ತೆಲಂಗಾಣ ಚುನಾವಣೆಯಲ್ಲೂ ಕರ್ನಾಟಕ- ಕುಮಾರಣ್ಣನ ಬಗ್ಗೆಯೇ ಚರ್ಚೆ
ಕರ್ನಾಟಕದಲ್ಲಿ ಆದಂತೆ ಆಗದೆ ತೆಲಂಗಾಣ ರಾಷ್ಟ್ರೀಯ ಸಮಿತಿಯ ಬಹುಮತದ ಸರಕಾರ ಬರುತ್ತದೆ. ಕೆ.ಚಂದ್ರಶೇಖರ್ ರಾವ್ ಮುಖ್ಯಮಂತ್ರಿ ಆಗುತ್ತಾರೆ ಎಂದಿದ್ದಾರೆ ಎಐಎಂಐಎಂನ ಅಧ್ಯಕ್ಷ ಹಾಗೂ ಹೈದರಾಬಾದ್ ನ ಸಂಸದ ಅಸಾದುದ್ದೀನ್ ಒವೈಸಿ. ಈ ಮಾತನ್ನು ಶನಿವಾರ ಅವರು ಹೇಳಿದ್ದಾರೆ.
ಅದಕ್ಕೂ ಒಂದು ದಿನ ಮೊದಲು ಅಂದರೆ ಶುಕ್ರವಾರ ಆ ಪಕ್ಷದ ಅಕ್ಬರುದ್ದೀನ್ ಒವೈಸಿ ಮಾತನಾಡಿ, ನವೆಂಬರ್ ನಲ್ಲಿ ಚುನಾವಣೆ ಆಗುತ್ತದೆ. ಡಿಸೆಂಬರ್ ನಲ್ಲಿ ತಾವು ಮುಖ್ಯಮಂತ್ರಿ ಆಗುವುದಾಗಿ ಕೆ ಚಂದ್ರಶೇಖರ್ ಹೇಳಿದ್ದಾರೆ. ಆದರೆ ನಾನು ಹೇಳ್ತಿದ್ದೀನಿ. ನವೆಂಬರ್ ನಲ್ಲಿ ಚುನಾವಣೆ ಆಗುತ್ತದೆ. ಡಿಸೆಂಬರ್ ನಲ್ಲಿ ನಮ್ಮನ್ನು ಯಾರು ಬೆಂಬಲಿಸುತ್ತೀರಿ ಎಂದು ಕೇಳ್ತೀವಿ ಎಂದಿದ್ದಾರೆ.
ಕರ್ನಾಟಕದಲ್ಲಿ ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗಬಹುದಾದರೆ ನಾವೇಕೆ ಆಗಬಾರದು ಎಂದು ಅಕ್ಬರುದ್ದೀನ್ ಹೇಳಿದ್ದರು.

ಆದರೆ, ಅಕ್ಬರುದ್ದೀನ್ ಒವೈಸಿ ಅವರ ಹಿರಿಯ ಸಹೋದರ ಅಸಾದುದ್ದೀನ್ ಶನಿವಾರ ಮಾತನಾಡಿ, ಅವಧಿಗೂ ಮುನ್ನವೇ ತೆಲಂಗಾಣ ವಿಧಾನಸಭೆ ವಿಸರ್ಜನೆ ಮಾಡುವ ತೀರ್ಮಾನ ಸ್ವಾಗತಿಸುತ್ತೇವೆ. ಇದೊಂದು ದಿಟ್ಟ ನಿರ್ಧಾರ. ಆದರೆ ಚುನಾವಣೆಗೆ ಕಾಂಗ್ರೆಸ್ ಏಕೆ ಹೆದರುತ್ತಿದೆ? ಅವರು ಹೋರಾಡಬೇಕು. ತೆಲಂಗಾಣಕ್ಕಾಗಿ ಕೆಸಿಆರ್ ಮತ್ತು ಅವರ ಪಕ್ಷಕ್ಕೆ ದೂರದೃಷ್ಟಿ ಇದೆ ಎಂದಿದ್ದಾರೆ.
ನಾವು ಚಂದ್ರಶೇಖರ್ ರಾವ್ ಅವರನ್ನು ಟೀಕಿಸುತ್ತೇವೆ. ಅದರಲ್ಲಿ ಅನುಮಾನ ಬೇಡ. ಆದರೆ ಅವರು ಒಳ್ಳೆ ಕೆಲಸ ಮಾಡಿದರೆ ಅದನ್ನು ಮೆಚ್ಚಿಕೊಳ್ತೇವೆ ಎಂದಿದ್ದಾರೆ. ಟಿಡಿಪಿ-ಕಾಂಗ್ರೆಸ್, ಬಿಜೆಪಿಯನ್ನು ನಾವು ಸೋಲಿಸುತ್ತೇವೆ. ಅವರಿಗೆ ಎಐಎಂಐಎಂ ಅಥವಾ ಟಿಆರ್ ಎಸ್ ಪಕ್ಷವನ್ನು ಸೋಲಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ತೆಲಂಗಾಣಕ್ಕೆ ಹೋಲಿಸಿದರೆ ಚಂದ್ರಬಾಬು ನಾಯ್ಡು ಆಂಧ್ರ ಅಭಿವೃದ್ಧಿಗೆ ಏನು ಕೆಲಸ ಮಾಡುತ್ತಿದಾರೆ? ಅಲ್ಲಿ ಒಟ್ಟಾರೆಯಾಗಿ ಟಿಡಿಪಿ ವಿಫಲವಾಗಿದೆ. ತೆಲಂಗಾಣ ವಿಧಾನಸಭೆ ಚುನಾವಣೆ ಆದ ತಕ್ಷಣ ಆಂಧ್ರದಾದ್ಯಂತ ಪ್ರವಾಸ ಮಾಡಿ ಟಿಡಿಪಿ ಸರಕಾರದ ಹುಳುಕನ್ನು ಜನರ ಮುಂದೆ ಇಡುವುದಾಗಿ ಅಸಾದುದ್ದೀನ್ ಒವೈಸಿ ಹೇಳಿದ್ದಾರೆ.
ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ವಿಧಾನಸಭೆ ವಿಸರ್ಜನೆ ಮಾಡಿದ್ದು, ಈ ವರ್ಷದ ಕೊನೆಗೆ ಇತರ ನಾಲ್ಕು ರಾಜ್ಯಗಳ ಜತೆಗೆ ಅಲ್ಲಿ ವಿಧಾನಸಭೆ ಚುನಾವಣೆ ನಡೆಯುವ ಸಾಧ್ಯತೆ ಇದೆ.












Click it and Unblock the Notifications