ತಿರುಪತಿ ಕಾಡು ಉಳಿಸಿದ ಆಪರೇಷನ್ ಶೇಷಾಚಲಂ
ಹೈದರಾಬಾದ್, ಮಾ.21: ದಿನನಿತ್ಯ ವೇದಮಂತ್ರ ಘೋಷಗಳ ಧ್ವನಿಯಿಂದ ತುಂಬಿರುತ್ತಿದ್ದ ತಿರುಪತಿ ಬೆಟ್ಟದಲ್ಲಿ ಕಳೆದೆರಡು ದಿನಗಳಿಂದ ಕಾಡ್ಗಿಚ್ಚಿನ ಕೆನ್ನಾಲಿಗೆಗೆ ಸಿಕ್ಕಿ ಉಸಿರುಗಟ್ಟಿಸುವ ವಾತಾವರಣ ನಿರ್ಮಾಣವಾಗಿತ್ತು. ತಿರುಮಲ ತಿರುಪತಿ ದೇವಸ್ಥಾನದ ಸ್ವರ್ಣ ಗೋಪುರದಲ್ಲಿ ಬೆಂಕಿಯ ಪ್ರತಿಬಿಂಬ ಜಗಜಗಿಸುತ್ತಿದ್ದನ್ನು ಕಂಡು ಭಕ್ತರು ಬೆಚ್ಚಿದ್ದರು. ಆದರೆ, ಆಪರೇಷನ್ ಶೇಷಾಚಲಂ ಹೆಸರಿನಲ್ಲಿ ನಡೆಸಿದ ಕಾರ್ಯಾಚರಣೆಯಿಂದಾಗಿ ಕಾಡ್ಗಿಚ್ಚನ್ನು ಸೂಕ್ತ ಸಮಯದಲ್ಲಿ ನಂದಿಸುವಲ್ಲಿ ಅರಣ್ಯ ಸಿಬ್ಬಂದಿ ಹಾಗೂ ಟಿಟಿಡಿ ಯಶಸ್ವಿಯಾಗಿದೆ.
ಆಂಧ್ರ ಪ್ರದೇಶದಲ್ಲಿ ತೆಲಂಗಾಣ ಪ್ರತ್ಯೇಕರ ರಾಜ್ಯ ರಚನೆ ಮತ್ತು ಆಂಧ್ರ ವಿಭಜನೆಯಿಂದ ಉಂಟಾಗಿದ್ದ ಪ್ರತಿಭಟನೆಗಳ ದಳ್ಳುರಿ ತಣ್ಣಗಾದ ಬೆನ್ನಲ್ಲೆ ಕಳೆದ ಎರಡು ದಿನಗಳ ಹಿಂದೆ ತಿರುಪತಿ ಅರಣ್ಯ ಪ್ರದೇಶದಲ್ಲಿ ಇದ್ದಕ್ಕಿದ್ದಂತೆ ಈ ಕಾಡ್ಗಿಚ್ಚು ಕಾಣಿಸಿಕೊಂಡು ರಾಜ್ಯದ ಜನತೆಯಲ್ಲಿ ತೀವ್ರ ಆತಂಕ ಮೂಡಿಸಿತ್ತು. ಕಾಡ್ಗಿಚ್ಚಿನ ಬೆಂಕಿ ಜತೆಗೆ ಗಾಳಿಸುದ್ದಿಗಳು ಹರಡತೊಡಗಿತ್ತು. [ಮೋದಿ ಮಾತನ್ನು ಕನ್ನಡದಲ್ಲಿ ಕೇಳಿರಿ]
ಮೊದಮೊದಲು ಸಾಧಾರಣವಾಗಿ ಕಂಡುಬಂದ ಈ ಬೆಂಕಿ ಬರಬರುತ್ತ ನಾಲ್ಕೂ ದಿಕ್ಕುಗಳಿಗೂ ವ್ಯಾಪಿಸಿದ್ದಲ್ಲದೆ ತಿಮ್ಮಪ್ಪನ ದೇವಸ್ಥಾನವಿರುವ ಶೇಷಾಚಲ ಬೆಟ್ಟದ ಕಡೆಗೂ ತನ್ನ ಕೆನ್ನಾಲಿಗೆ ಚಾಚಿತ್ತು. ಇದರಿಂದ ದಿಗಿಲುಗೊಂಡ ಆಂಧ್ರ ಪ್ರದೇಶ ಸರ್ಕಾರ ಕೂಡಲೇ ಕೇಂದ್ರದ ಮೊರೆ ಹೋಗಿದ್ದು, ಬೆಂಕಿ ನಂದಿಸಲು ಅಗತ್ಯ ನೆರವು ನೀಡುವಂತೆ ಮನವಿ ಸಲ್ಲಿಸಿತು.
ಕೇಂದ್ರ ಸರ್ಕಾರದಿಂದ ವಾಯುಸೇನೆಯ ನಾಲ್ಕಾರು ಹೆಲಿಕಾಪ್ಟರ್ ಗಳು ಹಾಗೂ ಸಿಬ್ಬಂದಿ ತಿರುಪತಿ ಬೆಟ್ಟಕ್ಕೆ ದಾವಿಸಿ ಬೆಂಕಿ ನಿಯಂತ್ರಿಸಲು ಹರಸಾಹಸ ಪಡಲಾರಂಭಿಸಿದರು. ಸುಮಾರು 300 ಮಂದಿ ಅಗ್ನಿಶಾಮಕ ಸಿಬ್ಬಂದಿ, ಅನೇಕ ಅಗ್ನಿಶಾಮಕ ಯಂತ್ರಗಳು, ವಾಯುಸೇನೆಯ ಆರು ಹೆಲಿಕಾಪ್ಟರ್ ಗಳು ಹಾಗೂ ಸಿಬ್ಬಂದಿ ಬೆಂಕಿ ಆರಿಸುವ ಕಾರ್ಯದಲ್ಲಿ ಯಶಸ್ವಿಯಾಗಿದೆ ಎಂದು ಟಿಟಿಡಿ ಸಿಇಒ ಗೋಪಾಲ್ ಹೇಳಿದ್ದಾರೆ. ಆಪರೇಷನ್ ಶೇಷಾಚಲಂನ ಯಶಸ್ವಿ ಚಿತ್ರಗಳು ನಿಮ್ಮ ಮುಂದಿದೆ.

ತಿರುಪತಿ: ಪರದಾಡಿದ ಅಗ್ನಿಶಾಮಕ ಸಿಬ್ಬಂದಿ
ಬೆಂಕಿಯನ್ನು ತಹಬದಿಗೆ ತರಲು ಅಗ್ನಿಶಾಮಕ ಸಿಬ್ಬಂದಿ ಇನ್ನೂ ಕೂಡ ಪರದಾಡಿದರು. ಸುಮಾರು 300 ಮಂದಿ ಅಗ್ನಿಶಾಮಕ ಸಿಬ್ಬಂದಿ, ಅನೇಕ ಅಗ್ನಿಶಾಮಕ ಯಂತ್ರಗಳ ನೆರವಿಗೆ ವಾಯುಸೇನೆಯ ಆರು ಹೆಲಿಕಾಪ್ಟರ್ ಗಳು ಹಾಗೂ ಸಿಬ್ಬಂದಿ ಬೆಂಕಿ ಆರಿಸುವ ಕಾರ್ಯದಲ್ಲಿ ಯಶಸ್ಸು ಕಂಡವು.

ತಿರುಮಲದಲ್ಲಿ ನೀರಿನ ಆಭಾವ
ಬೆಂಕಿ ನಂದಿಸಲು ಪ್ರಮುಖವಾದ ಸಮಸ್ಯೆ ಎಂದರೆ ನೀರಿನ ಅಭಾವ. ತಿರುಮಲ ಬೆಟ್ಟದಲ್ಲಿ ನೀರಿನ ಅಭಾವವಿರುವುದರಿಂದ ಬೆಂಕಿಯನ್ನು ನಂದಿಸುವುದು ಕಷ್ಟಸಾಧ್ಯವಾಗುತ್ತಿದೆ ಎಂದು ಅಗ್ನಿಶಾಮಕ ಅಧಿಕಾರಿಗಳು ತಿಳಿಸಿದ್ದಾರೆ.

ತಿರುಮಲ ಬೆಟ್ಟದ ಕಾಲುದಾರಿಗಳು ಬಂದ್
ಕ್ಷಣಕ್ಷಣಕ್ಕೂ ಬೆಂಕಿ ಮುಂದುವರಿದು ದಾವಿಸುತ್ತಿರುವುದರಿಂದ ಬೆಟ್ಟದ ಮೇಲೆ ಭಕ್ತರು ತಿಮ್ಮಪ್ಪನ ದರ್ಶನಕ್ಕೆ ತೆರಳುವ ಎಲ್ಲ ದಾರಿಗಳನ್ನೂ ಬಂದ್ ಮಾಡಲಾಗಿದ್ದು, ಭಕ್ತರು ಆತಂಕ ಪಡುವ ಅಗತ್ಯ ಇಲ್ಲವಾದರೂ ಬೆಂಕಿ ನಂದಿಸುವ ಕಾರ್ಯಕ್ಕೆ ಅಡಚಣೆ ಉಂಟಾಗದಂತೆ ನೋಡಿಕೊಳ್ಳಲು ಈ ಕ್ರಮ ಕೈಗೊಳ್ಳಲಾಗಿತ್ತು.

ಸಿಬ್ಬಂದಿಯಲ್ಲಿ ಭೀತಿ ಮೂಡಿಸಿತ್ತು
ತಿರುಪತಿ ತಿಮ್ಮಪ್ಪನ ದೇವಸ್ಥಾನದಿಂದ ನಿನ್ನೆ ಮೂರು ಕಿಮೀ ದೂರದಲ್ಲಿದ್ದ ಕಾಡ್ಗಿಚ್ಚು ಇಂದು ಮುಂಜಾನೆ ವೇಳೆಗೆ ದೇವಸ್ಥಾನದ ಕಡೆ ಮತ್ತಷ್ಟು ಮುಂದುವರಿದಿದ್ದು, ಸಿಬ್ಬಂದಿಯಲ್ಲಿ ಭೀತಿ ಮೂಡಿಸಿತ್ತು.

ಐದು ಸಾವಿರ ಹೆಕ್ಟೇರ್ ಪ್ರದೇಶ
ಸುಮಾರು ಐದು ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಈ ಬೆಂಕಿ ಆವರಿಸಿದ್ದು, ಸಾವಿರಾರು ಮೃಗ-ಪಕ್ಷಿಗಳು ಬೆಂಕಿಯಲ್ಲಿ ಸಜೀವ ದಹನವಾಗಿದೆ. ತಿರುಪತಿ ತಿರುಮಲ ಇತಿಹಾಸದಲ್ಲಿ ಇದು ಅತ್ಯಂತ ಭೀಕರ ಅಗ್ನಿ ಪ್ರಮಾದ ಎಂದು ಜಿಲ್ಲಾಡಳಿತ ತಿಳಿಸಿದೆ.

ರಾಜ್ಯಪಾಲರ ಸಮೀಕ್ಷೆ
ಈ ಮಧ್ಯೆ ಆಂಧ್ರ ಪ್ರದೇಶ ರಾಜ್ಯಪಾಲ ನರಸಿಂಹನ್ ಅವರು ಹೆಲಿಕಾಪ್ಟರ್ನಲ್ಲಿ ತೆರಳಿ ಅಗ್ನಿ ಆವರಿಸಿಕೊಂಡಿರುವ ಪ್ರದೇಶದ ವೈಮಾನಿಕ ಸಮೀಕ್ಷೆ ನಡೆಸಿದರು.

ಸದ್ಯಕ್ಕೆ ಬೆಂಕಿ ಹಲವೆಡೆ ನಂದಿಸಲಾಗಿದೆ
ಬೆಂಕಿ ನಿಯಂತ್ರಣದ ಬಗ್ಗೆ ಈಗಲೇ ಏನೂ ಹೇಳಲು ಸಾಧ್ಯವಿಲ್ಲ. ಸದ್ಯಕ್ಕೆ ಬೆಂಕಿ ಹಲವೆಡೆ ನಂದಿಸಲಾಗಿದೆ ಎಂದು ಅಗ್ನಿಶಾಮಕ ಅಧಿಕಾರಿಗಳು ತಿಳಿಸಿದ್ದಾರೆ. ಏನೇ ಆದರೂ ಭಕ್ತರು ಯಾವುದೇ ರೀತಿಯ ಆತಂಕಕ್ಕೊಳಗಾಗುವುದು ಬೇಡ ಎಂದು ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ತಿಳಿಸಿದ್ದಾರೆ.

ಶ್ರೀಶೈಲದಲ್ಲೂ ಬೆಂಕಿ ಮತ್ತೆ ಆತಂಕದ ಕ್ಷಣ
ತಿರುಮಲ ತಿರುಪತಿ ಪ್ರದೇಶದಲ್ಲಿ ಹಬ್ಬುತ್ತಿರುವ ಬೆಂಕಿ ನಿಯಂತ್ರಣಕ್ಕೆ ಬರುವ ಮೊದಲೇ ಅತ್ತ ಶ್ರೀಶೈಲ ನಲ್ಲಮಲ ಅರಣ್ಯ ಪ್ರದೇಶದಲ್ಲಿ ಕೂಡ ಕಾಡ್ಗಿಚ್ಚು ಕಾಣಿಸಿಕೊಂಡಿದೆ.

ಬೆಂಕಿ ನಂದಿಸುವ ಕಾರ್ಯಾಚರಣೆ
ಶ್ರೀಶೈಲದ ಶಿಖರೇಶ್ವರ ಬೆಟ್ಟದಲ್ಲಿ ಕೂಡ ಅಗ್ನಿ ಅಟ್ಟಹಾಸ ಮುಂದುವರಿದಿದೆ. ನಿನ್ನೆ ರಾತ್ರಿ ವೇಳೆಗೆ ಈ ಬೆಂಕಿ ಇನ್ನೂ ಹೆಚ್ಚಿನ ಪ್ರದೇಶಕ್ಕೆ ವ್ಯಾಪಿಸಿ ಅಲ್ಲಿಯೂ ಕೂಡ ಬೆಂಕಿ ನಂದಿಸುವ ಕಾರ್ಯಾಚರಣೆ ಕೈಗೊಳ್ಳಲಾಗಿದೆ.












Click it and Unblock the Notifications