185 ಅಭ್ಯರ್ಥಿಗಳಿರುವ ನಿಜಾಮ್ ಬಾದ್ ಕ್ಷೇತ್ರದಲ್ಲಿ ಬ್ಯಾಲಟ್ ಪೇಪರ್
ಹೈದರಾಬಾದ್, ಮಾರ್ಚ್ 29: ಅಭ್ಯರ್ಥಿಗಳ ಸಂಖ್ಯೆ ಸಿಕ್ಕಾಪಟ್ಟೆ ಇರುವುದರಿಂದ ತೆಲಂಗಾಣ ರಾಜ್ಯದ ನಿಜಾಮ್ ಬಾದ್ ಲೋಕಸಭಾ ಕ್ಷೇತ್ರಕ್ಕೆ ಏಪ್ರಿಲ್ ಹನ್ನೊಂದರಂದು ನಡೆಯುವ ಚುನಾವಣೆಯಲ್ಲಿ ವಿದ್ಯುನ್ಮಾನ ಮತಯಂತ್ರ (ಇವಿಎಂ) ಬಳಸುತ್ತಿಲ್ಲ. ಈ ಕ್ಷೇತ್ರದಿಂದ ಸದ್ಯಕ್ಕೆ ತೆಲಂಗಾಣ ರಾಷ್ಟ್ರ ಸಮಿತಿ ಅಧ್ಯಕ್ಷ- ಮುಖ್ಯಮಂತ್ರಿ ಚಂದ್ರಶೇಖರ್ ರಾವ್ ಮಗಳು ಕಲ್ವಕುಂಟ್ಲ ಕವಿತಾ ಸ್ಪರ್ಧಿಸುತ್ತಿದ್ದಾರೆ.
ಮಾಧ್ಯಮಗಳ ಜತೆ ಮಾತನಾಡಿದ ತೆಲಂಗಾಣ ಮುಖ್ಯ ಚುನಾವಣಾಧಿಕಾರಿ ರಜತ್ ಕುಮಾರ್, 185 ಅಭ್ಯರ್ಥಿಗಳು ನಿಜಾಮ್ ಬಾದ್ ಕ್ಷೇತ್ರದಿಂದ ಕಣದಲ್ಲಿದ್ದಾರೆ. ಗುರುವಾರ ಸಂಜೆ ನಾಮಪತ್ರ ವಾಪಸ್ ಪಡೆಯಲು ಕೊನೆ ಅವಕಾಶವೂ ಮುಗಿದಿದೆ ಎಂದಿದ್ದಾರೆ.
'ವಿದ್ಯುನ್ಮಾನ ಮತಯಂತ್ರ ಬಳಕೆ ವಿರೋಧಿಸಿ ಸುಪ್ರೀಂ ಮೆಟ್ಟಿಲೇರಲು ತೀರ್ಮಾನ'
ಮಾರ್ಚ್ ಇಪ್ಪತ್ತೈದನೇ ತಾರೀಕು ಹೊತ್ತಿಗೆ ಇನ್ನೂರಕ್ಕೂ ಹೆಚ್ಚು ಮಂದಿ ನಾಮಪತ್ರ ಸಲ್ಲಿಸಿದ್ದರು. ಕೆಲವು ತಿರಸ್ಕೃತವಾದವು. ಕೊನೆಗೆ 189 ಮಂದಿ ಉಳಿದರು. ಅದರಲ್ಲಿ 4 ಮಂದಿ ನಾಮಪತ್ರ ಹಿಂಪಡೆದಿದ್ದಾರೆ ಎಂದು ತಿಳಿಸಿದ್ದಾರೆ.
ಕವಿತಾ ಹೊರತುಪಡಿಸಿ, ಕಾಂಗ್ರೆಸ್ ನಿಂದ ಮಧು ಯಕ್ಷಿ ಗೌಡ್, ಬಿಜೆಪಿಯ ಧರ್ಮಪುರಿ ಅರವಿಂದ್ ಸ್ಪರ್ಧೆಯಲ್ಲಿದ್ದಾರೆ. ಇವರನ್ನು ಹೊರತುಪಡಿಸಿ ಇತರ ರಾಜಕೀಯ ಪಕ್ಷಗಳು ನಾಲ್ಕು ಮಂದಿ ಸ್ಪರ್ಧಿಸುತ್ತಿದ್ದಾರೆ. ಉಳಿದಂತೆ ನೂರಾ ಎಪ್ಪತ್ತೆಂಟು ಮಂದಿ ರೈತರು ಪಕ್ಷೇತರರಾಗಿ ಅಖಾಡದಲ್ಲಿದ್ದಾರೆ. ತಮ್ಮ ಬೆಳೆಗೆ ನ್ಯಾಯಯುತವಾದ ಬೆಲೆ ಸಿಗಬೇಕು ಎಂದು ಒತ್ತಾಯಿಸಲು ಈ ಮೂಲಕ ಗಮನ ಸೆಳೆಯುತ್ತಿದ್ದಾರೆ.
ಮೊದಲಿಗೆ ಸಾವಿರ ರೈತರು ಸ್ಪರ್ಧೆ ಮಾಡಬೇಕು ಎಂದು ಆಲೋಚಿಸಿದ್ದರು. ಆನಂತರ ಸಂಖ್ಯೆಯು ಇಳಿಮುಖವಾಯಿತು. ಇಷ್ಟೊಂದು ಸಂಖ್ಯೆಯಲ್ಲಿ ಸ್ಪರ್ಧಿಗಳು ಇರುವುದರಿಂದ ಚುನಾವಣಾಧಿಕಾರಿಗಳಿಗೂ ಬೇರೆ ದಾರಿ ತೋಚುತ್ತಿಲ್ಲ. ಆದ್ದರಿಂದಲೇ ಬ್ಯಾಲಟ್ ಪೇಪರ್ ಬಳಸುತ್ತಿದ್ದಾರೆ.
ಲಂಡನ್ನಿನಲ್ಲಿ ಭಾರತದ ಇವಿಎಂ ಹ್ಯಾಕಿಂಗ್ : ಇದು ಅಸಾಧ್ಯ ಎಂದ ಆಯೋಗ
ನಾವು ಬ್ಯಾಲಟ್ ಪೇಪರ್ ಮೂಲಕ ಮತದಾನಕ್ಕೆ ವ್ಯವಸ್ಥೆ ಮಾಡುತ್ತೇವೆ. ಇವಿಎಂ ಬಳಸಿ ಚುನಾವಣೆ ನಡೆಸಲು ಆಗಲ್ಲ. ಈ ವಿಷಯವನ್ನು ಭಾರತದ ಚುನಾವಣಾ ಆಯೋಗದ ಗಮನಕ್ಕೆ ತಂದಿದ್ದೇವೆ. ಸೂಚನೆಗಾಗಿ ಎದುರು ನೋಡುತ್ತಿದ್ದೇವೆ ಎಂದು ಮುಖ್ಯ ಚುನಾವಣಾಧಿಕಾರಿ ತಿಳಿಸಿದ್ದಾರೆ.
ಇವಿಎಂನಲ್ಲಿ ಹದಿನಾರು ಹೆಸರುಗಳಷ್ಟೇ ಹೊಂದಿಸಬಹುದು. ಅಂಥ ನಾಲ್ಕು ಇವಿಎಂಗಳನ್ನು ಒಂದಕ್ಕೊಂದು ಹೊಂದಿಕೊಂಡಂತೆ ಮತದಾನಕ್ಕೆ ವ್ಯವಸ್ಥೆ ಮಾಡಬಹುದು. ಪ್ರತಿ ಕಂಟ್ರೋಲ್ ಯೂನಿಟ್ ನಲ್ಲಿ ಗರಿಷ್ಠ ಅರವತ್ನಾಲ್ಕು ಅಭ್ಯರ್ಥಿಗಳಿಗೆ ವ್ಯವಸ್ಥೆ ಮಾಡಬಹುದು. ನಿಜಾಮ್ ಬಾದ್ ನಲ್ಲಿ ಒಟ್ಟು ಹದಿನೈದು ಲಕ್ಷ ಮತದಾರರಿದ್ದಾರೆ.
1996ರ ಲೋಕಸಭಾ ಚುನಾವಣೆಯಲ್ಲಿ ನಲ್ಗೊಂಡಾ ಕ್ಷೇತ್ರದಲ್ಲಿ ದಾಖಲೆಯ 480 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದರು. ಜಿಲ್ಲೆಯಲ್ಲಿ ಫ್ಲೋರೈಡ್ ಯುಕ್ತ ಕುಡಿಯುವ ನೀರು ಕುಡಿಯುತ್ತಿರುವ ಕಾರಣಕ್ಕೆ ಪ್ರತಿಭಟನಾರ್ಥವಾಗಿ ಹಾಗೆ ಮಾಡಿದ್ದರು. ದೊಡ್ಡ ಬ್ಯಾಲಟ್ ಪೇಪರ್ ಅನ್ನು ಈಗ ಚುನಾವಣಾ ಆಯೋಗ ವ್ಯವಸ್ಥೆ ಮಾಡಬೇಕಾಗುತ್ತದೆ