ತೆಲಂಗಾಣ ಚುನಾವಣೆ : ಕೆಸಿಆರ್ಗೆ ಎದುರಾಯಿತು ದೊಡ್ಡ ಸವಾಲು!
ಹೈದರಾಬಾದ್, ಅಕ್ಟೋಬರ್ 13 : ತೆಲಂಗಾಣ ವಿಧಾನಸಭೆ ಚುನಾವಣೆಯಲ್ಲಿ ಕೆ.ಚಂದ್ರಶೇಖರರಾವ್ ಅವರಿಗೆ ದೊಡ್ಡ ಸವಾಲು ಎದುರಾಗುವ ನಿರೀಕ್ಷೆ ಇದೆ. ಕಾಂತಿಕಾರಿ ಕವಿ, ಹಾಡುಗಾಗ ಗದ್ದರ್ ಕೆಸಿಆರ್ ವಿರುದ್ಧ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುವ ಸಾಧ್ಯತೆ ಇದೆ.
ತೆಲಂಗಾಣ ವಿಧಾನಸಭೆಯ 119 ಸ್ಥಾನಗಳಿಗೆ ಡಿಸೆಂಬರ್ 7ರಂದು ಚುನಾವಣೆ ನಡೆಯಲಿದ್ದು, ಡಿಸೆಂಬರ್ 11ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ. ಅವಧಿಗೂ ಮೊದಲೇ ವಿಧಾನಸಭೆ ವಿಸರ್ಜನೆ ಮಾಡಿ ಕೆ.ಚಂದ್ರಶೇಖರರಾವ್ ಜನರ ಮುಂದೆ ಹೋಗಿದ್ದಾರೆ.
ಗದ್ದರ್ ಶುಕ್ರವಾರ ನವದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಭೇಟಿಯಾಗಿದ್ದರು. ಅವರು ಕಾಂಗ್ರೆಸ್ ಪಕ್ಷದಿಂದ ಕೆ.ಚಂದ್ರಶೇಖರರಾವ್ ಅವರ ವಿರುದ್ಧ ಸ್ಪರ್ಧೆ ಮಾಡುವ ಸಾಧ್ಯತೆ ಇದೆ. ಆದರೆ, ಯಾವ ಕ್ಷೇತ್ರದಿಂದ ಎಂಬುದು ಇನ್ನೂ ಅಂತಿಮವಾಗಿಲ್ಲ.
ಕಾಂಗ್ರೆಸ್ ಸೇರುವಂತೆ ಗದ್ದರ್ಗೆ ಆಹ್ವಾನ ನೀಡಲಾಗಿತ್ತು. ಆದರೆ, ಅದನ್ನು ಅವರು ತಿರಸ್ಕರಿಸಿದ್ದಾರೆ. 'ನಾನು ಯಾವುದೇ ರಾಜಕೀಯ ಪಕ್ಷ ಸೇರುವುದಿಲ್ಲ. ಜಾತ್ಯತೀತ ತತ್ವ ಮತ್ತು ರಾಜಕೀಯ ಪಕ್ಷಗಳ ನಡುವೆ ಕೊಂಡಿಯಾಗಿ ಕೆಲವ ಮಾಡುವೆ' ಎಂದು ಅವರು ಹೇಳಿದ್ದಾರೆ.....

ಸಂವಿಧಾನ ಉಳಿಸಿ
ನವದೆಹಲಿಯಲ್ಲಿ ಶುಕ್ರವಾರ ಗದ್ದರ್ ಅವರು ಪತ್ನಿ ವಿಮಲಾ, ಪುತ್ರ ಸೂರ್ಯ ಕಿರಣ್ ಜೊತೆ ಗದ್ದರ್ ಭೇಟಿಯಾಗಿದ್ದರು. ಭೇಟಿಯ ಬಳಿಕ ಮಾತನಾಡಿದ ಅವರು, 'ನಾನು ಕಾಂಗ್ರೆಸ್ ಪಕ್ಷ ಸೇರುತ್ತಿಲ್ಲ. ಸಂವಿಧಾನ ಉಳಿಸಿ ಅಭಿಯಾನದ ಬಗ್ಗೆ ಚರ್ಚೆ ನಡೆಸಲು ರಾಹುಲ್ ಗಾಂಧಿ ಭೇಟಿಯಾಗಿದ್ದೆ. ನಾನು ಯಾವುದೇ ರಾಜಕೀಯ ಪಕ್ಷಕ್ಕೂ ಸೇರುವುದಿಲ್ಲ' ಎಂದು ಸ್ಪಷ್ಟನೆ ನೀಡಿದರು.

ಕೆಸಿಆರ್ ವಿರುದ್ಧ ವಾಗ್ದಾಳಿ
ಕೆ.ಚಂದ್ರಶೇಖರರಾವ್ ಅವರ ವಿರುದ್ಧ ವಾಗ್ದಾಳಿ ನಡೆಸಿದ ಗದ್ದರ್, '2014ರಲ್ಲಿ ನೀಡಿದ್ದ ಭರವಸೆಗಳಲ್ಲಿ ಯಾವುದನ್ನೂ ಅವರು ಈಡೇರಿಸಿಲ್ಲ. ಒಂದು ಕುಟುಂಬದ ಒಬ್ಬರಿಗೆ ಉದ್ಯೋಗ ನೀಡುವ ಭರವಸೆ ನೀಡಿದ್ದರು ಅದು ಹುಸಿಯಾಗಿದೆ. ದಲಿತರಿಗೆ ಭೂಮಿ ಹಂಚುತ್ತೇನೆ ಎಂದು ಹೇಳಿದ್ದರು ಅದನ್ನು ಈಡೇರಿಸಿಲ್ಲ' ಎಂದು ಹೇಳಿದರು.

ಕೆಸಿಆರ್ ವಿರುದ್ಧ ಸ್ಪರ್ಧೆ
'2018ರ ವಿಧಾನಸಭೆ ಚುನಾವಣೆಯಲ್ಲಿ ಕೆ.ಚಂದ್ರಶೇಖರರಾವ್ ಅವರ ವಿರುದ್ಧ ನಾನು ಸ್ಪರ್ಧಿಸಲು ಸಿದ್ಧನಾಗಿದ್ದೇನೆ. ಎಲ್ಲಾ ಪಕ್ಷಗಳು, ಜನರು ಮನವಿ ಮಾಡಿದರೆ ಪಕ್ಷೇತರ ಅಭ್ಯರ್ಥಿಯಾಗಿ ನಾನು ಸ್ಪರ್ಧೆ ಮಾಡುತ್ತೇನೆ. ನಾನು ಕಾಂಗ್ರೆಸ್ ಪಕ್ಷ ಸೇರುವುದಿಲ್ಲ' ಎಂದು ಗದ್ದರ್ ತಿಳಿಸಿದರು.

ಪವನ್ ಕಲ್ಯಾಣ್ ಜೊತೆ ಸೇರಲಿದ್ದಾರೆ
ಕಾಂತಿಕಾರಿ ಕವಿ, ಹಾಡುಗಾಗ ಗದ್ದರ್ ರಾಜಕೀಯ ಪ್ರವೇಶಿಸಲಿದ್ದಾರೆ ಎಂಬ ಸುದ್ದಿ ಬಹಳ ದಿನದಿಂದ ಹರಡಿತ್ತು. ಅವರು ನಟ ಪವನ್ ಕಲ್ಯಾಣ್ ಅವರ ಜೊತೆ ಸೇರಿ ತೆಲಂಗಾಣ ವಿಧಾನಸಭೆ ಚುನಾವಣೆಗೆ ಸ್ಪರ್ಧೆ ಮಾಡಲಿದ್ದಾರೆ ಎಂಬ ಸುದ್ದಿ ಇತ್ತು. ಈಗ ಅವರು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಲು ಸಿದ್ಧ ಎಂದು ಹೇಳಿದ್ದಾರೆ.












Click it and Unblock the Notifications