ಮೋದಿಯನ್ನು ಸೋಲಿಸುವ ಶಕ್ತಿ ಕಾಂಗ್ರೆಸ್ಸಿಗಿಲ್ಲ: ಓವೈಸಿ ಅಚ್ಚರಿಯ ಹೇಳಿಕೆ
ಹೈದರಾಬಾದ್, ಡಿಸೆಂಬರ್ 12: "ಪ್ರಧಾನಿ ನರೇಂದ್ರ ಮೋದಿ ಅವರನ್ನು ಸೋಲಿಸುವ ಸಾಮರ್ಥ್ಯ ಕಾಂಗ್ರೆಸ್ಸಿಗಿಲ್ಲ" ಎಂದು ಹೈದರಾಬಾದ್ ಸಂಸದ ಮತ್ತು ಎಐಎಂಐಎಂ ಮುಖ್ಯಸ್ಥ ಅಸಾದುದ್ದಿನ್ ಓವೈಸಿ ಅಚ್ಚರಿಯ ಹೇಳಿಕೆ ನೀಡಿದ್ದಾರೆ.
"ಹಾಗಂತ ನಾನು ಬಿಜೆಪಿಯನ್ನು ಬೆಂಬಲಿಸುತ್ತಿಲ್ಲ. ಈ ದೇಶದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ಸಿಗೆ ಹೊರತಾದ ಪರ್ಯಾಯ ವ್ಯವಸ್ಥೆಯೊಂದರ ಅಗತ್ಯವಿದೆ" ಎಂದು ಹೇಳುವುದನ್ನೂ ಅವರು ಮರೆಯಲಿಲ್ಲ. ಪಂಚ ರಾಜ್ಯಗಳ ಚುನಾವಣೆಯ ಫಲಿತಾಂಶ ಮಂಗಳವಾರ ಹೊರಬಿದ್ದಿದ್ದು, ರಾಜಸ್ಥಾನ, ಮಧ್ಯಪ್ರದೇಶ ಮತ್ತು ಛತ್ತೀಸ್ ಗಢ ರಾಜ್ಯಗಳಲ್ಲಿ ಬಿಜೆಪಿಗೆ ಸೋಲಿನ ರುಚಿ ಉಣ್ಣಿಸಿ, ಕಾಂಗ್ರೆಸ್ ಗೆದ್ದಿದೆ. ಇದನ್ನು ಲೋಕಸಭಾ ಚುನಾವಣೆಯ ದಿಕ್ಸೂಚಿ ಎಂದೇ ಕರೆಯಲಾಗುತ್ತಿದೆ.
ಫಲಿತಾಂಶದ ಬಗ್ಗೆ ಮಾತನಾಡಿದ ಓವೈಸಿ, ತೆಲಂಗಾಣದಲ್ಲಿ ಭರ್ಜರಿ ಜಯ ಸಾಧಿಸಿದ ಕೆ ಚಂದ್ರಶೇಖರ್ ರಾವ್ ನೇತೃತ್ವದ ಟಿಆರ್ ಎಸ್ ಪಕ್ಷಕ್ಕೆ ಅಭಿನಂದನೆ ಸಲ್ಲಿಸಿದರು. ಜೊತೆಗೆ ತಮ್ಮ ಬೆಂಬಲವನ್ನೂ ಸೂಚಿಸಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಮೂರು ರಾಜ್ಯಗಳಲ್ಲಿ ಕಾಂಗ್ರೆಸ್ ಗೆಲುವು ಲೋಕಸಭಾ ಚುನಾವಣೆಗೆ ದಿಕ್ಸೂಚಿಯೇ ಎಂಬ ಪ್ರಶ್ನೆಗೆ ಉತ್ತರಿಸಿದ್ದು ಹೀಗೆ.

ಕಾಂಗ್ರೆಸ್ಸಿಗೆ ಆ ಸಾಮರ್ಥ್ಯವಿಲ್ಲ!
"ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಜಯಗಳಿಸುವುದಕ್ಕೆ ಸಾಧ್ಯವಿಲ್ಲ, ಮೋದಿಯವರನ್ನು ಸೋಲಿಸುವ ಸಾಮರ್ಥ್ಯ ಕಾಂಗ್ರೆಸ್ಸಿನಲ್ಲಿ ಯಾರಿಗೂ ಇಲ್ಲ. ಈ ಚುನಾವಣೆಯನ್ನೇ ಕಾಂಗ್ರೆಸ್ ಲೋಕಸಭಾ ಚುನಾವಣೆಗೆ ದಿಕ್ಸೂಚಿ ಎನ್ನುವುದಕ್ಕೆ ಬರುವದಿಲ್ಲ" - ಅಸಾದುದ್ದಿನ್ ಓವೈಸಿ

ಬಿಜೆಪಿಯನ್ನು ಸೋಲಿಸುವುದು ಸವಾಲು!
"ಬಿಜೆಪಿಯನ್ನು ಸೋಲಿಸುವುದು ನಮಗೆಲ್ಲರಿಗೂ ಒಂದು ಸವಾಲು. ಈ ದೇಶಕ್ಕೆ ಕಾಂಗ್ರೆಸ್ ಒಮದು ಪರ್ಯಾಯವಲ್ಲ. ಅಕಸ್ಮಾತ್ ಬಿಜೆಪಿಯನ್ನು ಸೋಲಿಸಿ, 2019 ರಲ್ಲಿ ನರೇಂದ್ರ ಮೋದಿ ಅವರು ಪ್ರಧಾನಿಯಾಗುವುದನ್ನು ತಪ್ಪಿಸುವುದಾದರೆ, ಬಿಜೆಪಿ ಮತ್ತು ಕಾಂಗ್ರೆಸ್ ಹೊರತಾದ ಮತ್ತೊಂದು ಮೈತ್ರಿಕೂಟ ಆರಂಭವಾಗಬೇಕಿದೆ" ಎಂದು ಪರೋಕ್ಷವಾಗಿ ಅವರು ಕಾಂಗ್ರೆಸ್ ಇಲ್ಲದ ಮಹಾಘಟಬಂಧನಕ್ಕೆ ಬೆಂಬಲ ನೀಡಿದ್ದಾರೆ.

ಪ್ರಾದೇಶಿಕ ಪಕ್ಷಗಳು ಮುಂದೆಬರಲಿ
ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್ ಅನ್ನು ಸೋಲಿಸಲು ಪ್ರಾದೇಶಿಕ ಪಕ್ಷಗಳು ಮುಂದೆಬರಬೇಕು. ತೆಲಂಗಾಣದಲ್ಲಿ ಕೆ ಚಂದ್ರಶೇರ್ ರಾವ್ ನೇತೃತ್ವದ ತೆಲಂಗಾಣ ರಾಷ್ಟ್ರ ಸಮಿತಿ ಅಮೋಘ ಜಯ ದಾಖಲಿಸಿದೆ. ಚಂದ್ರಶೇಖರ್ ರಾವ್ ರಂಥ ನಾಯಕರು ನಮ್ಮ ದೇಶಕ್ಕೆ ಬೇಕಿದೆ. ನಾನೂ ಟಿಆರ್ ಎಸ್ ಗೆ ಬೆಂಬಲ ನೀಡುತ್ತೇನೆ"- ಅಸಾದುದ್ದಿನ್ ಓವೈಸಿ

ಲೋಕಸಭಾ ಚುನಾವಣೆಯಲ್ಲಿ ಮೈತ್ರಿ
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ತೆಲಂಗಾನದಲ್ಲಿರುವ ಒಟ್ಟು 17 ಲೋಕಸಭಾ ಕ್ಷೇತ್ರಗಳಲ್ಲಿ 17 ಕ್ಷೇತ್ರಗಳನ್ನೂ ಟಿಆರ್ ಎಸ್ ಮತ್ತು ಎಐಎಂಐಎಂ ಮೈತ್ರಿ ಪಕ್ಷಗಳು ಗೆಲ್ಲಲಿವೆ. ನಾವು ಲೋಕಸಭಾ ಚುನಾವಣೆಯನ್ನು ಒಟ್ಟಾಗಿ ಎದುರಿಸುತ್ತೇವೆ ಎಂದು ಓವೈಸಿ ಹೇಳಿದ್ದಾರೆ. ತೆಲಂಗಾಣದಲ್ಲಿ ಡಿಸೆಂಬರ್ 7 ರಂದು ಚುನಾವಣೆ ನಡೆದಿತ್ತು. 119 ವಿಧಾನಸಭಾ ಕ್ಷೇತ್ರಗಳಲ್ಲಿ ಟಿಆರ್ ಎಸ್ 88, ಕಾಂಗ್ರೆಸ್-ಟಿಡಿಪಿ ಮೈತ್ರಿ ಕೂಟ 21, ಎಐಎಂಐಎಂ 7 ಮತ್ತು ಬಿಜೆಪಿ 1, ಇತರರು 2 ಸ್ಥಾನಗಳಲ್ಲಿ ಜಯ ಗಳಿಸಿದ್ದರು.












Click it and Unblock the Notifications