ಎನ್ ಡಿಎ ಮೈತ್ರಿಕೂಟಕ್ಕೆ ಟಿಡಿಪಿ ವಿಚ್ಛೇದನ, ಸಿಡಿದೆದ್ದ ಚಂದ್ರಬಾಬು ನಾಯ್ಡು
ಹೈದರಾಬಾದ್, ಮಾರ್ಚ್ 16: ಬಹು ದಿನಗಳಿಂದ ತಿಕ್ಕಾಟ ನಡೆಸುತ್ತಿದ್ದ ಎನ್ ಡಿಎ ಮೈತ್ರಿಕೂಟದ ಅಂಗ ಪಕ್ಷ ತೆಲುಗು ದೇಶಂ ಪಕ್ಷ ದೋಸ್ತಿ ಕಡಿದುಕೊಂಡಿದೆ. ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನ ಮಾನ ನೀಡಬೇಕು ಎಂಬ ವಿಚಾರವಾಗಿ ಕೇಂದ್ರದಲ್ಲಿ ಅಧಿಕಾರದಲ್ಲಿ ಇರುವ ಬಿಜೆಪಿ ಹಾಗೂ ತೆಲುಗು ದೇಶಂ ಪಕ್ಷದ ಮಧ್ಯೆ ಬಿರುಕು ದೊಡ್ಡದಾಗುತ್ತಾ ಸಾಗಿತ್ತು.
ಕೇಂದ್ರ ಸಂಪುಟದಲ್ಲಿದ್ದ ಟಿಡಿಪಿ ಸಂಸದರು ತಮ್ಮ ಸಚಿವ ಸ್ಥಾನಗಳಿಗೆ ಇತ್ತೀಚೆಗಷ್ಟೇ ರಾಜೀನಾಮೆ ನೀಡಿದ್ದರು. ಕೇವಲ ಮೈತ್ರಿಯಿಂದ ಹೊರಬಂದಿದ್ದಷ್ಟೇ ಅಲ್ಲ, ನರೇಂದ್ರ ಮೋದಿ ಸರಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಬೇಕು ಎಂಬ ವಿಪಕ್ಷಗಳ ನಿರ್ಧಾರಕ್ಕೆ ಸಹಮತ ವ್ಯಕ್ತಪಡಿಸಿದ್ದಾರೆ ಟಿಡಿಪಿ ರಾಷ್ಟ್ರೀಯ ಅಧ್ಯಕ್ಷ ಚಂದ್ರಬಾಬು.
ಕೇಂದ್ರ ಸರಕಾರವನ್ನು ಕಟು ಶಬ್ದಗಳಲ್ಲಿ ಟೀಕಿಸಿದ ಚಂದ್ರಬಾಬು ನಾಯ್ಡು
ಪಕ್ಷದ ಪಾಲಿಟ್ ಬ್ಯುರೋ ಸದಸ್ಯರ ಜತೆಗೆ ಈ ನಿರ್ಧಾರದ ಬಗ್ಗೆ ಚರ್ಚಿಸಿದ ಆಂಧ್ರ ಮುಖ್ಯಮಂತ್ರಿ ನಾಯ್ಡು, ಪಕ್ಷದ ತೀರ್ಮಾನದ ಬಗ್ಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರಿಗೆ ಪತ್ರ ಕೂಡ ಬರೆದಿದ್ದಾರೆ.
"ಅನುಭವಿ ನಾಯಕರಾದ ಚಂದ್ರಬಾಬು ನಾಯ್ಡು ತೆಗೆದುಕೊಂಡ ನಿರ್ಧಾರಕ್ಕೆ ಪಾಲಿಟ್ ಬ್ಯುರೋ ಸದಸ್ಯರು ಒಮ್ಮತದಿಂದ ಒಪ್ಪಿದ್ದಾರೆ. ವಿವಿಧ ಪಕ್ಷಗಳಿಗೆ ಮೋದಿ ಸರಕಾರದ ವಿರುದ್ಧ ಅಸಮಾಧಾನವಿದೆ. ಅವರು ಅವಿಶ್ವಾಸ ನಿರ್ಣಯ ಬೆಂಬಲಿಸುತ್ತಾರೆ" ಎಂದು ಆಂಧ್ರ ಸಚಿವ ಜವಾಹರ್ ರೆಡ್ಡಿ ತಿಳಿಸಿದ್ದಾರೆ.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ
ವಿವಿಧ ಪಕ್ಷಗಳ ಜತೆ ಈಗಾಗಲೇ ಚಂದ್ರಬಾಬು ನಾಯ್ಡು ಸಂಪರ್ಕದಲ್ಲಿದ್ದಾರೆ ಎಂದು ಮೂಲಗಳು ತಿಳಿಸಿವೆ. "ಟಿಡಿಪಿಯ ಈ ನಿರ್ಧಾರ ಬಿಜೆಪಿ ಪಾಲಿಗೆ ದೊಡ್ಡ ಹೊಡೆತವಾಗಲಿದೆ" ಎಂದು ರಾಜಕೀಯ ವಿಶ್ಲೇಷಕ ಸಿ. ನರಸಿಂಹ ರಾವ್ ಅಭಿಪ್ರಾಯ ಪಟ್ಟಿದ್ದಾರೆ. ಟಿಡಿಪಿ ನಿರ್ಧಾರದ ಬಗ್ಗೆ ಬಿಜೆಪಿ ಪಾಳಯದಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.