ತೆಲಂಗಾಣದಲ್ಲಿ ಜನಪ್ರಿಯವಾದ ಬಸ್ತಿ ದವಾಖಾನೆಗಳು; ಕೊಳೆಗೇರಿ ನಿವಾಸಿಗಳ ಪಾಲಿಗೆ ಅಮೃತ ಸಂಜೀವಿನಿ
ಹೈದರಾಬಾದ್, ಮೇ 16: ಕೊಳೆಗೇರಿ ನಿವಾಸಿಗಳ ಅನುಕೂಲಕ್ಕಾಗಿ ತೆಲಂಗಾಣ ಸರಕಾರ ವಿವಿಧೆಡೆ ಸ್ಥಾಪಿಸಿರುವ ಆರೋಗ್ಯ ಕ್ಲಿನಿಕ್ಗಳು ಜನಪ್ರಿಯವಾಗುತ್ತಿವೆ. ನಗರ ಪ್ರದೇಶಗಳ ಸ್ಲಂಗಳಲ್ಲಿ 256 ಬಸ್ತಿ ದವಾಖಾನೆಗಳನ್ನು ಸರಕಾರ ನಡೆಸುತ್ತಿದೆ. ಪ್ರತಿಯೊಂದು ಕ್ಲಿನಿಕ್ನಲ್ಲೂ ಹತ್ತು ಸಾವಿರ ಜನರವರೆಗೆ ಆರೋಗ್ಯ ಸೇವೆಗಳನ್ನು ಉಚಿತವಾಗಿ ನೀಡುವ ವ್ಯವಸ್ಥೆ ಮಾಡಲಾಗಿದೆ.
ಹೊರರೋಗಿ ತಪಾಸಣೆ, ಔಷಧ, ಮೂಲಭೂತವಾದ ಲ್ಯಾಬ್ ಪರೀಕ್ಷೆಗಳು, ಸೋಂಕು ಹರಡದ ಖಾಹಿಲೆಗಳಿಗೆ ತಪಾಸಣೆ, ಗರ್ಭಿಣಿ ಬಾಣಂತಿಯರ ಆರೋಗ್ಯ ತಪಾಸಣೆ ಇತ್ಯಾದಿ 53 ವಿವಿಧ ರೀತಿಯ ಆರೋಗ್ಯ ಸೇವೆಗಳನ್ನು ಈ ದವಾಖಾನೆಗಳಲ್ಲಿ ಉಚಿತವಾಗಿ ನೀಡಲಾಗುತ್ತದೆ. ಈ ಕ್ಲಿನಿಕ್ನಲ್ಲಿರು ವೈದ್ಯರ ಜೊತೆಗೆ ಅಗತ್ಯ ಬಿದ್ದಲ್ಲಿ ತಜ್ಞ ವೈದ್ಯರು ವಿಡಿಯೋ ಕಾಲ್ ಮೂಲಕ ಸಮಾಲೋಚನೆ ನೀಡುವ ವ್ಯವಸ್ಥೆ ಕೂಡ ಇರುತ್ತದೆ ಎಂಬ ಮಾಹಿತಿ ಲಭ್ಯವಾಗಿದೆ.
ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ವೆಚ್ಚ ನೀಡಲಾಗದ ಬಡ ರೋಗಿಗಳಿಗೆ ಬಸ್ತಿ ದವಾಖಾನೆಗಳು ವರದಾನವಾಗಿವೆ. ಇಲ್ಲಿನ ವೈದ್ಯರು ಒಳ್ಳೆಯ ಸೇವೆ ನೀಡುತ್ತಾರೆ. ಬಹುತೇಕ ಅರೋಗ್ಯ ಸಮಸ್ಯೆಗಳಿಗೆ ಇಲ್ಲಿ ಚಿಕಿತ್ಸೆ ಸಿಗುತ್ತದೆ. ಔಷಧಗಳೂ ಕೂಡ ಸಿಗುತ್ತವೆ ಎಂದು ಸ್ಥಳೀಯರು ಹೇಳುತ್ತಾರೆ ಎಂದು ಎಎನ್ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

"ನಾನು ಕಳೆದ ಎರಡು ವರ್ಷಗಳಿಂದ ಇಲ್ಲಿಗೆ ಚಿಕಿತ್ಸೆಗೆ ಬರುತ್ತಿದ್ದೇನೆ. ಮಕ್ಕಳಿಂದ ಹಿಡಿದು ವೃದ್ಧರವರೆಗೆ ಇಲ್ಲಿಗೆ ಬರುವ ಪ್ರತಿಯೊಬ್ಬರಿಗೂ ಉಚಿತವಾಗಿ ಚಿಕಿತ್ಸೆ ಕೊಡಲಾಗುತ್ತದೆ. ತೆಲಂಗಾಣ ಸರಕಾರ ಒಳ್ಳೆಯ ಸೇವೆ ನೀಡುತ್ತಿದೆ. ನಮ್ಮ ಮನೆ ಬಳಿಯೇ ಉತ್ತಮ ವೈದ್ಯಕೀಯ ಸೇವೆ ನೀಡಿದ್ದಕ್ಕೆ ಕೆಸಿಆರ್ ಸರಕಾರಕ್ಕೆ ಧನ್ಯವಾದ ಹೇಳುತ್ತೇವೆ" ಎಂದು ಸ್ಥಳೀಯರಾದ ಮೊಹಮ್ಮದ್ ಅಬ್ದುಲ್ ರಜಾಕ್ ಹೇಳಿದ್ದಾರೆ.
ಸ್ಲಂ ಪ್ರದೇಶಗಳ ಬಳಿಯೇ ಬಸ್ತಿ ದವಾಖಾನೆಗಳಿರುವುದರಿಂದ ರೋಗಿಗಳು ವೈದ್ಯರ ಸಂಪರ್ಕಕ್ಕೆ ದೂರ ಹೋಗುವ ಪ್ರಮೇಯ ಇರುವುದಿಲ್ಲ. ಪ್ರಾಥಮಿಕ ಆರೋಗ್ಯ ಆರೈಕೆ ಈ ದವಾಖಾನೆಗಳಲ್ಲೇ ಆಗುವುದರಿಂದ ದೊಡ್ಡ ಆಸ್ಪತ್ರೆಗಳ ಮೇಲಿನ ಒತ್ತಡ ಕಡಿಮೆ ಆಗುತ್ತದೆ ಎಂಬ ಅಭಿಪ್ರಾಯ ಇದೆ.
"ನಮ್ಮ ಈ ದವಾಖಾನೆಯನ್ನು 2020 ಫೆಬ್ರವರಿಯಲ್ಲಿ ಅರಂಭಿಸಲಾಯಿತು. ಮೊದಲ ದಿನದಿಂದಲೂ ನಾನಿಲ್ಲಿ ಇದ್ದೇನೆ. ಜ್ವರ, ಶೀತ, ಕೆಮ್ಮು ಮೊದಲಾದ ಸಣ್ಣಪುಟ್ಟ ಜಾಢ್ಯಗಳಿಂದ ಹಿಡಿದು ಬಿಪಿ, ಶುಗರ್, ಥೈರಾಯ್ಡ್ ಮೊದಲಾದ ಸೋಂಕು ಹರಡದ ಕಾಯಿಲೆಗಳವರೆಗೂ ಇಲ್ಲಿ ಚಿಕಿತ್ಸೆ ನೀಡುತ್ತೇವೆ. ಈ ದವಾಖಾನೆಗಳು ಇಲ್ಲದೇ ಹೋದರೆ ಜನರು ಸಣ್ಣಪುಟ್ಟ ಕಾಯಿಲೆಗೂ ಉಸ್ಮಾನಿಯಾ ಅಥವಾ ಗಾಂಧಿ ಆಸ್ಪತ್ರೆಗಳಿಗೆ ಹೋಗಬೇಕಾಗುತ್ತಿತ್ತು" ಎಂದು ಹೈದರಾಬಾದ್ನ ರೈನ್ ಬಜಾರ್ ಪ್ರದೇಶದಲ್ಲಿರುವ ಬಸ್ತಿ ದವಾಖಾನದ ವೈದ್ಯ ಡಾ. ಫರಾ ನಾಜ್ ಹೇಳುತ್ತಾರೆ.

ಬಸ್ತಿ ದವಾಖಾನೆಗಳು ವರ್ಷದ 365 ದಿನಗಳೂ ಕಾರ್ಯನಿರ್ವಹಿಸುತ್ತವೆ. ಬೆಳಗ್ಗೆಯಿಂದ ಸಂಜೆಯವರೆಗೆ ತೆರೆದಿರುತ್ತವೆ. ಭಾನುವಾರದ ದಿನಗಳಂದು ಬೆಳಗ್ಗೆ 9ರಿಂದ ಮಧ್ಯಾಹ್ನ 2 ಗಂಟೆಯವರೆಗೆ ದವಾಖಾನೆಗಳು ತೆರೆದಿರುತ್ತವೆ.

ಸರಾಸರಿಯಾಗಿ ಪ್ರತೀ ದಿನವೂ 80-150 ಮಂದಿ ರೋಗಿಗಳು ಒಂದು ದವಾಖಾನೆಯಲ್ಲಿ ಚಿಕಿತ್ಸೆ ಪಡೆಯುತ್ತಾರೆ. 25-30 ಮಂದಿಗೆ ನಿತ್ಯ ಲ್ಯಾಬ್ ಸರ್ವಿಸ್ ಇರುತ್ತದೆ. ಇಲ್ಲಿ ಒಂದು ರೋಗಕ್ಕೆ ಚಿಕಿತ್ಸೆ ಲಭ್ಯವಿಲ್ಲದಿದ್ದರೆ ಆನ್ಲೈನ್ ಮೂಲಕ ತಜ್ಞ ವೈದ್ಯರ ಜೊತೆ ಸಮಾಲೋಚನೆಯ ವ್ಯವಸ್ಥೆ ಮಾಡಲಾಗುತ್ತದೆ.
(ಒನ್ಇಂಡಿಯಾ ಸುದ್ದಿ)












Click it and Unblock the Notifications