ತೆಲಂಗಾಣದಲ್ಲಿ ಲಾಕ್ ಡೌನ್ ಅಗತ್ಯವಿಲ್ಲ ಎಂದಿದ್ದೇಕೆ ಆ ಸಚಿವರು?
ಹೈದ್ರಾಬಾದ್, ಜೂನ್.15: ನೊವೆಲ್ ಕೊರೊನಾ ವೈರಸ್ ಹರಡುವಿಕೆ ಭೀತಿ ನಡುವೆಯೂ ತೆಲಂಗಾಣದಲ್ಲಿ ಲಾಕ್ ಡೌನ್ ವಿಸ್ತರಿಸುವ ಯಾವುದೇ ಅಗತ್ಯವಿಲ್ಲ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಎಟಾಲಾ ರಾಜೇಂದರ್ ತಿಳಿಸಿದ್ದಾರೆ.
ಭಾರತದಲ್ಲಿ ಕೊರೊನಾ ವೈರಸ್ ನಿಂದ ಸುಮಾರು 10,000 ಜನರು ಬಲಿಯಾಗಿದ್ದಾರೆ. ಆದರೆ ಈ ಪೈಕಿ ತೆಲಂಗಾಣದಲ್ಲಿ 200 ಜನರು ಕೊವಿಡ್-19ನಿಂದ ಪ್ರಾಣ ಬಿಟ್ಟಿದ್ದಾರೆ. ಉಳಿದಂತೆ ರಾಜ್ಯದಲ್ಲಿ ಸೋಂಕಿತರಿಗೆ ಐಸಿಎಂಆರ್ ಹಾಗೂ ವಿಶ್ವ ಆರೋಗ್ಯ ಸಂಸ್ಥೆ ಮಾರ್ಗಸೂಚಿ ಅನ್ವಯ ಚಿಕಿತ್ಸೆ ಮುಂದುವರಿಸಲಾಗುತ್ತಿದೆ ಎಂದು ಸಚಿವ ರಾಜೇಂದರ್ ಹೇಳಿದ್ದಾರೆ.
ತೆಲಂಗಾಣದಲ್ಲಿ ಕೊರೊನಾ ವೈರಸ್ ಸೋಂಕು ಕಾಣಿಸಿಕೊಂಡವರ ಪೈಕಿ ಶೇ.97ರಷ್ಟು ಸೋಂಕಿತರು ಗುಣಮುಖರಾಗಿದ್ದಾರೆ. ಬಾಕಿ ಉಳಿದ ಶೇ.3ರಷ್ಟು ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ರಾಜ್ಯದಲ್ಲಿ ಕೊವಿಡ್-19 ನಿಂದ ಪ್ರಾಣ ಬಿಟ್ಟವರ ಪ್ರಮಾಣ ತೀರಾ ಕಡಿಮೆಯಾಗಿದೆ ಎಂದು ಮಾಹಿತಿ ನೀಡಿದರು.

ರಾಜ್ಯ ಸರ್ಕಾರದಿಂದ ಚಿಕಿತ್ಸೆ ದರ ನಿಗದಿ:
ತೆಲಂಗಾಣದಲ್ಲಿ ನೊವೆಲ್ ಕೊರೊನಾ ವೈರಸ್ ಸೋಂಕು ತಪಾಸಣೆಗೆ ಖಾಸಗಿ ಆಸ್ಪತ್ರೆ ಮತ್ತು ಲ್ಯಾಬೋರೇಟರಿಗಳಲ್ಲಿ ಇಂತಿಷ್ಟೇ ಹಣವನ್ನು ತೆಗೆದುಕೊಳ್ಳಬೇಕು ಎಂದು ನಿರ್ದಿಷ್ಟ ದರವನ್ನು ರಾಜ್ಯ ಸರ್ಕಾರವೇ ನಿಗದಿಗೊಳಿಸಿದೆ. ಕೊರೊನಾ ವೈರಸ್ ಸೋಂಕಿತರ ಚಿಕಿತ್ಸೆ ರಾಜ್ಯಾದ್ಯಂತ 54,000 ಪ್ರತ್ಯೇಕ ಬೆಡ್ ಗಳ ವ್ಯವಸ್ಥೆ ಮಾಡಲಾಗಿದೆ ಎಂದು ಆರೋಗ್ಯ ಸಚಿವ ರಾಜೇಂದರ್ ತಿಳಿಸಿದ್ದಾರೆ.
ಕೊರೊನಾ ವೈರಸ್ ಸಂಬಂಧಿತ ತಪಾಸಣೆಗೆ ಎಷ್ಟು ದರ ನಿಗದಿ?:
- ಕೊರೊನಾ ವೈರಸ್ ತಪಾಸಣೆಗೆ - 2,200 ರೂಪಾಯಿ
- ಸಾಮಾನ್ಯ ಐಸೋಲೇಷನ್ ಚಾರ್ಜ್ - 4,000 ರೂಪಾಯಿ
- ಒಂದು ದಿನ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ(ವೆಂಟಿಲೇಟರ್ ರಹಿತ) - 7,500 ರೂಪಾಯಿ
- ಒಂದು ದಿನ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ(ವೆಂಟಿಲೇಟರ್ ಸಹಿತ) - 9,000 ರೂಪಾಯಿ












Click it and Unblock the Notifications