ಅಲ್ಲು ಅರ್ಜುನ್, ರ್ಯಾಪಿಡೋಗೆ ನೋಟಿಸ್: ವೈಯಕ್ತಿಕ ದ್ವೇಷವಿಲ್ಲವೆಂದ ಸಜ್ಜನರ್
ಹೈದರಾಬಾದ್, ನವೆಂಬರ್ 11: ನಟ ಅಲ್ಲು ಅರ್ಜುನ್ ನಟಿಸಿರುವ ಜಾಹೀರಾತಿಗೆ ಸಂಬಂಧಿಸಿದಂತೆ ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ನಿಗಮದ ವ್ಯವಸ್ಥಾಪಕ ನಿರ್ದೇಶಕ ವಿಸಿ ಸಜ್ಜನರ್ ಅವರು ಲೀಗಲ್ ನೋಟಿಸ್ ನೀಡಿದ್ದಾರೆ. ಬೈಕ್ ಟ್ಯಾಕ್ಸಿ ಆ್ಯಪ್ ರ್ಯಾಪಿಡೋ ಸಂಸ್ಥೆ ಜಾಹೀರಾತು ವಿರುದ್ಧ ಸಜ್ಜನರ್ ಕಾನೂನು ಕ್ರಮಕ್ಕೆ ಮುಂದಾಗಿದ್ದು, ಅಲ್ಲು ಅರ್ಜುನ್ಗೆ ನೋಟಿಸ್ ನೀಡಿರುವ ಬಗ್ಗೆ ಪ್ರತಿಕ್ರಿಯಿಸಿ, ''ನನಗೆ ವೈಯಕ್ತಿಕ ದ್ವೇಷವಿಲ್ಲ'' ಎಂದು ಹೇಳಿದ್ದಾರೆ.
ಈ ಬಗ್ಗೆ ಬುಧವಾರ ಯೂಟ್ಯೂಬ್ ವಿಡಿಯೋದಲ್ಲಿ ಸಜ್ಜನರ್ ಅವರು ಮಾತನಾಡಿ, ಯಾರಿಗೂ ಲೀಗಲ್ ನೋಟಿಸ್ ಕಳುಹಿಸಲು ವೈಯಕ್ತಿಕ ದ್ವೇಷ ಹೊಂದಿಲ್ಲ ಎಂದು ಹೇಳಿದ್ದಾರೆ. ಆದರೆ ತಪ್ಪು ಹೇಳಿಕೆಯೊಂದಿಗೆ ಸಾರ್ವಜನಿಕ ಸಾರಿಗೆಯನ್ನು ಹದಗೆಡಿಸುವುದು ಅಥವಾ ತೋರಿಸುವುದನ್ನು TSRTC ಸಹಿಸುವುದಿಲ್ಲ ಎಂದಿದ್ದಾರೆ.
ಖಾಸಗಿ ಸಂಸ್ಥೆಯು (ರ್ಯಾಪಿಡೋ) TSRTC ಅನ್ನು ತಪ್ಪು ಹೇಳಿಕೆಯೊಂದಿಗೆ ತೋರಿಸುವ ಜಾಹೀರಾತನ್ನು ಬಿಡುಗಡೆ ಮಾಡಿದೆ ಎಂದು ಅವರು ಹೇಳಿದರು. ಇದಲ್ಲದೆ, TSRTC ಸೇವೆ ಉತ್ತಮವಾಗಿಲ್ಲ ಎಂದು ಬಿಂಬಿಸುವ ಮೂಲಕ ಅವರು ತಮ್ಮ ಉತ್ಪನ್ನವನ್ನು ಪ್ರಚಾರ ಮಾಡಲು ಪ್ರಯತ್ನಿಸಿದ ರೀತಿ 'ಉತ್ತಮ ವ್ಯಾಪಾರ ನೀತಿ' ಅಲ್ಲ ಎಂದು ಅವರು ಹೇಳಿದರು.
ಈ ಜಾಹೀರಾತಿನಲ್ಲಿ ನಟ ಅಲ್ಲು ಅರ್ಜುನ್ ನಟಿಸಿದ್ದಾರೆ. ಇಂತಹ ಜಾಹೀರಾತುಗಳಲ್ಲಿ ಭಾಗವಾಗುವುದಕ್ಕಿಂತ ಮೊದಲು, TSRTC ದಶಕಗಳಿಂದ ಸಾಮಾನ್ಯ ಜನರ ಸೇವೆಯಲ್ಲಿದೆ. ಬಡವರಿಗೆ ಬೇರೆ ಯಾವುದೇ ಸಾರಿಗೆ ವಿಧಾನಗಳು ಲಭ್ಯವಿಲ್ಲದ ಸ್ಥಳಗಳಿಗೆ ತಲುಪಿದೆ ಎಂಬುದನ್ನು ನೆನಪಿನಲ್ಲಿಡಬೇಕು. ಅಂತಹ ಜಾಹೀರಾತುಗಳಲ್ಲಿ ನಟಿಸುವ ಮೊದಲು ಅವರು ಎರಡು ಬಾರಿ ಯೋಚಿಸಬೇಕು. ಏಕೆಂದರೆ ಅವರು ಸಾರ್ವಜನಿಕ ಅಭಿಪ್ರಾಯವನ್ನು ಪ್ರಭಾವಿಸಬಹುದು. ಇದನ್ನು ಜನರು ಪ್ರಶ್ನೆ ಮಾಡುತ್ತಾರೆ ಎಂದು ಅವರು ಹೇಳಿದರು.
ಕಂಪನಿಯು ತಕ್ಷಣವೇ ಜಾಹೀರಾತನ್ನು ಹಿಂತೆಗೆದುಕೊಳ್ಳುವಂತೆ ನೋಟಿಸ್ಗಳನ್ನು ಕಳುಹಿಸಿದ್ದೇನೆ ಎಂದು ಹೇಳಿದ ಸಜ್ಜನರ್ ಹೇಳಿದ್ದಾರೆ. ' ಖಾಸಗಿ ಸಂಸ್ಥೆ (ರ್ಯಾಪಿಡೋ) ಅವರು ನಮ್ಮ ಭಾವನೆಗಳನ್ನು ಅರ್ಥಮಾಡಿಕೊಳ್ಳುತ್ತಾರೆ ಮತ್ತು ಜಾಹೀರಾತನ್ನು ಹಿಂತೆಗೆದುಕೊಳ್ಳುತ್ತಾರೆ' ಎಂದು ಸಜ್ಜನರ್ ಆಶಿಸಿದ್ದಾರೆ. ವಿಫಲವಾದರೆ TSRTC ಕಾನೂನಿನ ಪ್ರಕಾರ ಮುಂದುವರಿಯುತ್ತದೆ.
Rapido ಗಾಗಿ ಅಲ್ಲು ಅರ್ಜುನ್ ಅವರ ಜಾಹೀರಾತಿನಲ್ಲಿ ನಟಿಸಿದ ನಂತರ ಮಂಗಳವಾರದಂದು ಸಮಸ್ಯೆ ಪ್ರಾರಂಭವಾಯಿತು. ಯೂಟ್ಯೂಬ್ನಲ್ಲಿ ಪ್ರಸಾರವಾಗುತ್ತಿರುವ ಬೈಕ್- ಟ್ಯಾಕ್ಸಿ ಅಪ್ಲಿಕೇಶನ್ ರ್ಯಾಪಿಡೋ ಜಾಹೀರಾತಿನಲ್ಲಿ, ಅಲ್ಲು ಅರ್ಜುನ್ ದೋಸೆ ಮಾರುವ ವ್ಯಕ್ತಿಯಾಗಿ ಕಾಣಿಸಿಕೊಂಡಿದ್ದಾರೆ. ಅದರಲ್ಲಿ ಓರ್ವ ವ್ಯಕ್ತಿಯೊಂದಿಗೆ ಮಾತನಾಡುತ್ತಾ ದೋಸೆ ತಿನ್ನಬೇಕು ಅಂದ್ರೆ ಎರಡೇ ಜಾಗ ಒಂದು ಈ ಗುರು ಹತ್ರ, ಇನ್ನೊಂದು ಯಾವಾಗ್ಲೂ ರಷ್ ಆಗಿರೋ ಆ ಬಸ್ನಲ್ಲಿ ಎಂದಿದ್ದಾರೆ. ಅಲ್ಲದೇ ಆ ಬಸ್ ಹತ್ತುವವರನ್ನು ಕೈಮಾ ಮಾಡಿ ಮಸಾಲೆ ದೋಸೆ ಮಾಡಿ ಇಳಿಸುತ್ತಾರೆ. ಅದಕ್ಕೆ ಸುಮ್ಮನೇ ತೊಂದರೆ ಯಾಕೆ? ರ್ಯಾಪಿಡೋ ಬುಕ್ ಮಾಡಿ, ದೋಸೆ ತಿರುಗಿಸೋ ಅಷ್ಟು ಸುಲಭವಾಗಿ ಅದರಲ್ಲಿ ಹೋಗಬಹುದು ಎಂದಿದ್ದಾರೆ.
ಅವಹೇಳನ ಮಾಡುವುದನ್ನು ಟಿಎಸ್ಆರ್ಟಿಸಿ ಆಡಳಿತ ಅಥವಾ ಪ್ರಯಾಣಿಕರು ಮತ್ತು ನಮ್ಮ ನೌಕರರು ಹಾಗೂ ನಿವೃತ್ತ ನೌಕರರು ಸಹಿಸುವುದಿಲ್ಲ ಎಂದು ಟಿಎಸ್ಆರ್ಟಿಸಿಯ ವ್ಯವಸ್ಥಾಪಕ ನಿರ್ದೇಶಕ ಐಪಿಎಸ್ ವಿಸಿ ಸಜ್ಜನಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಅಲ್ಲು ಅರ್ಜುನ್ ಮತ್ತು ಜಾಹೀರಾತನ್ನು ಪ್ರಚಾರ ಮಾಡುವ ಸಂಸ್ಥೆಗೆ ಲೀಗಲ್ ನೋಟಿಸ್ ಕಳುಹಿಸಲಾಗಿದೆ. ವಾಸ್ತವವಾಗಿ, ಉತ್ತಮ ಮತ್ತು ಪರಿಸರದ ಹಿತದೃಷ್ಟಿಯಿಂದ ಸಾರ್ವಜನಿಕ ಸಾರಿಗೆಯನ್ನು ಉತ್ತೇಜಿಸುವ ಜಾಹೀರಾತುಗಳಲ್ಲಿ ನಟರು ನಟಿಸಬೇಕು ಎಂದು ಐಪಿಎಸ್ ಅಧಿಕಾರಿ ಹೇಳಿದ್ದಾರೆ. ವಿಸಿ ಸಜ್ಜನರ್ ಈ ಹಿಂದೆ ಸೈಬರಾಬಾದ್ ಪೊಲೀಸ್ ಕಮಿಷನರ್ ಆಗಿದ್ದರು. ನಂತರ ಅವರನ್ನು ವರ್ಗಾಯಿಸಲಾಯಿತು. ಆಗಸ್ಟ್ನಲ್ಲಿ ಟಿಎಸ್ಆರ್ಟಿಸಿ ಎಂಡಿ ಆಗಿ ನೇಮಿಸಲಾಯಿತು. ಸಾರ್ವಜನಿಕ ಸಾರಿಗೆಯ ವಿರುದ್ಧ ಮಾತನಾಡುವುದು ಮತ್ತು ಅಪಪ್ರಚಾರ ಮಾಡುವುದನ್ನು ನಿಲ್ಲಿಸಬೇಕೆಂದು ಅವರು ನಟರು ಹಾಗೂ ಸೆಲೆಬ್ರಿಟಿಗಳಿಗೆ ಒತ್ತಾಯಿಸಿದ್ದಾರೆ.