ಸಿಬಿಐ v/s ಮಮತಾ ವಿವಾದ: ಮೌನವೇ ಆಭರಣ ಎಂದ ಟಿಆರ್ ಎಸ್
ಹೈದರಾಬಾದ್, ಫೆಬ್ರವರಿ 05: ಕೇಂದ್ರ ತನಿಖಾ ದಳ(ಸಿಬಿಐ) ವಿವಾದಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಮತ್ತು ಪಶ್ಚಿಮ ಬಂಗಾಳ ಸರ್ಕಾರದ ನಡುವೆ ಎದ್ದಿರುವ ಭಿನ್ನಾಭಿಪ್ರಾಯಕ್ಕೆ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಲು ತೆಲಂಗಾಣ ರಾಷ್ಟ್ರ ಸಮಿತಿ ನಿರಾಕರಿಸಿದೆ.
ತನಿಖೆಗೆಂದು ಬಂದಿದ್ದ ಸಿಬಿಐ ಅಧಿಕಾರಿಗಳನ್ನೇ ಬಂಧಿಸಿದ ಮಮತಾ ಬ್ಯಾನರ್ಜಿ ಕ್ರಮ ಸರಿಯೇ ಎಂಬ ಪ್ರಶ್ನೆಗೆ ಮುಖ್ಯಮಂತ್ರಿ ಕೆ ಚಂದ್ರಶೇಖರ ರಾವ್ ಅವರಾಗಲೀ, ಟಿಆರ್ ಎಸ್ ನ ಯಾವುದೇ ನಾಯಕರಾಗಲೀ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ.

ಕೆಲವು ದಿನಗಳ ಹಿಂದೆ ಸಂಯುಕ್ತ ಒಕ್ಕೂಟ ನಿರ್ಮಿಸಲು ಓಡಾಡುತ್ತಿದ್ದ ಕೆ ಚಂದ್ರಶೇಖರ್ ರಾವ್ ಅವರು ಈ ಒಕ್ಕೂಟಕ್ಕೆ ಸೇರುವಂತೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನೂ ಮನವಿ ಮಾಡಿದ್ದರು. ಕಾಂಗ್ರೆಸ್ ಮತ್ತು ಬಿಜೆಪಿಯನ್ನು ಹೊರಗಿಟ್ಟು ನಿರ್ಮಿಸಲು ಉದ್ದೇಶಿಸಲಾಗಿದ್ದ ಈ ಒಕ್ಕೂಟ ನಿರ್ಮಿಸುವ ಬಗ್ಗೆ ಕೆ ಚಂದ್ರಶೇಖರ್ ರಾವ್ ಇದೀಗ ಯಾವುದೇ ಅಭಿಪ್ರಾಯವನ್ನೂ ನೀಡುತ್ತಿಲ್ಲ.
ಟಿಆರ್ ಎಸ್ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಎನ್ ಡಿಎ ಸರ್ಕಾರಕ್ಕೇ ಬೆಂಬಲ ನೀಡುವ ನಿರೀಕ್ಷೆ ಇರುವುದರಿಂದ ಅದು ಈ ವಿವಾದದಲ್ಲಿ ತಟಸ್ಥವೇ ಆಗಿ ಉಳಿಯುವ ಯೋಚನೆ ಮಾಡಿದಂತಿದೆ. ಜೊತೆಗೆ ದೀದಿ ನಿಷ್ಠುರ ಕಟ್ಟಿಕೊಳ್ಳುವುದಕ್ಕೂ ಕೆಸಿಆರ್ ಅವರಿಗೆ ಇಷ್ಟವಿಲ್ಲ.
ಬಹುಕೋಟಿ ಶಾರದಾ ಸಮೂಹ ಸಂಸ್ಥೆ ಚಿಟ್ ಫಂಡ್ ಹಗರಣ ಹಾಗೂ ರೋಸ್ ವ್ಯಾಲಿ ಹಗರಣಕ್ಕೆ ಸಂಬಂಧಿಸಿದಂತೆ ಕೋಲ್ಕತಾ ಮಹಾನಗರದ ಪೊಲೀಸ್ ಆಯುಕ್ತ ರಾಜೀವ್ ಕುಮಾರ್ ಬಂಧಿಸಲು ಸಿಬಿಐ ಮುಂದಾಗಿತ್ತು. ಆದರೆ ಸಿಬಿಐ ಅಧಿಕಾರಿಗಳನ್ನೇ ಬಂಗಾಳದ ಪೊಲೀಸರು ವಶಕ್ಕೆ ಪಡೆದಿದ್ದರು.
ತನಿಖೆಗೆ ಬಂದ ಸಿಬಿಐ ಕ್ರಮವನ್ನು ಖಂಡಿಸಿರುವ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, 'ಸಂವಿಧಾನ ಉಳಿಸಿ' ಎಂದು ಕೋಲ್ಕತ್ತದ ಮೆಟ್ರೋ ಚಾನೆಲ್ ಬಳಿ ಧರಣಿ ಆರಂಭಿಸಿದ್ದಾರೆ.












Click it and Unblock the Notifications