ್ದರು. ಗಾಡಿ ಪಂಕ್ಚರ್ ಹಾಕಿಸಿಕೊಂಡರೆ ಮನೆಗೆ ಸುರಕ್ಷಿತವಾಗಿ ತಲುಪಬಹುದು ಎಂದು ಭಾವಿಸಿದ್ದರು.

ಸ್ವಲ್ಪ ಹೊತ್ತಿನಲ್ಲೇ ಸ್ವಿಚ್ ಆಫ್
ರಾತ್ರಿಯಾಗಿದ್ದರಿಂದ ಆ ಜಾಗದಿಂದ ಸಮೀಪದ ಟೋಲ್ ಗೇಟ್ಗೆ ತೆರಳಿ ಕಾಯುವಂತೆ ಭವ್ಯಾ ಸಲಹೆ ನೀಡಿದ್ದರು. ಆದರೆ ಗಾಡಿ ನಿಂತಿದ್ದ ಸ್ಥಳದಲ್ಲಿ ಅನೇಕ ಅಪರಿಚಿತ ಗಂಡಸರು ತಮ್ಮೆಡೆಗೆ ಕೆಕ್ಕರಿಸಿಕೊಂಡು ನೋಡುತ್ತಿದ್ದು, ಹಲವು ಟ್ರಕ್ಗಳನ್ನು ನಿಲ್ಲಿಸಲಾಗಿದೆ. ಇದರಿಂದ ಭಯವಾಗುತ್ತಿದೆ ಎಂದು ಪ್ರಿಯಾಂಕಾ ತಿಳಿಸಿದ್ದರು. ಕೆಲವು ಲಾರಿ ಚಾಲಕರು ಸಹಾಯ ಮಾಡುವುದಾಗಿ ಕೂಡ ಮಂದೆ ಬಂದಿದ್ದರು ಎನ್ನಲಾಗಿದೆ.
'ಆ ಗಾಡಿಯನ್ನು ಅಲ್ಲಿಯೇ ಬಿಟ್ಟು ಬರುವಂತೆಯೂ ನಾನು ಸಲಹೆ ನೀಡಿದ್ದೆ. ಆದರೆ ಕೆಲವು ಸಮಯದ ಬಳಿಕ ಆಕೆಗೆ ಕರೆ ಮಾಡಿದರೆ ಸ್ವಿಚ್ ಆಫ್ ಆಗಿತ್ತು' ಎಂದು ಭವ್ಯಾ ಹೇಳಿದ್ದಾರೆ.

ಲಾಕೆಟ್ ಸಹಾಯದಿಂದ ಪತ್ತೆ
ಕೂಡಲೇ ಆಕೆಯ ಪೋಷಕರು ಸಮೀಪದ ಟೋಲ್ ಗೇಟ್ ಬಳಿ ಬಂದು ಪ್ರಿಯಾಂಕಾ ಅವರಿಗಾಗಿ ಹುಡುಕಾಡಿದರು. ಎಲ್ಲಿಯೂ ಅವರ ಪತ್ತೆಯಾಗಲಿಲ್ಲ. ಬಳಿಕ ಪೊಲೀಸರಿಗೆ ದೂರು ಸಲ್ಲಿಸಿದರು.
ಗುರುವಾರ ಬೆಳಿಗ್ಗೆ ಪ್ರಿಯಾಂಕಾ ಅವರ ದೇಹ ತೀವ್ರವಾಗಿ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ. ಅವರು ಧರಿಸುತ್ತಿದ್ದ ಲಾಕೆಟ್ನ ಸಹಾಯದಿಂದ ಆಕೆಯ ಕುಟುಂಬದವರು ಗುರುತು ಪತ್ತೆಹಚ್ಚಿದರು. ಮರಣೋತ್ತರ ಪರೀಕ್ಷೆಯ ಬಳಿಕ ಆಕೆಯ ದೇಹವನ್ನು ಪೋಷಕರಿಗೆ ಒಪ್ಪಿಸಲಾಯಿತು.

ಸೀಮೆ ಎಣ್ಣೆ ಸುರಿದ ಅನುಮಾನ
'ನಾವು ಪ್ರದೇಶದ ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದೇವೆ. ಸುಟ್ಟ ದೇಹವೊಂದು ಪತ್ತೆಯಾಗಿದ್ದರ ಬಗ್ಗೆ ಪೊಲೀಸರು ಬೆಳಿಗ್ಗೆ 7.30ರ ವೇಳೆಗೆ ಮಾಹಿತಿ ನೀಡಿದರು. ಆಕೆಯ ಮೇಲೆ ಸೀಮೆ ಎಣ್ಣೆ ಸುರಿದು ಸುಟ್ಟಿದ್ದಾರೆ ಎಂಬ ಅನುಮಾನ ಇದೆ' ಎಂಬುದಾಗಿ ಶಮ್ಷಾಬಾದ್ ಡಿಸಿಪಿ ಪ್ರಕಾಶ್ ರೆಡ್ಡಿ ತಿಳಿಸಿದರು.

ಹತ್ತು ತಂಡಗಳ ರಚನೆ
ಪ್ರಿಯಾಂಕಾ ಅವರನ್ನು ಅಪಹರಿಸಿ ಕೊಲೆಮಾಡಿದವರ ಪತ್ತೆಗೆ ಹತ್ತು ತಂಡಗಳನ್ನು ರಚಿಸಲಾಗಿದೆ. ಪ್ರಿಯಾಂಕಾ ಅವರ ಬಳಿಯಿದ್ದ ವಾಹನ ಸುಳಿವು ನೀಡುವ ಸಾಧ್ಯತೆ ಇದೆ. ಆದರೆ ಆ ವಾಹನ ಕೂಡ ನಾಪತ್ತೆಯಾಗಿದೆ. ಈ ಕೃತ್ಯ ಎಸಗಿದವರನ್ನು ನೇಣಿಗೇರಿಸಬೇಕು ಎಂದು ಪ್ರಿಯಾಂಕಾ ತಂದೆ ಕಣ್ಣೀರಿಡುತ್ತಾ ಹೇಳಿದರು.












Click it and Unblock the Notifications