ಆರ್ ಜೆ ಸಂಧ್ಯಾ ಆತ್ಮಹತ್ಯೆ ಪ್ರಕರಣಕ್ಕೆ ಹೊಸ ತಿರುವು
ಹೈದರಾಬಾದಿನ ರೇಡಿಯೋ ಚಾರ್ಮಿನಾರ್ ನಲ್ಲಿ ಆರ್ ಜೆ ಆಗಿದ್ದ ಸಂಧ್ಯಾ ಅವರ ಆತ್ಮಹತ್ಯೆ ಪ್ರಕರಣಕ್ಕೆ ಹೊಸ ತಿರುವುದ್ ಸಿಕ್ಕಿದ್ದು, ಸಂಧ್ಯಾ ಅವರ ಪತಿ ಆರ್ಮಿ ಆಫೀಸರ್ ವೈಭವ್ ಅವರ ವಿರುದ್ಧ ಕಿರುಕುಳ ಪ್ರಕರಣ ದಾಖಲಾಗಿದೆ.
ಹೈದರಾಬಾದ್, ಏಪ್ರಿಲ್ 26: ಕಳೆದ ವಾರಾಂತ್ಯದಲ್ಲಿ ಸೂಫಿ ಸಂಗೀತ ಕಾರ್ಯಕ್ರಮವ ನಿರೂಪಣೆ ಮಾಡಿ ಸೈ ಎನಿಸಿಕೊಂಡಿದ್ದ ರೇಡಿಯೋ ಚಾರ್ಮಿನಾರ್ ಕೇಂದ್ರದ ರೇಡಿಯೋ ಜಾಕಿ ಸಂಧ್ಯಾ ಸಿಂಗ್ ಅವರು ಸೋಮವಾರದಂದು ಆತ್ಮಹತ್ಯೆಗೆ ಶರಣಾಗಿದ್ದರು. ಈಗ ಸಂಧ್ಯಾ ಅವರ ಸಾವಿಗೆ ಮಾನಸಿಕ ಒತ್ತಡವಷ್ಟೇ ಕಾರಣವಲ್ಲ, ವರದಕ್ಷಿಣೆ ಕಿರುಕುಳವೇ ಮುಖ್ಯ ಕಾರಣ ಎಂದು ಪೊಲೀಸರು ಹೇಳಿದ್ದಾರೆ.
ಸೋಮವಾರದಂದು ಕಚೇರಿ ತೊರೆಯುವುದಕ್ಕೂ ಮುನ್ನ ಸಂಧ್ಯಾ ಅವರು ತಮ್ಮ ಸಹದ್ಯೋಗಿ ಅಬ್ದುಲ್ ಸಮದ್ ಅವರೊಂದಿಗೆ ಮಾತನಾಡುತ್ತಾ, 'ಯಾಕೋ ಜೀವನ ಸಾಕಾಗಿ ಹೋಗಿದೆ' ಎಂದಿದ್ದಾರೆ. ಮಂಗಳವಾರ(ಏಪ್ರಿಲ್ 25)ದಂದು ಕೆಲಸಕ್ಕೆ ಹಾಜರಾಗಿರಲಿಲ್ಲ.
ಸಂಧ್ಯಾ ಅವರ ಸೋದರಿ ರಮ್ಯಾ ಅವರು ಸಂಧ್ಯಾ ಅವರ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿ, ಸಂಧ್ಯಾ ಅವರ ಪತಿ ಮೇಜರ್ ವಿಶಾಲ್ ವೈಭವ್ ಅವರ ವಿರುದ್ಧ ಪೊಲೀಸರಿಗೆ ದೂರು ಸಲ್ಲಿಸಿದ ಮೇಲೆ ಕಚೇರಿ ಸಿಬ್ಬಂದಿಗೆ ಸಂಧ್ಯಾ ಅವರ ಆತ್ಮಹತ್ಯೆ ಸುದ್ದಿ ಮುಟ್ಟಿದೆ.
ಉತ್ತರಪ್ರದೇಶ ಮೂಲದ ಸಂಧ್ಯಾ ಹಾಗು ವಿಶಾಲ್ ಅವರು 2015ರಲ್ಲಿ ಮದುವೆಯಾಗಿದ್ದರು. ಮದುವೆ ಸಂದರ್ಭದಲ್ಲಿ ವಿಶಾಲ್ ಅವರು ವರದಕ್ಷಿಣೆಗೆ ಬೇಡಿಕೆ ಇಟ್ಟಿರಲಿಲ್ಲ. ಆದರೆ, ಹೈದರಾಬಾದಿನ ದಂಡು ಪ್ರದೇಶದಲ್ಲಿ ನೆಲೆಸಿದ ಮೇಲೆ ಸಂಧ್ಯಾ ಅವರಿಗ್ ಕಿರುಕುಳ ಆರಂಭವಾಗಿದೆ.
ಆರೋಪಿ ವಿಶಾಲ್ ಅವರು ಎದೆನೋವು ಎಂದು ಹೇಳಿ ಮಿಲಿಟರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ವಿಶಾಲ್ ಅವರ ತನಿಖೆಗೆ ಸಹಕರಿಸುವುದಾಗಿ ಆರ್ಮಿ ಭರವಸೆ ನೀಡಿದೆ ಎಂದು ಹೈದರಾಬಾದ್ ಉತ್ತರವಲಯದ ಡಿಸಿಪಿ ಸುಮತಿ ಹೇಳಿದ್ದಾರೆ.