ತೆಲಂಗಾಣ ಸಂಪುಟ ವಿಸ್ತರಣೆ : 6 ಮಂದಿ ಸಚಿವರ ಸೇರ್ಪಡೆ
ಹೈದರಾಬಾದ್, ಸೆಪ್ಟೆಂಬರ್ 9: ತೆಲಂಗಾಣ ಸರ್ಕಾರದಲ್ಲಿ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರ ಸಂಪುಟ ವಿಸ್ತರಣೆ ಭಾನುವಾರ ನಡೆದಿದೆ.
ಕೆಸಿಆರ್ ಪುತ್ರ ಕೆ.ಟಿ. ರಾಮರಾವ್ ಮತ್ತು ಸೋದರಳಿಯ ಟಿ. ಹರೀಶ್ ರಾವ್ ಸೇರಿದಂತೆ ಆರು ಮಂದಿ ಹೊಸ ಮಂತ್ರಿಗಳನ್ನು ತಮ್ಮ ಸಂಪುಟಕ್ಕೆ ಸೇರ್ಪಡೆ ಮಾಡಿಕೊಂಡಿದ್ದಾರೆ.
ರಾಜ ಭವನದಲ್ಲಿ ನಡೆದ ಸಮಾರಂಭದಲ್ಲಿ ತೆಲಂಗಾಣ ರಾಜ್ಯಪಾಲ ತಮಿಳುಸಾಯಿ ಸೌಂದರರಾಜನ್ ಹೊಸ ಮಂತ್ರಿಗಳಿಗೆ ಪ್ರಮಾಣ ವಚನ ಬೋಧಿಸಿದರು.

ತೆಲಂಗಾಣ ರಾಜ್ಯಪಾಲರಾಗಿ ಪ್ರಮಾಣ ವಚನ ಸ್ವೀಕರಿಸಿದ ಕೆಲವೇ ಗಂಟೆಗಳ ನಂತರ ರಾಜ್ಯಪಾಲ ಸೌಂದರರಾಜನ್ ನೂತನ ಸಚಿವರಿಗೆ ಪ್ರಮಾಣ ವಚನ ಬೋಧಿಸಿದ್ದಾರೆ.
ಕೆ.ಸಿ.ಆರ್ ಅವರ ಸಂಪುಟದಲ್ಲಿ ಸೇರ್ಪಡೆಗೊಂಡಿರುವ ಇತರ ನಾಲ್ವರು ಸಚಿವರು ಪಿ. ಸಬಿತಾ ಇಂದ್ರ ರೆಡ್ಡಿ, ಗಂಗುಲ ಕಮಲಕರ್, ಪುವವಾಡ ಅಜಯ್ ಮತ್ತು ಸತ್ಯವತಿ ರಾಥೋಡ್. ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಸಿಎಂ ಚಂದ್ರಶೇಖರ್ ರಾವ್, ಅವರ ಸಚಿವರು, ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್ಎಸ್) ಮುಖಂಡರು, ಸಂಸದರು, ರಾಜ್ಯ ಶಾಸಕರು ಮತ್ತು ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ಸಿಎಂ ಕೆಸಿಆರ್, ತಮ್ಮ ಹೊಸ ಸಂಪುಟದಲ್ಲಿ ಸಬಿತಾ ಇಂದ್ರ ರೆಡ್ಡಿ ಮತ್ತು ಸತ್ಯವತಿ ರಾಥೋಡ್ ಎಂಬ ಇಬ್ಬರು ಮಹಿಳೆಯರನ್ನು ಸೇರಿಸಿಕೊಂಡಿದ್ದಾರೆ.
ಕುತೂಹಲಕಾರಿ ಸಂಗತಿಯೆಂದರೆ, ಮೊದಲ ಅವಧಿಯಲ್ಲಿ ಯಾವುದೇ ಮಹಿಳೆಗೂ ಸಂಪುಟದಲ್ಲಿ ಸ್ಥಾನ ನೀಡದ ಕೆಸಿಆರ್, ಪ್ರತಿಪಕ್ಷಗಳ ಟೀಕೆಗೆ ಗುರಿಯಾಗಿದ್ದರು. ಕೆ.ಟಿ. ರಾಮರಾವ್ ಮತ್ತು ಹರೀಶ್ ರಾವ್ ಸೇರಿದಂತೆ ಹೊಸದಾಗಿ ಸೇರ್ಪಡೆಗೊಂಡ ಮೂವರು ಸಚಿವರು ಈ ಹಿಂದೆ ಸಚಿವರಾಗಿ ಸೇವೆ ಸಲ್ಲಿಸಿದ್ದರು.
ಆರು ಹೊಸ ಮಂತ್ರಿಗಳ ಸೇರ್ಪಡೆಯೊಂದಿಗೆ ತೆಲಂಗಾಣ ಸಂಪುಟ ಸಚಿವರ ಸಂಖ್ಯೆ 18 ಕ್ಕೆ ಏರಿದೆ. 2018ರ ಡಿಸೆಂಬರ್ 13 ರಂದು ಚಂದ್ರಶೇಖರ್ ರಾವ್ ಎರಡನೇ ಅವಧಿಗೆ ತೆಲಂಗಾಣ ಮುಖ್ಯಮಂತ್ರಿಯಾಗಿ ಆಗಿ ಪ್ರಮಾಣ ವಚನ ಸ್ವೀಕರಿಸಿದರು.
ಸಬಿತಾ ಒಂದು ಕಾಲದಲ್ಲಿ ಕಾಂಗ್ರೆಸ್ ಶಾಸಕರಾಗಿದ್ದರು. ಈ ಹಿಂದೆ ಅವಿಭಜಿತ ಆಂಧ್ರಪ್ರದೇಶದಲ್ಲಿ ಸಚಿವರಾಗಿ ಸೇವೆ ಸಲ್ಲಿಸಿದ್ದರು. ಆದರೆ ಕೆಸಿಆರ್ ವಿಧಾನಸಭಾ ಚುನಾವಣೆಯಲ್ಲಿ ಜಯಗಳಿಸಿದ ನಂತರ ಅವರು ಕಾಂಗ್ರೆಸ್ ತೊರೆದು ಟಿಆರ್ಎಸ್ ಸೇರಿದ್ದರು.












Click it and Unblock the Notifications