ಜಗನ್ಮೋಹನ್ ರೆಡ್ಡಿ ಚಿಕ್ಕಪ್ಪನ ಕೊಲೆಯ ಆರೋಪಿ ಆತ್ಮಹತ್ಯೆ
ಹೈದರಾಬಾದ್, ಸೆಪ್ಟೆಂಬರ್ 4: ಆಂಧ್ರಪ್ರದೇಶ ಮುಖ್ಯಮಂತ್ರಿ ವೈ.ಎಸ್. ಜಗನ್ಮೋಹನ್ ರೆಡ್ಡಿ ಚಿಕ್ಕಪ್ಪ ವೈ.ಎಸ್. ವಿವೇಕಾನಂದರೆಡ್ಡಿ ಹತ್ಯೆ ಪ್ರಕರಣದಲ್ಲಿ ಆರೋಪಿಯಾಗಿದ್ದ ಎಸ್ ಶ್ರೀನಿವಾಸುಲು ರೆಡ್ಡಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಸೋಮವಾರವೇ ಆತ್ಮಹತ್ಯೆಗೆ ಯತ್ನಿಸಿದ್ದು, ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಆಂಧ್ರದ ಮುಖ್ಯಮಂತ್ರಿ ವೈ.ಎಸ್. ಜಗನ್ ಮೋಹನ್ ರೆಡ್ಡಿ ತಂದೆ ರಾಜಶೇಖರ ರೆಡ್ಡಿ ಸಹೋದರ ವಿವೇಕಾನಂದರೆಡ್ಡಿ ಮಾ.15ರಂದು ನಿವಾಸದಲ್ಲಿ ಹತ್ಯೆಗೀಡಾಗಿದ್ದರು.

ಶ್ರೀನಿವಾಸುಲು ರೆಡ್ಡಿ ಅವರು ರಾಜಶೇಖರ ರೆಡ್ಡಿಗೆ ಹತ್ತಿರದ ಸಂಬಂಧಿಯಾಗಿದ್ದು, ವಿವೇಕಾನಂದ ರೆಡ್ಡಿ ಕೊಲೆ ಪ್ರಕರಣದಲ್ಲಿ ಫೋನ್ ರೆಕಾರ್ಡ್ ಆಧಾರದ ಮೇಲೆ ಅವರನ್ನು ಆರೋಪಿ ಎಂದು ಪರಿಗಣಿಸಲಾಗಿತ್ತು. ಪೊಲೀಸರ ಕಿರುಕುಳದಿಂದ ನೊಂದ ಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪತ್ನಿ ಪದ್ಮಾವತಿ ತಿಳಿಸಿದ್ದಾರೆ.
ಶ್ರೀನಿವಾಸುಲು ಅವರು ಬರೆದಿದ್ದಾರೆ ಎನ್ನಲಾದ ಎರಡು ಪತ್ರಗಳನ್ನೂ ಪದ್ಮಾವತಿ ಅವರು ನೀಡಿದ್ದು, ವೈಎಸ್ಆರ್ ಕುಟುಂಬದ ಬಗ್ಗೆ ನನಗೆ ಗೌರವವಿದೆ, ಹತ್ಯೆಗೂ ನನಗೂ ಯಾವುದೇ ಸಂಬಂಧವಿಲ್ಲ ಎಂದು ಪತ್ರದಲ್ಲಿ ಬರೆದಿದ್ದಾರೆ ಎನ್ನಲಾಗಿದೆ.
ಪೊಲೀಸರು ತನಿಖೆ ನೆಪದಲ್ಲಿ ನಡೆಸಿದ ದೌರ್ಜನ್ಯದಿಂದ ಅವಮಾನವಾಗಿದೆ. ಮನನೊಂದು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಶ್ರೀನಿವಾಸುಲು ಹೇಳಿಕೊಂಡಿದ್ದಾರೆ.
ವಿವೇಕಾನಂದ ರೆಡ್ಡಿ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಈವರೆಗೆ 60 ಜನರನ್ನು ಬಂಧಿಸಿದ್ದಾರೆ.











Click it and Unblock the Notifications