ತಗ್ಗಿದ ಹೆಲೆನ್ ಅಬ್ಬರ, ಲೆಹರ್ ಆರ್ಭಟ ಭೀತಿ
ಹೈದರಾಬಾದ್, ನ.24: ಬಂಗಾಳಕೊಲ್ಲಿ ಯಲ್ಲಿ ತೀವ್ರ ವಾಯುಭಾರ ಕುಸಿತದ ಪರಿಣಾಮ ಆಂಧ್ರ ಪ್ರದೇಶದ ಕರಾವಳಿಗೆ ಅಪ್ಪಳಿಸಿದ ಹೆಲೆನ್ ಚಂಡಮಾರುತದ ಅಬ್ಬರ ತಣ್ಣಗಾಗಿದೆ. ಆಂಧ್ರದ ಕರಾವಳಿ, ಕರ್ನಾಟಕದ ದಕ್ಷಿಣ ಒಳನಾಡು ಪ್ರದೇಶಗಳಲ್ಲಿ ಇನ್ನೆರಡು ದಿನ ಮಳೆ ಬೀಳುವ ಮುನ್ಸೂಚನೆ ಜತೆಗೆ ಹೊಸ ಚಂಡಮಾರುತ ಮುಂದಿನ ವಾರಾಂತ್ಯಕ್ಕೆ ಆರ್ಭಟಿಸುವ ಸುಳಿವು ಸಿಕ್ಕಿದೆ.
ಭಾರಿ ಮಳೆ, ಚಂಡಮಾರುತದ ಹೊಡೆತಕ್ಕೆ ಸಿಲುಕಿ ಕಣ್ಮರೆಯಾಗಿದ್ದ 30 ಜನರಿದ್ದ ಮೀನುಗಾರರ ತಂಡದ ಬಹುತೇಕ ಸದಸ್ಯರು ರಕ್ಷಿಸಲಾಗಿದೆ. ಆದರೂ ಒಟ್ಟಾರೆ 13 ಜನರನ್ನು ಹೆಲೆನ್ ಬಲಿತೆಗೆದುಕೊಂಡಿದೆ. ಸುಮಾರು 1.7 ಲಕ್ಷ ಹೆಕ್ಟೇರ್ ಕೃಷಿಭೂಮಿಗೆ ಹಾನಿ ಸಂಭವಿಸಿದೆ.
ನೆಲ್ಲೂರು ಮತ್ತು ಪ್ರಕಾಶಂ ಜಿಲ್ಲೆಯಲ್ಲಿ ವ್ಯಾಪಕ ಮಳೆಯಾಗುತ್ತಿದ್ದು, ಗುಂಟೂರು, ಕೃಷ್ಣಾ ಜಿಲ್ಲೆಯಲ್ಲೂ ತಂಪು ವಾತಾವರಣ ಮುಂದುವರೆದಿದೆ. ಇನ್ನೆರಡು ದಿನ ದಕ್ಷಿಣ ಕರಾವಳಿ ಭಾಗದಲ್ಲಿ ಸಾಧಾರಣ ಮಳೆಯಾಗುವ ಸಂಭವವಿದೆ ಎಂದು ವಿಪತ್ತು ನಿರ್ವಹಣಾ ಆಯುಕ್ತ ಸಿ.ಪಾರ್ಥಸಾರಥಿ ತಿಳಿಸಿದ್ದಾರೆ.
ಆಂಧ್ರದ ಓಂಗಲ್, ಕವಾಲಿ ಮತ್ತು ಶ್ರೀಹರಿಕೋಟ ನಡುವೆ ಹೆಲೆನ್ ಚಂಡಮಾರುತ ಪ್ರತಿ ಗಂಟೆಗೆ 55ಕಿಮೀ ನಿಂದ 60 ಕಿಮೀ ವೇಗದಲ್ಲಿ ಬೀಸಿತ್ತು. ಹೆಲೆನ್ ಚಂಡಮಾರುತ ಅಪ್ಪಳಿಸುವ ಸಾಧ್ಯತೆಯಿರುವುದರಿಂದ ಕರಾವಳಿ ತೀರ ಪ್ರದೇಶದ ಜಿಲ್ಲೆಗಳಲ್ಲಿ ಭಾರೀ ಸಂಖ್ಯೆಯ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ ಮಾಡಲಾಗಿತ್ತು. ಹೆಲೆನ್ ಆರ್ಭಟದ ನಂತರದ ಚಿತ್ರಗಳು, ಮತ್ತೊಂದು ಚಂಡಮಾರುತದ ಭೀತಿ ಬಗ್ಗೆ ಮಾಹಿತಿ ಮುಂದಿದೆ. ತಪ್ಪದೇ ನೋಡಿ...

ಇಲಾಖೆ ಮುನ್ಸೂಚನೆ
ನೆಲ್ಲೂರು, ಪ್ರಕಾಶಂ, ಗುಂಟೂರು, ಕೃಷ್ಣಾ ಮತ್ತಿತರ ಕಡೆ ಮಳೆ ಪ್ರಮಾಣ ಹೆಚ್ಚಾಗಿದೆ. ಉತ್ತರ ಆಂಧ್ರ ಪ್ರದೇಶ, ಉತ್ತರ ತಮಿಳುನಾಡು, ಕರ್ನಾಟಕ ದಕ್ಷಿಣ ಒಳನಾಡು, ರಾಯಚೂರು ಭಾಗಗಳಲ್ಲಿ ಸಾಧಾರಣ ಮಳೆ ಮತ್ತು ಪುದುಚೇರಿಗಳಲ್ಲಿ ವ್ಯಾಪಕ ಮಳೆಯಾಗುವ ಸಂಭವವಿದೆ ಎಂದು ಹವಾಮಾನ ಇಲಾಖೆ ಸೂಚಿಸಿದೆ

ಲೆಹರ್ ಎಲ್ಲಿದೆ
ಫೈಲಿನ್, ಹೆಲೆನ್ ನಂತರ ಆಂಧ್ರದ ಕರಾವಳಿ ಈಗ ಲೆಹರ್ ಚಂಡಮಾರುತದ ಹೊಡೆತಕ್ಕೆ ಸಿಗುವ ಸಾಧ್ಯತೆಯಿದೆ. ನ.27-28 ರ ವೇಳೆಗೆ ಲೆಹರ್ ಚಂಡಮಾರುತ ಅಪ್ಪಳಿಸಲಿದೆ ಎಂದು ಹವಾಮಾನ ಇಲಾಖೆ ಸೂಚಿಸಿದೆ.
ಅಂಡಮಾನ್ ಸಮುದ್ರದ ಬಳಿ ಲೆಹರ್ ಭಾನುವಾರ ಬೆಳಗ್ಗೆ ಕಾಣಿಸಿಕೊಂಡಿರುವುದನ್ನು ಇಲಾಖೆ ಖಚಿತಪಡಿಸಿದೆ. ಪೋರ್ಟ್ ಬ್ಲೇರ್ ನಿಂದ 300 ಕಿ.ಮೀ ದೂರದಲ್ಲಿ ಕಾಣಿಸಿಕೊಂಡಿರುವ ಈ ಚಂಡಮಾರುತ ಬಂಗಾಳ ಕೊಲ್ಲಿಯ ಆಗ್ನೇಯ ಭಾಗಕ್ಕೆ ಮೊದಲು ಬರಲಿದೆ ನಂತರ ಆಂಧ್ರದ ವಾಯುವ್ಯ, ಪಶ್ಚಿಮ ಕರಾವಳಿಯಲ್ಲಿ ಹೆಲೆನ್ ಗಿಂತ ಹೆಚ್ಚಿನ ಪ್ರಮಾಣದಲ್ಲಿ ಅಬ್ಬರಿಸಲಿದೆ. ಹೀಗಾಗಿ, ದಕ್ಷಿಣ ಭಾರತದಲ್ಲಿ ನಾಳೆಯಿಂದಲೇ ಮಳೆ ಪ್ರಮಾಣ ಹೆಚ್ಚಾಗಲಿದೆ ಎಂದು ತಿಳಿದು ಬಂದಿದೆ.

ಬೆಂಗಳೂರಿನಲ್ಲಿ ಹಾನಿ
ಶನಿವಾರ ರಾತ್ರಿ ಭಾರಿ ಮಳೆಯಿಂದ ಮಳಿಗೆ(ಬನಶಂಕರಿ ಹೊರವರ್ತುಲ ರಸ್ತೆ ಕಾಮಾಕ್ಯ ಚಿತ್ರಮಂದಿರ, ಬಿಗ್ ಬಜಾರ್), ಶೇಷಾದ್ರಿಪುರದ ರೇಲ್ವೆ ಸೇತುವೆ ಕೆಳಗೆ, ಕೆ.ಆರ್. ವೃತ್ತದ ಸುರಂಗ ಮಾರ್ಗ, ಕಾವೇರಿ ಜಂಕ್ಷನ್ ನ ಮ್ಯಾಜಿಕ್ ಬಾಕ್ಸ್ ಗಳಲ್ಲಿ ನೀರು ತುಂಬಿಕೊಂಡಿತ್ತು.
ಮೆಜೆಸ್ಟಿಕ್, ಓಕುಳಿಪುರ, ಶಿವಾಜಿನಗರ, ಕಾಮಾಕ್ಯ, ಬನಶಂಕರಿ, ಕೆ.ಆರ್.ಪುರ, ಬಾಪೂಜಿ ನಗರ, ಮಾಗಡಿ ರಸ್ತೆ, ಶಾಂತಿನಗರ, ಜೆ.ಪಿ.ನಗರ, ಪುಟ್ಟೇನಹಳ್ಳಿ, ಶಿವಾಜಿನಗರ, ವಸಂತನಗರ, ಕಾಮಾಕ್ಷಿಪಾಳ್ಯ, ಪಟ್ಟೆಗಾರಪಾಳ್ಯ ಮುಂತಾದ ಪ್ರದೇಶಗಳ 100 ಮನೆಗಳಿಗೆ ನೀರು ನುಗ್ಗಿತ್ತು.
ಡಾ.ರಾಜ್ಕುಮಾರ್ ರಸ್ತೆ, ಕಾರ್ಪೊರೇಷನ್ ವೃತ್ತ, ಕೆ.ಜಿ.ರಸ್ತೆ, ರಿಚ್ಮಂಡ್ ರಸ್ತೆ, ಬಳ್ಳಾರಿ ರಸ್ತೆ, ಮೈಸೂರು ರಸ್ತೆ, ಹಳೇ ಮದ್ರಾಸ್ ರಸ್ತೆ, ಕನಕಪುರ ರಸ್ತೆ, ಬನ್ನೇರುಘಟ್ಟ ರಸ್ತೆ, ತುಮಕೂರು ರಸ್ತೆ, ಹೊಸೂರು ರಸ್ತೆಯಲ್ಲಿ ಸಂಚಾರ ದಟ್ಟಣೆ ಉಂಟಾಗಿತ್ತು
ನಾಲ್ಕು ಗಂಟೆಗಳ ಅವಧಿಯಲ್ಲಿ 106.2 ಮಿಮೀ ಮಳೆ ಸುರಿದಿದ್ದು, ಮತ್ತಿಕೆರೆ, ಯಶವಂತಪುರ, ಜೆ.ಪಿ.ನಗರದ ಸೇರಿದಂತೆ ಬಹಳಷ್ಟು ಪ್ರದೇಶಗಳಲ್ಲಿ ವಿದ್ಯುತ್ ಸಂಚಾರ ಸ್ಥಗಿತಗೊಂಡಿತ್ತು.

ಹೆಲೆನ್ ಆರ್ಭಟ ನಂತರ
ಹೆಲೆನ್ ಚಂಡಮಾರುತದ ಆರ್ಭಟ ನಂತರ ವೈಜಾಕ್ ನಲ್ಲಿ ಜನರು ನೆಮ್ಮದಿಯಿಂದ ಉಸಿರಾಡುತ್ತಿದ್ದಾರೆ

ಕರಾವಳಿ ತೀರ ಪ್ರದೇಶ
ಆಂಧ್ರದ ಓಂಗಲ್, ಕವಾಲಿ ಮತ್ತು ಶ್ರೀಹರಿಕೋಟ ನಡುವೆ ಹೆಲೆನ್ ಚಂಡಮಾರುತ ಪ್ರತಿ ಗಂಟೆಗೆ 55ಕಿಮೀ ನಿಂದ 60 ಕಿಮೀ ವೇಗದಲ್ಲಿ ಬೀಸಿತ್ತು. ಹೆಲೆನ್ ಚಂಡಮಾರುತ ಅಪ್ಪಳಿಸುವ ಸಾಧ್ಯತೆಯಿರುವುದರಿಂದ ಕರಾವಳಿ ತೀರ ಪ್ರದೇಶದ ಜಿಲ್ಲೆಗಳಲ್ಲಿ ಭಾರೀ ಸಂಖ್ಯೆಯ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ ಮಾಡಲಾಗಿತ್ತು












Click it and Unblock the Notifications