'ರಾಜ್ಯ ಪಕ್ಷಿ' ಹಂಚಿಕೊಂಡ ಕರ್ನಾಟಕ, ತೆಲಂಗಾಣ
ಹೈದರಾಬಾದ್, ನ.18: ದೇಶದ ಹೊಸ ರಾಜ್ಯ ತೆಲಂಗಾಣ ತನ್ನ ರಾಜ್ಯದ 'ಐಕಾನ್'ಗಳನ್ನು ಆಯ್ಕೆಮಾಡಿಕೊಂಡಿದೆ. ವಿಶೇಷವೆಂದರೆ, ಕರ್ನಾಟಕದ ಹಾಗೂ ತೆಲಂಗಾಣದ ರಾಜ್ಯಪಕ್ಷಿ ಎರಡೂ ಒಂದೇ ಆಗಿದೆ. ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ ರಾವ್ ಅವರು ರಾಜ್ಯದ ಪ್ರಾಣಿ, ಪಕ್ಷಿ, ಹೂವು, ಮರವನ್ನು ಘೋಷಿಸಿದ್ದಾರೆ.
ಬ್ಲೂ ಜೇ ಅಥವಾ ಇಂಡಿಯನ್ ರೋಲರ್ ಎಂದು ಕರೆಯಲ್ಪಡುವ ನೀಲಕಂಠ ಪಕ್ಷಿ ತೆಲಂಗಾಣ ಹಾಗೂ ಕರ್ನಾಟಕ ರಾಜ್ಯಗಳ ಅಧಿಕೃತ ರಾಜ್ಯ ಪಕ್ಷಿಯಾಗಿದೆ.
ತೆಲಂಗಾಣದ ರಾಜ್ಯ ಪ್ರಾಣಿ: ಜಿಂಕೆ (Deer)
ರಾಜ್ಯದ ಹೂವು: ತಾಂಗೆಡು (Tanner's Cassia)
ರಾಜ್ಯದ ಮರ: ಜಮ್ಮಿ ಚೆಟ್ಟು (Prosopis Cineraria).
ತೆಲಂಗಾಣದಲ್ಲಿ ಬಟುಕಮ್ಮ ಹಾಗೂ ದಸರಾ ಹಬ್ಬದ ಜೊತೆಗೆ ಶಮಿ ವೃಕ್ಷ ಹಾಗೂ ನೀಲಕಂಠ ಹಕ್ಕಿ ನಂಟು ಹೊಂದಿದೆ ಹೀಗಾಗಿ ಇವೆರಡನ್ನು ಆಯ್ಕೆ ಮಾಡಲಾಗಿದೆ ಎಂದು ಸರ್ಕಾರಿ ಮೂಲಗಳು ಹೇಳಿವೆ. ದಸರಾ ಸಂದರ್ಭದಲ್ಲಿ ನೀಲಕಂಠ ಹಕ್ಕಿಯನ್ನು ನೋಡಿದರೆ ಶುಭವಾಗುತ್ತದೆ ಎಂಬ ಪ್ರತೀತಿಯಿದೆ. ರಾವಣನ ಸಂಹಾರಕ್ಕೆ ತೆರಳುವ ಮುನ್ನ ಶ್ರೀರಾಮಚಂದ್ರನಿಗೂ ನೀಲಕಂಠ ದರ್ಶನವಾಗಿತ್ತು ಎಂಬ ನಂಬಿಕೆಯಿದೆ.
ಇನ್ನೂ ರಾಜ್ಯದ ಅಧಿಕೃತ ಹಣ್ಣೂ, ಹಾಡು, ನೃತ್ಯ ಹಾಗೂ ಕ್ರೀಡೆ ಯಾವುದು ಎಂದು ಮುಖ್ಯಮಂತ್ರಿ ಕೆ ಚಂದ್ರಶೇಖರ ರಾವ್ ಘೋಷಿಸಿಲ್ಲ.

ರಾಮಾಯಣ ಕಾಲಕ್ಕೂ ಆಂಧ್ರ ಹಾಗೂ ತೆಲಂಗಾಣ ಭಾಗಕ್ಕೂ ನಂಟು ತಂದುಕೊಟ್ಟಿರುವ ಜಿಂಕೆಯನ್ನು ಕೆಸಿಆರ್ ಅವರೇ ಇಷ್ಟಪಟ್ಟು ಆಯ್ಕೆ ಮಾಡಿದ್ದಾರಂತೆ. ತೆಲಂಗಾಣ ಜನರ ಮನಸ್ಸು ಜಿಂಕೆಯಂತೆ ಇದೆ. ಸೂಕ್ಷ್ಮ ಹಾಗೂ ಮೃದು ಸ್ವಭಾವದ ಜನರು ನಮ್ಮವರು ಎಂದು ಕೆಸಿಆರ್ ಹೇಳಿದ್ದಾರೆ.
ಪಾಂಡವರ ತಮ್ಮ ಅಜ್ಞಾತವಾಸದ ಕಾಲದಲ್ಲಿ ಶಮಿ ವೃಕ್ಷದಲ್ಲಿ ತಮ್ಮ ಶಸ್ತ್ರಾಸ್ತ್ರಗಳನ್ನು ಬಚ್ಚಿಟ್ಟಿದ್ದರು. ಶಮಿ ಪತ್ರ ಸ್ವೀಕರಿಸಿ ವೃಕ್ಷಕ್ಕೆ ಪೂಜೆ ಸಲ್ಲಿಸಿದ ಮೇಲೆ ಕೌರವರ ಮೇಲೆ ವಿಜಯೋತ್ಸವ ಸಾಧಿಸಿದರು ಎಂಬ ಮಾತಿದೆ.
ಇನ್ನೊಂದು ಕುತೂಹಲದ ಸಂಗತಿಯೆಂದರೆ ಭಾರತದಲ್ಲಿ ಅತಿ ಹೆಚ್ಚು ರಾಜ್ಯಗಳಿಗೆ ರಾಜ್ಯಪಕ್ಷಿ ಎನಿಸಿಕೊಂಡಿರುವ ಕೀರ್ತಿ ಗರಿಮೆ ಕೂಡಾ ನೀಲಕಂಠ ಪಕ್ಷಿಗೆ ಸಲ್ಲುತ್ತದೆ. ಕರ್ನಾಟಕ, ತೆಲಂಗಾಣ ರಾಜ್ಯವಲ್ಲದೆ, ಆಂಧ್ರಪ್ರದೇಶ ಹಾಗೂ ಒಡಿಶಾ ರಾಜ್ಯಕ್ಕೂ ನೀಲಕಂಠ ರಾಜ್ಯಪಕ್ಷಿಯಾಗಿದೆ.












Click it and Unblock the Notifications