ಅಂತರರಾಜ್ಯ ಸಂಚಾರ: ತೆಲಂಗಾಣ ಅನುಮತಿ, ಆಂಧ್ರ ನಿರ್ಬಂಧ
ಹೈದರಾಬಾದ್, ಜೂನ್ 1: ಸೋಮವಾರದಿಂದ ದೇಶಾದ್ಯಂತ ಅನ್ಲಾಕ್ 1 ಜಾರಿಯಾಗಿದ್ದು, ಅಂತರರಾಜ್ಯ ಸಂಚಾರಕ್ಕೆ ಕೇಂದ್ರ ಸರ್ಕಾರ ಮುಕ್ತ ಅವಕಾಶ ಕಲ್ಪಿಸಿತ್ತು. ಯಾವುದೇ ಪಾಸ್ ಇಲ್ಲದೇ ಅಂತರರಾಜ್ಯ ಪ್ರಯಾಣ ಮಾಡಬಹುದು ಎಂದು ಮಾರ್ಗಸೂಚಿ ಹೊರಡಿಸಿತ್ತು.
ಆದರೆ, ಆಂಧ್ರ ಪ್ರದೇಶ ಮಾತ್ರ ಕೇಂದ್ರ ಆದೇಶವನ್ನು ಪರಿಗಣಿಸದೇ ನೂರಾರು ಜನರನ್ನು ರಾಜ್ಯದೊಳಗೆ ಪ್ರವೇಶಕ್ಕೆ ಅನುಮತಿ ನೀಡದೆ ಗಡಿಯಲ್ಲಿ ನಿಲ್ಲಿಸಿರುವ ಘಟನೆ ಸೋಮವಾರ ನಡೆದಿದೆ.
ಅಂತರರಾಜ್ಯ ಸಂಚಾರಕ್ಕೆ ಕೇಂದ್ರ ಅನುಮತಿ ನೀಡಿದ ಬಳಿಕ ತೆಲಂಗಾಣ ರಾಜ್ಯದಿಂದ ಅನೇಕ ಜನರು ಆಂಧ್ರ ಪ್ರದೇಶದ ಕಡೆ ಹೊರಟರು. ಆದರೆ, ಗಡಿಗಳಲ್ಲಿ ಆಂಧ್ರ ಪೊಲೀಸರು ಜನರನ್ನು ತಡೆದಿದ್ದಾರೆ. ಹೊರರಾಜ್ಯಗಳಿಂದ ಆಗಮನಕ್ಕೆ ರಾಜ್ಯ ಸರ್ಕಾರ ಅನುಮತಿ ಇಲ್ಲ ಎಂದು ಹೇಳಿ ಗಡಿಯೊಳಗೆ ಬರಲು ನಿರಾಕರಿಸಿದ್ದಾರೆ.

ಆಂಧ್ರಪ್ರದೇಶದ ಗಡಿಯೊಳಗೆ ಜನರು, ವಾಹನಗಳು ಬರುವ ವಿಚಾರ ತಿಳಿದ ಪೊಲೀಸ್ ಮಹಾನಿರ್ದೇಶಕ ಗೌತಮ್ ಸಾವಂಗ್ "ಸರ್ಕಾರದ ಮುಂದಿನ ನಿರ್ಧಾರ ಆದೇಶ ಬರುವವರೆಗೂ ಜನರು ಮತ್ತು ಸರಕುಗಳ ವಾಹನವನ್ನು ರಾಜ್ಯದೊಳಗೆ ಬರಲು ಅನುಮತಿಸುವುದಿಲ್ಲ. ನಿರ್ಬಂಧನೆಗಳು ಜಾರಿಯಲ್ಲಿರುತ್ತವೆ'' ಎಂದು ಹೇಳಿಕೆ ನೀಡಿದರು.
ಖಾಸಗಿ ವಾಹನಗಳಲ್ಲಿ ಇತರ ರಾಜ್ಯಗಳಿಂದ ಆಂಧ್ರಕ್ಕೆ ಬರುವವರು ಸರ್ಕಾರದ 'ಸ್ಪಂದಾನಾ' ವೆಬ್ ಪೋರ್ಟಲ್ ಮೂಲಕ ಇ-ಪಾಸ್ ಪಡೆದು ವೈದ್ಯಕೀಯ ಪರೀಕ್ಷೆಗಳಿಗೆ ಒಳಗಾಗಬೇಕು ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಕೊರೊನಾ ಸೋಂಕಿಗೆ ಹೆಚ್ಚು ತುತ್ತಾಗಿರುವ ರಾಜ್ಯಗಳಿಂದ ಆಂಧ್ರಪ್ರದೇಶಕ್ಕೆ ಬರುವವರನ್ನು ಕ್ವಾರಂಟೈನ್ ಮಾಡಲಾಗುವುದು ಮತ್ತು ಕೊರೊನಾ ಪರೀಕ್ಷೆಗೂ ಒಳಪಡಿಸಲಾಗುವುದು. ಪಾಸಿಟಿವ್ ಬಂದ್ರೆ ಆಸ್ಪತ್ರೆಗೆ ಸೇರಿಸಲಾಗುತ್ತೆ, ನೆಗಿಟಿವ್ ಬಂದರೆ ಮನೆಗೆ ಹೋಗಿ ಏಳು ದಿನಗಳು ಕ್ವಾರಂಟೈನ್ ಆಗಬೇಕು ಎಂದು ನಿರ್ಬಂಧನೆ ಹಾಕಲಾಗಿದೆ.












Click it and Unblock the Notifications