ಹೈದರಾಬಾದ್ : ಎಟಿಎಂನಲ್ಲಿ ಗುಂಡು ಹಾರಿಸಿದವ ಸಿಕ್ಕಿಬಿದ್ದ
ಹೈದರಾಬಾದ್, ಮೇ 22 : ಹೈದರಾಬಾದ್ನಲ್ಲಿ ಎಸ್ಬಿಐ ಬ್ಯಾಂಕ್ ಎಟಿಎಂನಲ್ಲಿ ಗುಂಡು ಹಾರಿಸಿ ಮಹಿಳೆಯಿಂದ ಹಣ, ಚಿನ್ನಾಭರಣ ದೋಚಿದ್ದ ಆರೋಪಿ ಒಂದೇ ದಿನದಲ್ಲಿ ಸಿಕ್ಕಿಬಿದ್ದಿದ್ದಾನೆ. ಹೊಟ್ಟೆ ಪಾಡಿಗಾಗಿ ನಗರಕ್ಕೆ ಬಂದಿದ್ದ ವ್ಯಕ್ತಿ ಈ ದರೋಡೆ ಮಾಡಿದ್ದ ಎಂದು ಪೊಲೀಸರು ಹೇಳಿದ್ದಾರೆ.
ಹೈದರಾಬಾದ್ನ ಯೂಸೂಫ್ಗಢ ಪ್ರದೇಶದಲ್ಲಿ ಬುಧವಾರ ಬೆಳಗ್ಗೆ 8 ಗಂಟೆಗೆ ಎಸ್ಬಿಐ ಎಟಿಎಂಗೆ ನುಗ್ಗಿದ ವ್ಯಕ್ತಿ ಗಾಳಿಯಲ್ಲಿ ಗುಂಡು ಹಾರಿಸಿ, ಹಣ ಮತ್ತು ಚಿನ್ನಾಭರಣ ದೋಚಿ ಪರಾರಿಯಾಗಿದ್ದ. ಗುರುವಾರ ಸಂಜೆ ಆತನನ್ನು ಪೊಲೀಸರು ಸಾಯಿದುರ್ಗಾ ಹಾಸ್ಟೆಲ್ ಬಳಿ ಬಂಧಿಸಿದ್ದಾರೆ.[ಎಟಿಎಂನಲ್ಲಿ ಮಹಿಳೆ ಮೇಲೆ ಗುಂಡಿನ ದಾಳಿ]

ಬಂಧಿತ ವ್ಯಕ್ತಿಯನ್ನು ಕಡಪ ಮೂಲದ ಶಿವಕುಮಾರ ರೆಡ್ಡಿ ಎಂದು ಗುರುತಿಸಲಾಗಿದೆ. ಬಂಧಿತನಿಂದ ಬಂದೂಕು ಮತ್ತು 6 ಬುಲೆಟ್ಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಮಹಾರಾಷ್ಟ್ರ ಗ್ಯಾಂಗ್ನಿಂದ 35 ಸಾವಿರ ರೂ. ನೀಡಿ ಈ ಗನ್ ಖರೀದಿ ಮಾಡಿದ್ದ ಎಂಬುದು ತನಿಖೆಯಿಂದ ತಿಳಿದುಬಂದಿದೆ. [ಹಣದ ಜೊತೆ ಎಟಿಎಂ ವಾಹನ ಅಪಹರಿಸಿದವರು ಸಿಕ್ಕಿಬಿದ್ರು]
ಶಿವಕುಮಾರ ಸಿಕ್ಕಿಬಿದ್ದದ್ದು ಹೇಗೆ? : ಕಡಪ ಮೂಲದ ಶಿವಕುಮಾರ ರೆಡ್ಡಿ ಮೂರು ವರ್ಷಗಳ ಹಿಂದೆ ಹೈದರಾಬಾದ್ ನಗರಕ್ಕೆ ಕೆಲಸ ಹುಡುಕಿಕೊಂಡು ಬಂದಿದ್ದ. 10ನೇ ತರಗತಿ ಓದಿದ್ದ ಆತ ಚಿಕ್ಕಪುಟ್ಟ ಕೆಲಸ ಮಾಡಿಕೊಂಡಿದ್ದ. ಕೆಲವು ತಿಂಗಳ ಹಿಂದೆ ಗನ್ ಖರೀದಿ ಮಾಡಿದ್ದ ಆತ ದರೋಡೆ ಸಂಚು ರೂಪಿಸಿದ್ದ.
ಬುಧವಾರ ಬೆಳಗ್ಗೆ 8 ಗಂಟೆಗೆ ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಯೂಸೂಫ್ಗಢ ಪ್ರದೇಶದ ಎಟಿಎಂಗೆ ನುಗ್ಗಿ ಮಹಿಳೆಗೆ ಬೆದರಿಸಿ ಹಣ ಮತ್ತು ಚಿನ್ನಾಭರಣ ದೋಚಿದ್ದ. ಎಟಿಎಂನಿಂದ ಹೊರಬಂದ ಮಹಿಳೆ ಈ ಬಗ್ಗೆ ಗಸ್ತು ತಿರುಗುತ್ತಿದ್ದ ಪೊಲೀಸರಿಗೆ ಮಾಹಿತಿ ನೀಡಿದ್ದಳು.
ಸಿಸಿಟಿವಿಯಲ್ಲಿ ಶಿವಕುಮಾರ ರೆಡ್ಡಿ ಎಟಿಎಂಗೆ ಬರುವ ಮತ್ತು ಹೋಗುವ ದೃಶ್ಯ ಸೆರೆಯಾಗಿತ್ತು. ಇದರ ಆಧಾರದ ಮೇಲೆ ಪೊಲೀಸರು ತನಿಖೆ ಕೈಗೊಂಡಿದ್ದರು. ಗುರುವಾರ ಸಂಜೆ ಮದುರಾನಗರದ ಸಾಯಿದುರ್ಗಾ ಹಾಸ್ಟೆಲ್ ಸಮೀಪ ಆರೋಪಿಯನ್ನು ಹುಡುಕಲು ಪೊಲೀಸರು ಹೋಗುತ್ತಿದ್ದಾಗ ಆತ ಪರಾರಿಯಾಗಲು ಯತ್ನಿಸಿದ.
ತಕ್ಷಣ ಜನರ ಸಹಾಯದಿಂದ ಆತನನ್ನು ಹಿಡಿದ ಪೊಲೀಸರು ಜೇಬಿನಲ್ಲಿದ್ದ ಗನ್ಅನ್ನು ವಶಕ್ಕೆ ಪಡೆದರು. ಪೊಲೀಸ್ ಠಾಣೆಗೆ ಕರೆತಂದು ವಿಚಾರಣೆ ನಡೆಸಿದಾಗ ಎಟಿಎಂನಲ್ಲಿ ದರೋಡೆ ಮಾಡಿದ್ದೆ ಎಂಬುದನ್ನು ಆತ ಒಪ್ಪಿಕೊಂಡಿದ್ದಾನೆ.












Click it and Unblock the Notifications