ಇಸ್ರೋ ವಿಜ್ಞಾನಿಯ ನಿಗೂಢ ಸಾವಿಗೆ ಸಲಿಂಗಕಾಮದ ನಂಟು?
ಹೈದರಾಬಾದ್, ಅಕ್ಟೋಬರ್ 04: ಹೈದರಾಬಾದಿನ ಅಪಾರ್ಟ್ಮೆಂಟ್ ವೊಂದರಲ್ಲಿ ನಿಗೂಢ ರೀತಿಯಲ್ಲಿ ಸಾವಿಗೀಡಾದ ಇಸ್ರೋ ವಿಜ್ಞಾನಿ ಸುರೇಶ್ ಅವರ ಸಾವು ಇದೀಗ ರೋಚಕ ತಿರುವು ಪಡೆದಿದೆ.
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ)ಯ ರಾಷ್ಟ್ರೀಯ ದೂರಸಂವೇದಿ ಕೇಂದ್ರ(ಎನ್ ಆರ್ ಎಸ್ ಸಿ)ದಲ್ಲಿ ವಿಜ್ಞಾನಿಯಾಗಿ ಕೆಲಸ ಮಾಡುತ್ತಿದ್ದ ಕೇರಳ ಮೂಲದ ಸುರೇಶ್ ಅವರು ಮಂಗಳವಾರ ನಸುಕಿನಲ್ಲಿ ಮೃತರಾಗಿದ್ದರು.
ಅವರ ತಲೆಗೆ ಬಲವಾದ ಪೆಟ್ಟು ಬಿದ್ದಿದ್ದ ಕಾರಣ ಅದು ಸಹಜ ಸಾವಲ್ಲ ಎಂಬ ಅನುಮಾನ ಎದ್ದಿತ್ತು. ಸುರೇಶ್ ಅವರು ಸಾವಿಗೀಡಾದ ದಿನ ಅವರೊಂದಿಗೆ ಲ್ಯಾಬ್ ಟೆಕ್ನಿಶಿಯನ್ ಶ್ರೀನಿವಾಸ್ ಎಂಬುವವರಿದ್ದರು ಎಂಬ ಅಂಶ ಬೆಳಕಿಗೆ ಬಂದಿದ್ದು, ಅವರಿಬ್ಬರ ನಡುವೆ ಸಲಿಂಗಕಾಮವಿತ್ತು ಎಂದು ತನಿಖಾಧಿಕಾರಿಯೊಬ್ಬರು ಹೇಳಿದ್ದಾರೆ.

ಸಲಿಂಗ ಕಾಮ?
56 ವರ್ಷ ವಯಸ್ಸಿನ ಎಸ್. ಸುರೇಶ್ ಕುಮಾರ್ ಅವರಿಗೂ, ಡೈಗ್ನಾಸ್ಟಿಕ್ ಸೆಂಟರ್ ವೊಂದರಲ್ಲಿ ಲ್ಯಾಬ್ ಟೆಕ್ನಿಶಿಯನ್ ಆಗಿರುವ 25 ವರ್ಷ ವಯಸ್ಸಿನ ಶ್ರೀನಿವಾಸ್ ಅವರಿಗೂ ಸಲಿಂಗಕಾಮವಿತ್ತು ಎಂದು ಈ ಪ್ರಕರಣದ ತನಿಖೆ ನಡೆಸುತ್ತಿರುವ ಅಧಿಕಾರಿಯೊಬ್ಬರು ಹೇಳಿದ್ದು, ಈ ವಿಷಯ ಇಡಿ ಪ್ರಕರಣದ ದಿಕ್ಕನ್ನೇ ಬದಲಿಸಿದೆ. ಶ್ರೀನಿವಾಸ್ ಅವರು ನಾಪತ್ತೆಯಾಗಿದ್ದು, ಈ ಅನುಮಾನಕ್ಕೆ ಪುಷ್ಠಿ ನೀಡಿದ್ದು, ಅವರನ್ನು ಬಂಧಿಸಲು ನಾಲ್ವರು ಅಧಿಕಾರಿಗಳ ತಂಡವನ್ನೂ ರಚಿಸಲಾಗಿದೆ.

ಕೊಲೆಯಾದ ದಿನ ಸುರೇಶ್ ಜೊತೆ ಇದ್ದ ಶ್ರಿನಿವಾಸ್
ಸುರೇಶ್ ಕೊಲೆಯಾದ ದಿನ ಶ್ರೀನಿವಾಸ್ ಸುರೇಶ್ ಅವರ ಅಪಾರ್ಟ್ಮೆಂಟಿಗೆ ಬಂದಿದ್ದ. ಇಬ್ಬರು ನಡುವೆ ಯಾವುದೋ ಕಾರಣಕ್ಕೆ ಆರಂಭವಾದ ಮಾತಿನ ಚಕಮಕಿ ಜಗಳಕ್ಕೆ ತಿರುಗಿ, ನಂತರ ಶ್ರೀನಿವಾಸ್ ಸುರೇಶ್ ಅವರನ್ನು ಕೊಂದಿದ್ದಾರೆ ಎಂದು ಪ್ರಾಥಮಿಕ ತನಖೆ ತಿಳಿಸಿದೆ. ಆದರೆ ಕೊಲೆಗೆ ಕಾರಣವೇನು ಎಂಬ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.

ವಾಚ್ಮನ್ ಹೇಳಿಕೆ
"ಸುರೇಶ್ ಮತ್ತು ಶ್ರೀನಿವಾಸ್ ಅವರು ಕಳೆದ ಎರಡು ತಿಂಗಳಿನಿಂದ ಪರಿಚಿತರಾಗಿದ್ದು, ಶ್ರೀನಿವಾಸ್ ಪದೇ ಪದೇ ಸುರೇಶ್ ಅವರ ಮನೆಗೆ ಬರುತ್ತಿದ್ದರು. ಸಂಜೆಯ ಸಮಯದಲ್ಲಿ ಇಬ್ಬರೂ ಒಟ್ಟಾಗಿ ಮದ್ಯ ಸೇವಿಸುತ್ತಿದ್ದರು. ನಂತರ ರಾತ್ರಿ ಶ್ರೀನಿವಾಸ್ ವಾಪಸ್ಸಾಗುತ್ತಿದ್ದರು. ಸೋಮವಾರವೂ ಹಾಗೆಯೇ ಅವರು ವಾಪಸ್ಸಾದರು" ಎಂದುಅಪಾರ್ಟ್ಮೆಂಟಿನ ವಾಚ್ಮನ್ ಹೇಳಿಕೆ ನೀಡಿದ್ದರು. ನಂತರ ಅಪಾರ್ಟ್ಮೆಂಟಿನ ಸಿಸಿಟಿವಿ ಕ್ಯಾಮರಾವನ್ನೂ ಪೊಲೀಸರು ವಶಪಡಿಸಿಕೊಂಡಿದ್ದರು.

ಏಕಾಂಗಿಯಾಗಿ ವಾಸಿಸುತ್ತಿದ್ದ ಸುರೇಶ್
ಸುರೇಶ್ ಕುಮಾರ್ ಅವರು ಎನ್ ಆರ್ ಎಸ್ ಸಿ ಯ ಫೋಟೊ ಸೆಕ್ಷನ್ ನಲ್ಲಿ ಕೆಲಸ ಮಾಡುತ್ತಿದ್ದರು. ಹೈದರಾಬಾದಿನಲ್ಲಿ ಅವರೊಬ್ಬರೇ ತಂಗಿದ್ದರು. ಬ್ಯಾಂಕ್ ಉದ್ಯೋಗಿಯಾಗಿದ್ದ ಪತ್ನಿ ಇಂದಿರಾ ಮತ್ತು ಮಗಳು ಚೆನ್ನೈಯಲ್ಲಿ ವಾಸವಿದ್ದರೆ, ಪುತ್ರ ಅಮೆರಿಕದಲ್ಲಿ ವಾಸವಿದ್ದಾರೆ. ಪೋಸ್ಟ್ ಮಾರ್ಟಮ್ ನಂತರ ಅವರ ಪಾರ್ಥಿವ ಶರೀರವನ್ನು ಚೆನ್ನೈಯಲ್ಲಿರುವ ಅವರ ಕುಟುಂಬಕ್ಕೆ ಒಪ್ಪಿಸಲಾಗಿತ್ತು. ಅವರ ತಲೆಯಲ್ಲಿ ಬಲವಾದ ಏಟು ಬಿದ್ದ ಕಲೆಯಿದ್ದಿದ್ದೇ ಅವರದು ಸಹಜ ಸಾವಲ್ಲ, ಕೊಲೆ ಎಂಬುದನ್ನು ಸಾಬೀತುಪಡಿಸಿದ್ದು, ಶ್ರೀನಿವಾಸ್ ಮೇಲಿನ ಆರೋಪ ಇನ್ನೂ ಸಾಬೀತಾಗಬೇಕಿದೆ.












Click it and Unblock the Notifications