ಮೇಲಾಧಿಕಾರಿಗಳ ಕಿರುಕುಳ, ಠಾಣೆಯಲ್ಲೇ ಎಸ್ಐ ಆತ್ಮಹತ್ಯೆ
ಹೈದರಾಬಾದ್, ಜೂನ್ 14: ತೆಲಂಗಾಣದ ಕುಕ್ನೂರ್ ಪಲ್ಲಿ ಠಾಣೆಯಲ್ಲಿ ಮೇಲಾಧಿಕಾರಿಗಳ ಕಿರುಕುಳಕ್ಕೆ ಬೇಸತ್ತು ಸಬ್ ಇನ್ಸ್ ಪೆಕ್ಟರ್ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ವಿಚಿತ್ರವೆಂದರೆ ವರ್ಷದ ಹಿಂದೆ ಇದೇ ಠಾಣೆಯಲ್ಲಿ ಮತ್ತೊಬ್ಬರು ಎಸ್ಐ ಇದೇ ರೀತಿ ಕಿರುಕುಳಕ್ಕೆ ತಮ್ಮದೇ ಸರ್ವಿಸ್ ರಿವಾಲ್ವರ್ ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದರು.
ಪ್ರಭಾಕರ್ ರೆಡ್ಡಿ ಆತ್ಮಹತ್ಯೆ ಮಾಡಿಕೊಂಡ ಪೊಲೀಸ್ ಅಧಿಕಾರಿಯಾಗಿದ್ದಾರೆ. ಮಧ್ಯಾಹ್ನ 1.30ಕ್ಕೆ ರೆಡ್ಡಿ ತಮ್ಮ ರಿವಾಲ್ವರ್ ನಿಂದ ತಲೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
2012ರಲ್ಲಿ ಪ್ರಭಾಕರ್ ರೆಡ್ಡಿ ಸಬ್ ಇನ್ಸ್ ಪೆಕ್ಟರ್ ಆಗಿ ಹುದ್ದೆ ವಹಿಸಿಕೊಂಡಿದ್ದರು. ಅವರನ್ನು 2016ರ ಆಗಸ್ಟಿನಲ್ಲಿ ಕುಕ್ನೂರ್ ಪಲ್ಲಿ ಠಾಣೆಗೆ ವರ್ಗಾವಣೆ ಮಾಡಲಾಗಿತ್ತು. ಅವರ ಮೇಲೆ ಹಿರಿಯ ಅಧಿಕಾರಿಗಳು ದೌರ್ಜನ್ಯ ನಡೆಸುತ್ತಿದ್ದರು. ಮತ್ತು 50 ಲಕ್ಷ ಲಂಚ ಸಂಗ್ರಹಿಸುವಂತೆ ಬಲವಂತಪಡಿಸಿದ್ದರು ಎಂದು ಕುಟುಂಬಸ್ಥರು ದೂರಿದ್ದಾರೆ.
ಅವರು ಡೆತ್ ನೋಟ್ ಕೂಡಾ ಬರೆದಿಟ್ಟಿದ್ದಾರೆ, ಆದರೆ ಇದನ್ನು ತನಿಖಾಧಿಕಾರಿಗಳು ಬಹಿರಂಗಪಡಿಸಿಲ್ಲ.
ಆಗಸ್ಟ್ 2016 ರಲ್ಲಿ45 ವರ್ಷದ ಬಿ ರಾಮಕೃಷ್ಣ ರೆಡ್ಡಿ ಎಂಬ ಎಸ್ಐ ಇದೇ ಠಾಣೆಯಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದರು. ಅವರೂ ಹಿರಿಯ ಅಧಿಕಾರಿಗಳ ವಿರುದ್ದ ಇದೇ ರೀತಿ ಕಿರುಕುಳದ ಆರೋಪ ಮಾಡಿದ್ದರು. ಇದೀಗ ಪ್ರಭಾಕರ್ ರೆಡ್ಡಿಯೂ ಆತ್ಮಹತ್ಯೆ ಮಾಡಿಕೊಂಡಿದ್ದು ಹಿರಿಯ ಅಧಿಕಾರಿಗಳನ್ನು ತನಿಖೆಗೆ ಒಳಪಡಿಸಬೇಕಾಗಿದೆ.