ಚಂದ್ರಬಾಬು ನಾಯ್ಡುಗೆ ಶಾಕ್: ಜಗನ್ ಪಾಳೆಯಕ್ಕೆ ಎನ್ಟಿಆರ್ ಮೊಮ್ಮಗ
ಹೈದರಾಬಾದ್, ಜನವರಿ 28: ಮಹಾಮೈತ್ರಿಕೂಟದ ಜೊತೆ ಕೈಜೋಡಿಸಿ ಪ್ರಧಾನಿ ಹುದ್ದೆಯ ಆಕಾಂಕ್ಷಿ ಆಗಿರುವ ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ಅವರಿಗೆ ರಾಜ್ಯದಲ್ಲಿ ಸಂಬಂಧಿಕರಿಂದಲೇ ಆಘಾತ ಎದುರಾಗಿದೆ.
ಚಂದ್ರಬಾಬು ನಾಯ್ಡು ಅವರ ಭಾವ ದಗ್ಗುಬಾಟಿ ವೆಂಕಟೇಶ್ವರ ರಾವ್ ಮತ್ತು ಅವರ ಮಗ ದಗ್ಗುಬಾಟಿ ಹಿತೇಶ್ ಚೆಂಚೂರಾಮ್ ವೈಎಸ್ಆರ್ ಕಾಂಗ್ರೆಸ್ ಅಧ್ಯಕ್ಷ ವೈಎಸ್ ಜಗನ್ ಮೋಹನ್ ರೆಡ್ಡಿ ಅವರನ್ನು ಭಾನುವಾರ ಭೇಟಿ ಮಾಡಿದ್ದು, ಪಕ್ಷವನ್ನು ಸೇರಿಕೊಳ್ಳುವ ಆಸಕ್ತಿ ವ್ಯಕ್ತಪಡಿಸಿದ್ದಾರೆ.
ತೆಲಂಗಾಣದಲ್ಲಿ ಕಾಂಗ್ರೆಸ್ ಗೆ ಭಾರೀ ಆಘಾತ,TRS ತೆಕ್ಕೆಗೆ ಕಾಂಗ್ರೆಸ್ ನಾಯಕ
ತೆಲುಗು ದೇಶಂ ಪಕ್ಷದ (ಟಿಡಿಪಿ) ಸಂಸ್ಥಾಪಕ, ಆಂಧ್ರಪ್ರದೇಶ ಮಾಜಿ ಮುಖ್ಯಮಂತ್ರಿ ಎನ್.ಟಿ. ರಾಮರಾವ್ ಅವರ ಹಿರಿ ಅಳಿಯನಾಗಿರುವ ವೆಂಕಟೇಶ್ವರ ರಾವ್, ಕಾಂಗ್ರೆಸ್ನ ಮಾಜಿ ಮುಖಂಡರಾಗಿದ್ದು, 2014ರಿಂದ ರಾಜಕೀಯದಲ್ಲಿ ಸಕ್ರಿಯರಾಗಿರಲಿಲ್ಲ. ವೆಂಕಟೇಶ್ವರ ರಾವ್ ಅವರ ಪತ್ನಿ ಡಿ. ಪುರಂದೇಶ್ವರಿ ಬಿಜೆಪಿಯಲ್ಲಿದ್ದಾರೆ.
ವೆಂಕಟೇಶ್ವರ ರಾವ್ ಮತ್ತು ನಾಯ್ಡು ಅವರ ವೈರತ್ವ ಹೊಸತೇನಲ್ಲ. ಆದರೆ, ನಾಯ್ಡು ಅವರ ಬದ್ಧ ವಿರೋಧಿ ಪಕ್ಷವಾಗಿರುವ ವೈಎಸ್ಆರ್ ಕಾಂಗ್ರೆಸ್ಗೆ ಅವರ ಸೇರ್ಪಡೆ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗಳಲ್ಲಿ ಜಗನ್ ಬಳಗವನ್ನು ಬಲಗೊಳಿಸುವ ನಿರೀಕ್ಷೆಯಿದ್ದು, ಪೈಪೋಟಿಯನ್ನು ಇನ್ನಷ್ಟು ಕುತೂಹಲಕಾರಿಯಾಗಿಸಿದೆ.
ಪರ್ಚೂರು ಕ್ಷೇತ್ರದಿಂದ ಸ್ಪರ್ಧೆ?
ಜಗನ್ ಮೋಹನ್ ರೆಡ್ಡಿ ಅವರನ್ನು ಹೈದರಾಬಾದ್ನಲ್ಲಿರುವ ಅವರ ನಿವಾಸ ಲೋಟಸ್ ಪಾಂಡ್ನಲ್ಲಿ ಭೇಟಿ ಮಾಡಿದರು. ವೆಂಕಟೇಶ್ವರ ರಾವ್ ಅವರ ಮಗ, ಎನ್ಟಿಆರ್ ಅವರ ಮೊಮ್ಮಗ ಹಿತೇಶ್ ಚೆಂಚುರಾಮ್ ವೈಎಸ್ಆರ್ ಕಾಂಗ್ರೆಸ್ನಿಂದ ಮುಂಬರುವ ಆಂಧ್ರಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಪರ್ಚೂರು ಕ್ಷೇತ್ರದಿಂದ ಸ್ಪರ್ಧಿಸಲು ಬಯಸಿದ್ದಾರೆ.
ಈ ಬಗ್ಗೆ ಶೀಘ್ರದಲ್ಲಿಯೇ ಅಧಿಕೃತವಾಗಿ ಘೋಷಣೆ ಮಾಡಲಾಗುವುದು ಎಂದು ವೆಂಕಟೇಶ್ವರ ರಾವ್ ತಿಳಿಸಿದ್ದಾರೆ.
ಚಂದ್ರಬಾಬು ನಾಯ್ಡು ಅವರ ಪರಮ ವೈರಿ ಎಂದೇ ಪರಿಚಿತರಾಗಿರುವ ವೆಂಕಟೇಶ್ವರ ರಾವ್, ಮಗನನ್ನು ವೈಎಸ್ಆರ್ ಪಕ್ಷದ ಅಭ್ಯರ್ಥಿಯನ್ನಾಗಿ ಮಾಡುವ ಮೂಲಕ ಚಂದ್ರಬಾಬು ನಾಯ್ಡುಗೆ ಪೈಪೋಟಿ ನೀಡಲು ಮುಂದಾಗಿದ್ದಾರೆ.
|
ಎನ್ಟಿಆರ್ ಜೊತೆಗಿದ್ದ ರಾವ್
ಎನ್ಟಿಆರ್ 1983ರಲ್ಲಿ ಟಿಡಿಪಿ ಸ್ಥಾಪನೆ ಮಾಡಿದ ಕೂಡಲೇ ಅಲ್ಲಿಗೆ ಸೇರ್ಪಡೆಯಾಗಿದ್ದರು. ಅದೇ ವರ್ಷ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿ ಗೆದ್ದಿದ್ದ ಅವರು, 1985ರಲ್ಲಿ ಮರು ಆಯ್ಕೆಯಾಗಿದ್ದರು. ಎನ್ಟಿಆರ್ ಸಂಪುಟದಲ್ಲಿ ಸಚಿವರಾಗಿದ್ದರು. 1991ರಲ್ಲಿ ಲೋಕಸಭೆಗೆ ಬಾಪಟ್ಲಾ ಕ್ಷೇತ್ರದಿಂದ ಚುನಾಯಿತರಾಗಿದ್ದರು.
ತೆಲಂಗಾಣದಲ್ಲಿ ಚಿಗುರುತ್ತಲೇ ಇದೆ ಸಂಯುಕ್ತರಂಗದ ಕನಸು!
ಕೈ ಕೊಟ್ಟಿದ್ದ ನಾಯ್ಡು
1995ರಲ್ಲಿ ಆಂಧ್ರಪ್ರದೇಶದಲ್ಲಿ ಟಿಡಿಪಿ ಮರಳಿ ಅಧಿಕಾರಕ್ಕೆ ಬಂದಿತು. ಎನ್ಟಿಆರ್ ವಿರೋಧಿ ವಾತಾವರಣ ಸೃಷ್ಟಿಯಾಗಿದ್ದಾಗ ಅವರ ಮತ್ತೊಬ್ಬ ಅಳಿಯ ಚಂದ್ರಬಾಬು ನಾಯ್ಡು ಅವರ ಪರವಾಗಿ ವೆಂಕಟೇಶ್ವರ ರಾವ್ ನಿಂತಿದ್ದರು. ಆದರೆ, ಚಂದ್ರಬಾಬು ನಾಯ್ಡು ಅವರಿಂದ ಮೂಲೆಗುಂಪಿಗೆ ಒಳಗಾದಾಗ ಮರಳಿ ಎನ್ಟಿಆರ್ ಕ್ಯಾಂಪ್ಗೆ ಸೇರಿಕೊಂಡಿದ್ದರು. ಅಲ್ಲಿಂದಲೇ ನಾಯ್ಡು ಮತ್ತು ರಾವ್ ನಡುವೆ ಜಿದ್ದಾಜಿದ್ದಿ ಶುರುವಾಗಿತ್ತು.
ಹೊಸ ಪಕ್ಷದ ಕಸರತ್ತುಗಳು
1996ರಲ್ಲಿ ಎನ್ಟಿಆರ್ ನಿಧನದ ಬಳಿಕ ಅವರ ಎರಡನೆಯ ಪತ್ನಿ ಲಕ್ಷ್ಮಿ ಪಾರ್ವತಿ ಹೊಸ ಪಕ್ಷ ಎನ್ಟಿಆರ್ ಟಿಡಿಪಿ ಸ್ಥಾಪಿಸಿದರು. ಆದರೆ, ಅದು ರಾಜ್ಯ ರಾಜಕಾರಣದಲ್ಲಿ ಯಾವುದೇ ಪರಿಣಾಮ ಬೀರಲಿಲ್ಲ.
1999ರಲ್ಲಿ ವೆಂಕಟೇಶ್ವರ ರಾವ್ ಎನ್ಟಿಆರ್ ಮಗ ಹರಿಕೃಷ್ಣ ಅವರೊಂದಿಗೆ ಸೇರಿ ಅಣ್ಣಾ ಟಿಡಿಪಿ ಸ್ಥಾಪಿಸಿದರು. ಈ ಪಕ್ಷದ ಪ್ರಯತ್ನ ಕೂಡ ನೆಲಕಚ್ಚಿತು. 2004ರಲ್ಲಿ ಅವರು ಪತ್ನಿ ಪುರಂದೇಶ್ವರಿ ಜೊತೆಗೆ ಕಾಂಗ್ರೆಸ್ ಸೇರಿಕೊಂಡರು. ವೆಂಕಟೇಶ್ವರ್ ಪರ್ಚುರ್ ವಿಧಾನಸಭೆ ಕ್ಷೇತ್ರದಿಂದ ಆಯ್ಕೆಯಾದರೆ, ಪುರಂದೇಶ್ವರಿ ಬಾಪಟ್ಲಾ ಲೋಕಸಭೆಯಿಂದ ಚುನಾಯಿತರಾಗಿ ಯುಪಿಎ ಸರ್ಕಾರದಲ್ಲಿ ರಾಜ್ಯ ಖಾತೆ ಸಚಿವೆಯಾಗಿದ್ದರು.
ಆಂಧ್ರ ಪ್ರದೇಶದಲ್ಲಿ ಕಾಂಗ್ರೆಸ್ ಜೊತೆ ಮೈತ್ರಿ ಇಲ್ಲ: ನಾಯ್ಡು ಶಾಕಿಂಗ್ ನಡೆ!
ಪತ್ನಿ ರಾಜಕೀಯ ನಡೆ ತೀರ್ಮಾನವಿಲ್ಲ
2014ರಲ್ಲಿ ಆಂಧ್ರಪ್ರದೇಶ ವಿಭಜನೆಯಾದ ಬಳಿಕ ಪುರಂದೇಶ್ವರಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿಕೊಂಡಿದ್ದರು. ಪ್ರಸ್ತುತ ತಮ್ಮ ಪತ್ನಿ ಪಕ್ಷ ಬದಲಿಸುವ ಯಾವುದೇ ಯೋಚನೆ ಹೊಂದಿಲ್ಲ. ಅವರು ಬಿಜೆಪಿಯಲ್ಲಿಯೇ ಮುಂದುವರಿಯಲಿದ್ದಾರೆ ಎಂದು ವೆಂಕಟೇಶ್ವರ ರಾವ್ ತಿಳಿಸಿದ್ದಾರೆ. ಪಕ್ಷದಲ್ಲಿಯೇ ಉಳಿಯಬಹುದು ಅಥವಾ ರಾಜಕೀಯದಿಂದ ನಿವೃತ್ತಿ ಪಡೆಯಬಹುದು. ಆ ನಿರ್ಧಾರ ಅವರಿಗೇ ಬಿಟ್ಟಿದ್ದು ಎಂದಿದ್ದಾರೆ.