ಸಮೋಸ ಮಾರುತ್ತಿದ್ದವನ ಮಗ ದಕ್ಷಿಣ ಭಾರತ ಜೆಇಇ ಪರೀಕ್ಷೆಯಲ್ಲಿ ಟಾಪರ್!
ಊರೆಲ್ಲಾ ಅಲೆದು ಸಮೋಸ ಮಾರಿಬಂದ ಹಣದಲ್ಲಿ ಜೀವನ ಸಾಗಿಸುತ್ತಿರುವ ಕುಟುಂಬದಲ್ಲಿ ತಾಂಡವವಾಡುತ್ತಿರುವ ಬಡನತ ಮಧ್ಯೆಯೂ ಚೆನ್ನಾಗಿ ಓದಿ, ವಿವಿಧ ಪ್ರವೇಶ ಪರೀಕ್ಷೆಗಳಲ್ಲಿ ಮೊದಲಿಗನಾಗಿ ಹೊರಹೊಮ್ಮಿದ ಮೋಹನ್ ನ ಸಾಧನೆ ನಿಜಕ್ಕೂ ಶ್ಲಾಘನೀಯ.
ಹೈದರಾಬಾದ್, ಮೇ 23: ಸಾಧನೆಯ ಹಾದಿಯಲ್ಲಿ ಬರುವ ಕಷ್ಟಗಳನ್ನು ಎದುರಿಸಿ ನಿಲ್ಲಲು ಸಿದ್ಧವಾದರೆ, ಗುರಿ ಮುಟ್ಟುವುದು ಕಷ್ಟವೇನಲ್ಲ ಎಂಬ ವಿಶ್ವ ಮಾನ್ಯ ಮಾತನ್ನು ಆಂಧ್ರಪ್ರದೇಶದ ಬಾಲಕನೊಬ್ಬ ಸಾಧಿಸಿ ತೋರಿಸಿದ್ದಾನೆ.
ಆ ಹುಡುಗನ ಹೆಸರು ವಿ. ಮೋಹನ್ ಅಭ್ಯಾಸ್. ಆಂಧ್ರಪ್ರದೇಶದ ಹೈದರಾಬಾದ್ ನ ಬಳಿಯಲ್ಲೇ ಇರುವ ಕುಟ್ಲಪಲ್ಲಿ ಈ ಹುಡುಗ ಇದೇ ತಿಂಗಳು ಪ್ರಕಟಗೊಂಡ ಆ ರಾಜ್ಯದ ಮೆಡಿಕಲ್ ಹಾಗೂ ಇಂಜಿನಿಯರಿಂಗ್ ಪ್ರವೇಶ ಪರೀಕ್ಷೆಯಲ್ಲಿ ಮೊದಲ ಶ್ರೇಯಾಂಕ ಪಡೆದಿದ್ದಾನೆ.

ಅಷ್ಟೇ ಅಲ್ಲ, ಆಲ್ ಇಂಡಿಯಾ ಮೆಡಿಕಲ್ ಪ್ರವೇಶ ಪರೀಕ್ಷೆಯಲ್ಲಿ ಆರನೇ ಶ್ರೇಯಾಂಕ ಹಾಗೂ ದಕ್ಷಿಣ ಭಾರತ ಜೆಇಇ ಪರೀಕ್ಷೆಯಲ್ಲಿ ಮೊದಲ ಶ್ರೇಯಾಂಕ ಪಡೆದ ಹಿರಿಮೆ ತನ್ನದಾಗಿಸಿಕೊಂಡಿದ್ದಾನೆ.
ಕುಟ್ಲಪಳ್ಳಿಯ ಪುಟ್ಟದೊಂದು ಹೌಸಿಂಗ್ ಬೋರ್ಡ್ ಮನೆಯಲ್ಲಿ ತಂದೆ, ತಾಯಿಯೊಂದಿಗೆ ಆತನ ವಾಸ. ಮನೆಯಲ್ಲಿ ಭಾರೀ ಬಡತನ.
ಮೋಹನ್ ಅವರ ತಂದೆ ವಿ. ಸುಬ್ಬಾರಾವ್, ಬಸ್ ಸ್ಟ್ಯಾಂಡ್ ಮುಂತಾದೆಡೆ ಸಮೋಸ ಮಾರುತ್ತಾರೆ. ತಮ್ಮ ಸೈಕಲ್ಲಿನ ಹಿಂಬದಿಯ ಕ್ಯಾರಿಯರ್ ನಲ್ಲಿ ಸಮೋಸ ತುಂಬಿದ ಪುಟ್ಟ ಪೆಟ್ಟಿಗೆಯನ್ನಿಟ್ಟುಕೊಂಡು ಊರೆಲ್ಲಾ ಅಲೆದು ಸಮೋಸ ಮಾರುತ್ತಾರೆ.
ಅದರಲ್ಲಿ ಬಂದ ಹಣವೇ ಇವರ ಕುಟುಂಬದ ಜೀವನ ನಿರ್ವಹಣೆಗೆ ಇರುವ ಮೂಲ ಆಧಾರ. ಈ ಹಣದಲ್ಲಿ ಆ ಹುಡುಗನಿಗೆ ಟ್ಯೂಷನ್ ಕೊಡಿಸುವುದು ಹಾಗಿರಲಿ, ಸರಿಯಾಗಿ ಪುಸ್ತಕ, ಯೂನಿಫಾರ್ಮ್ ಗಳನ್ನೂ ಕೊಡಿಸಲೂ ಆಗದು. ಆದರೆ, ಅಂಥದ್ದರಲ್ಲೇ ಆ ಹುಡುಗ ಇಂದು ವಿವಿಧ ಪ್ರವೇಶ ಪರೀಕ್ಷೆಗಳಲ್ಲಿ ಮೊದಲಿಗನಾಗಿ ಹೊರಹೊಮ್ಮಿದ್ದಾನೆಂದರೆ ಆತನ ಸಾಧನೆಯನ್ನು ಮೆಚ್ಚದೇ ಬೇರೆ ದಾರಿಯಿಲ್ಲ.
ತನ್ನ ಹೆಸರಲ್ಲೇ ಅಭ್ಯಾಸ್ ಎಂಬ ಪದ ಇಟ್ಟುಕೊಂಡಿರುವ ಮೋಹನ್, ಸತತ ಅಭ್ಯಾಸ, ಪರಿಶ್ರಮದಿಂದ ಈ ಗುರಿ ಮುಟ್ಟಿದ್ದಾನೆ.
ಚೆನ್ನೈನಲ್ಲಿರುವ ಐಐಟಿಯಲ್ಲಿ ಇಂಜಿನಿಯರಿಂಗ್ ಓದಬೇಕೆನ್ನುವ ಛಲ ಈತನಿಗಿದೆ. ಭೌತ ಶಾಸ್ತ್ರದಲ್ಲಿ ಸಂಶೋಧನೆ ಮಾಡುವ ಹಂಬಲವಿದೆ ಎನ್ನುತ್ತಾನೆ ಈತ. ಈ ಬಾಲಕನಿಗೆೊಂದು ಗುಡ್ ಲಕ್ ಹೇಳೋಣವೇ?












Click it and Unblock the Notifications