ಹೈದರಾಬಾದಿನ ಬಸ್ ದುರಂತದ ಚಿತ್ರಗಳು
ಬೆಂಗಳೂರು, ಅ.30 : ಬೆಂಗಳೂರಿನಿಂದ ಹೈದರಾಬಾದಿಗೆ ತೆರಳುತ್ತಿದ್ದ ಜಬ್ಬಾರ್ ಟ್ರಾವೆಲ್ಸ್ ಸಂಸ್ಥೆಯ ಬಸ್ ಆಂಧ್ರ ಪ್ರದೇಶದ ಮೆಹಬೂಬ ನಗರದ ಸಮೀಪ ಬುಧವಾರ ಮುಂಜಾನೆ ಅಪಘಾತಕ್ಕೀಡಾಗಿ 44 ಪ್ರಯಾಣಿಕರು ಸಜೀವ ದಹನರಾಗಿರುವ ಬಗ್ಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ.
ಮೃತರ ಪಾರ್ಥಿವ ಶರೀರಗಳನ್ನು ರಾಜ್ಯಕ್ಕೆ ತರಲು ಮೃತರ ಕುಟುಂಬಗಳಿಗೆ ಸ್ಥಳೀಯವಾಗಿ ನೆರವು ಒದಗಿಸಲು ರಾಯಚೂರು ಜಿಲ್ಲಾಧಿಕಾರಿ ಎಸ್. ಎನ್. ನಾಗರಾಜ್ ಅವರನ್ನು ಘಟನಾ ಸ್ಥಳಕ್ಕೆ ತೆರಳುವಂತೆ ಈಗಾಗಲೇ ಸೂಚಿಸಲಾಗಿದೆ. ಅಲ್ಲದೆ, ರಾಯಚೂರು, ಜಿಲ್ಲಾಧಿಕಾರಿ, ಜಿಲ್ಲಾ ರಕ್ಷಣಾಧಿಕಾರಿ ಘಟನಾ ಸ್ಥಳದಲ್ಲಿ ವರದಿ ಮಾಡಿಕೊಂಡು ಈಗಾಗಲೇ ಕಾರ್ಯ ಪ್ರವೃತ್ತರಾಗಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಮೃತರ ಬಂಧು-ಮಿತ್ರರಿಗೆ ಮೃತರ ಅಗಲಿಕೆಯ ಶೋಕ ಭರಿಸುವ ಶಕ್ತಿಯನ್ನು ಕರುಣಿಸಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ಎಂದು ಮುಖ್ಯಮಂತ್ರಿಗಳು ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.
ಖಾಸಗಿ ವೋಲ್ವೋ ಬಸ್ ದುರಂತಕ್ಕೆವಿಧಾನಸಭೆ ಪ್ರತಿಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ, ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ, ಪ್ರಧಾನಿ ಮನಮೋಹನ್ ಸಿಂಗ್ ಸೇರಿದಂತೆ ಬಹುತೇಕ ನಾಯಕರು ಕಂಬನಿ ಮಿಡಿದಿದ್ದಾರೆ. ಘಟನಾ ಸ್ಥಳದಲ್ಲಿ ಮೂಕ ಪ್ರೇಕ್ಷಕರಾಗಿದ್ದ ಪಾಲೆಂ ಗ್ರಾಮಸ್ಥರಂತೂ ತಮ್ಮ ಆಪ್ತರನ್ನು ಕಳೆದುಕೊಂಡಂತೆ ಗೋಳಿಟ್ಟಿದ್ದಾರೆ. ಈ ದುರಂತದ ಚಿತ್ರಗಳು, ಪ್ರತಿಕ್ರಿಯೆಗಳನ್ನು ಮುಂದೆ ಓದಿ

ಬೆಂಕಿಯ ನರ್ತನ
ಮೆಹಬೂಬ್ ನಗರ ಜಿಲ್ಲೆಯ ಕೊತ್ತಕೋಟ ಮಂಡಲ್ ವ್ಯಾಪ್ತಿಯ ಪಾಲೆಂ ಗ್ರಾಮದ ಬಳಿ ಇಂದು ಮುಂಜಾನೆ ಸಂಭವಿಸಿದ ವೋಲ್ವೋ ಬಸ್ ದುರಂತದಲ್ಲಿ 44ಕ್ಕೂ ಅಧಿಕ ಮಂದಿ ಸುಟ್ಟು ಕರಕಲಾಗಿದ್ದಾರೆ.

ಎಚ್ ಡಿ ಕುಮಾರಸ್ವಾಮಿ
ಘಟನೆಯಲ್ಲಿ ಮೃತಪಟ್ಟ ಕುಟುಂಬಗಳಿಗೆ ಸರ್ಕಾರವೇ 10 ಲಕ್ಷ ರೂ. ಪರಿಹಾರ ಮತ್ತು ಗಾಯಾಳುಗಳಿಗೆ ಸೂಕ್ತ ಪರಿಹಾರ ನೀಡಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಕುಮಾರಸ್ವಾಮಿ ಮನವಿ ಮಾಡಿದ್ದಾರೆ. ಖಾಸಗಿ ಬಸ್ ಆಗಿದ್ದರೂ ಸರ್ಕಾರ ಪರಿಹಾರ ನೀಡಲು ಹಿಂದೇಟು ಹಾಕಬಾರದು. ಇದನ್ನು ಮಾನವೀಯತೆಯ ದೃಷ್ಟಿಯಿಂದ ಪರಿಗಣಿಸಿ ವಿಶೇಷ ಪರಿಹಾರ ಹಾಗೂ ಸೂಕ್ತ ವೈದ್ಯಕೀಯ ಚಿಕಿತ್ಸೆ ಕೊಡಬೇಕು. ಮೃತಪಟ್ಟ ಕುಟುಂಬಗಳಿಗೆ ಕುಮಾರಸ್ವಾಮಿಯವರು ಸಾಂತ್ವನ ಹೇಳಿದ್ದಾರೆ.
ಡಿಎನ್ಎ ಅಧಿಕಾರಿಗಳು ಮತ್ತು ಇತರೆ ಅಧಿಕಾರಿಗಳು ಕೂಡಲೇ ಸಾವನ್ನಪ್ಪಿರುವ ಪ್ರಯಾಣಿಕರ ವಿವರವನ್ನು ಕಲೆ ಹಾಕಬೇಕು. ಸರ್ಕಾರ ಈ ವಿಷಯದಲ್ಲಿ ತುರ್ತು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ಡಿಎನ್ ಎ ಪರೀಕ್ಷೆ
ದೇಹಗಳು ಗುರುತಿಸಲಾರದಷ್ಟು ಬೆಂದು ಹೋಗಿರುವುದರಿಂದ ಅಧಿಕಾರಿಗಳು ಮೃತ ದೇಹಗಳನ್ನು ಸಂಬಂಧಿಕರ ವಶಕ್ಕೆ ನೀಡಲು ಹರಸಾಹಸ ಪಡುತ್ತಿದ್ದಾರೆ. ಪ್ರಸಕ್ತ ದುರಂತದ ಸ್ಥಳದಲ್ಲಿ ಅಳಿದುಳಿದ ಬಸ್ ನಿಂದ ಮೃತ ಶರೀರಗಳನ್ನು ತೆರವುಗೊಳಿಸುವ ಕಾರ್ಯಾಚರಣೆ ಭರದಿಂದ ನಡೆದಿದೆ.
ಒಂದೊಂದೇ ಮೃತ ಶರೀರವನ್ನು ಡಿಎನ್ಎ ಪರೀಕ್ಷೆಗಾಗಿ ಹೈದ್ರಾಬಾದ್ಗೆ ಕಳುಹಿಸಲು ಕ್ರಮ ಕೈಗೊಳ್ಳಲಾಗಿದೆ. ಮೃತ ದೇಹದ ಗುರುತು ಖಚಿತಪಟ್ಟ ಬಳಿಕ ಅವುಗಳನ್ನು ಬಂಧುಗಳ ವಶಕ್ಕೆ ನೀಡುವ ವ್ಯವಸ್ಥೆ ಮಾಡಲಾಗುವುದು ಎಂದು ಮೆಹಬೂಬ್ನಗರ ಜಿಲ್ಲಾಧಿಕಾರಿ ಎಂ.ಗಿರಿಜಾಶಂಕರ್ ತಿಳಿಸಿದ್ದಾರೆ.

ಸಂಬಂಧಿಕರ ರೋದನ
ಬಸ್ ನಲ್ಲಿ ಬೆಂದು ಹೋಗಿರುವ ಪ್ರಯಾಣಿಕರಲ್ಲಿ ಕೆಲವರ ಸಂಬಂಧಿಕರು ದುರ್ಘಟನೆ ನಡೆದ ಸ್ಥಳಕ್ಕೆ ಆಗಮಿಸಿದ್ದು, ಅವರ ಆಕ್ರಂದನ ಮುಗಿಲು ಮುಟ್ಟಿದೆ. ದೇಹಗಳನ್ನು ಗುರುತಿಸಲು ಸಾಧ್ಯವಾಗದ ಕಾರಣ ಮೃತರ ಬಂಧುಗಳು ರೋದಿಸುತ್ತಿದ್ದಾರೆ. ಆಸ್ಪತ್ರೆಯಿಂದ ಡಿಎನ್ ಎ ಪರೀಕ್ಷೆ ವರದಿ ಬರುವವರೆಗೂ ಯಾರು, ಯಾರ ಬಂಧುಗಳು ಎಂಬುದು ಬಿಡಿಸಲಾಗದ ಸಮಸ್ಯೆಯಾಗಿದ್ದು, ತಮ್ಮ ಆತ್ಮೀಯ ಸಂಬಂಧಿಗಳನ್ನು ಕಳೆದುಕೊಂಡವರ ದುಃಖ ಹೇಳತೀರದಾಗಿದೆ. ಫೋರೆನ್ಸಿಕ್ ತಜ್ಞರು, ಹಿರಿಯ ಅಧಿಕಾರಿಗಳು ಮೃತ ದೇಹ ತೆರವು ಕಾರ್ಯಾಚರಣೆಯಲ್ಲಿ ನಿರತರಾಗಿದ್ದಾರೆ

ಕರ್ನಾಟಕದ ಅಧಿಕಾರಿಗಳು
ಬಸ್ ದುರಂತ ನಡೆದ ಘಟನಾ ಸ್ಥಳಕ್ಕೆ ರಾಜ್ಯದಿಂದ ಹಿರಿಯ ಅಧಿಕಾರಿಗಳು ದೌಡಾಯಿಸಿದ್ದಾರೆ.
ರಾಯಚೂರು ಜಿಲ್ಲಾಧಿಕಾರಿ ಗಿರಿಜಾ ಶಂಕರ್ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಾಗೇಂದ್ರ ಕುಮಾರ್ ಸೇರಿದಂತೆ ಕೆಲವು ಅಧಿಕಾರಿಗಳನ್ನು ಮೆಹಬೂಬ್ ನಗರಕ್ಕೆ ತೆರಳಿದ್ದಾರೆ. ಅಧಿಕಾರಿಗಳ ಜತೆ ವಿಧಿ-ವಿಜ್ಞಾನಾಲಯದ ಕೆಲವು ಹಿರಿಯ ಆಧಿಕಾರಿಗಳು ಕೂಡ ದೌಡಾಯಿಸಿದ್ದಾರೆ.ಕೇವಲ 15 ದೇಹಗಳನ್ನು ಮಾತ್ರ ಪತ್ತೆ ಮಾಡಲು ಸಾಧ್ಯವಾಗಿದೆ ಎಂದು ತಿಳಿದುಬಂದಿದೆ. ಉಳಿದ 25 ದೇಹಗಳು ಗುರುತು ಸಿಗಲಾರದಷ್ಟು ಕರಕಲಾಗಿವೆ. ಪ್ರಯಾಣಿಕರ ಗುರುತಿನ ಚೀಟಿ ಆಧಾರದ ಮೇಲೆ ದೇಹಗಳನ್ನು ವಿಧಿ-ವಿಜ್ಞಾನಾಲಯದ ಅಧಿಕಾರಿಗಳು ಪತ್ತೆ ಮಾಡುತ್ತಿದ್ದಾರೆ ಎಂದು ಡಿಸಿ ಗಿರಿಜಾ ಶಂಕರ್ ಹೇಳಿದ್ದಾರೆ. ಸಹಾಯವಾಣಿ: 9449600100 ನೀಡಲಾಗಿದೆ.

ವಿಧಿ-ವಿಜ್ಞಾನಾಲಯ ತಂಡ ಸಹಾಯಕ್ಕೆ
ಬಸ್ ನ ಡೀಸೆಲ್ ಟ್ಯಾಂಕ್ ಸ್ಫೋಟಗೊಳ್ಳುತ್ತಿದ್ದಂತೆ ನಿದ್ರಾಸ್ಥಿತಿಯಲ್ಲಿದ್ದ ಪ್ರಯಾಣಿಕರು ಹೊರಬರಲು ಸಾಧ್ಯವಾಗಲಿಲ್ಲ. ಇದರಿಂದ ಸೀಟಿನಲ್ಲಿ ಕುಳಿತಿದ್ದ ಪ್ರಯಾಣಿಕರು ಸುಟ್ಟು ಭಸ್ಮವಾಗಿದ್ದಾರೆ. ವಿಧಿ-ವಿಜ್ಞಾನಾಲಯದಿಂದ ಮಾತ್ರ ಇವರನ್ನು ಪತ್ತೆ ಹಚ್ಚಲು ಸಾಧ್ಯ ಎಂದು ಆಧಿಕಾರಿಗಳು ಖಚಿತಪಡಿಸಿದ್ದಾರೆ.

ಕರ್ನಾಟಕದ ಪ್ರತಿನಿಧಿ ಹೇಳಿಕೆ
ನಮ್ಮ ಇಲಾಖೆಯ ಹಿರಿಯ ಅಧಿಕಾರಿಗಳು ಈಗಾಗಲೇ ಮೆಹಬೂಬ್ ನಗರಕ್ಕೆ ತೆರಳಿದ್ದು, ಅಪಘಾತದಲ್ಲಿ ಮೃತಪಟ್ಟ ರಾಜ್ಯದವರನ್ನು ಪತ್ತೆ ಮಾಡುವ ಕೆಲಸದಲ್ಲಿ ನಿರತರಾಗಿದ್ದಾರೆ.
ಆಂಧ್ರ ಪ್ರದೇಶದ ಅಧಿಕಾರಿಗಳ ಜತೆ ನಮ್ಮ ಅಧಿಕಾರಿಗಳು ಕೈ ಜೋಡಿಸಿ ಮೃತಪಟ್ಟವರ ದೇಹಗಳನ್ನು ರಾಜ್ಯಕ್ಕೆ ಕರೆತರಲು ವ್ಯವಸ್ಥೆ ಕಲ್ಪಿಸಲಾಗಿದ್ದು, ಗಾಯಾಳುಗಳಿಗೆ ಮೆಹಬೂಬ್ ನಗರ ಸೇರಿದಂತೆ ವಿವಿಧೆಡೆ ಸೂಕ್ತ ವೈದ್ಯಕೀಯ ವ್ಯವಸ್ಥೆ ಕಲ್ಪಿಸಲಾಗಿದೆ.
ಮೃತಪಟ್ಟ ಕುಟುಂಬಗಳಿಗೆ ಪರಿಹಾರ ನೀಡುವ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳುವುದಾಗಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.

ಭೀಕರ ದುರಂತ
ಮೆಹಬೂಬ್ ನಗರ ಜಿಲ್ಲೆಯ ಕೊತ್ತಕೋಟ ಮಂಡಲ್ ವ್ಯಾಪ್ತಿಯ ಪಾಲೆಂ ಗ್ರಾಮದ ಬಳಿ ಸಂಭವಿಸಿದ ಭೀಕರ ದುರಂತದಲ್ಲಿ ಸಾವನ್ನಪ್ಪಿದವರು

ಪರಿಹಾರ ಕಾರ್ಯ
ಡಿಎನ್ಎ ಅಧಿಕಾರಿಗಳು ಮತ್ತು ಇತರೆ ಅಧಿಕಾರಿಗಳು ಕೂಡಲೇ ಸಾವನ್ನಪ್ಪಿರುವ ಪ್ರಯಾಣಿಕರ ವಿವರವನ್ನು ಕಲೆ ಹಾಕುತ್ತಿದ್ದಾರೆ

ಕಾರ್ಯಾಚರಣೆ
ದುರಂತದ ಸ್ಥಳದಲ್ಲಿ ಅಳಿದುಳಿದ ಬಸ್ ನಿಂದ ಮೃತ ಶರೀರಗಳನ್ನು ತೆರವುಗೊಳಿಸುವ ಕಾರ್ಯಾಚರಣೆ ಭರದಿಂದ ನಡೆದಿದೆ. ಪೊಲೀಸರು, ಅಧಿಕಾರಿಗಳು, ಅಗ್ನಿಶಾಮಕ ದಳದ ಸಿಬ್ಬಂದಿಯವರು ಸ್ಥಳೀಯರ ಸಹಕಾರದೊಂದಿಗೆ ಕಾರ್ಯಾಚರಣೆ ನಡೆಸಿದ್ದಾರೆ.

ಪ್ರತಿಭಟನೆ
ಬಸ್ ದುರಂತದಲ್ಲಿ ಮೃತಪಟ್ಟವರ ಶವ ವಿವರ ತಿಳಿಯದೆ ಸಂಬಂಧಿಕರು ರೋದಿಸುತ್ತಿದ್ದರೆ, ಬಿಜೆಪಿ ಪ್ರತಿಭಟನೆ ನಡೆಸಿ ಪ್ರಯಾಣಿಕರ ಸುರಕ್ಷತೆ ಬಗ್ಗೆ ರಾಜ್ಯ ಸರ್ಕಾರ ಏನು ಮಾಡುತ್ತಿದೆ ಎಂದು ಪ್ರಶ್ನಿಸಿದೆ.












Click it and Unblock the Notifications