ಬೆಂಗಳೂರಿನ ಟೆಕ್ಕಿಯನ್ನು ಗುಂಡಿಕ್ಕಿ ಕೊಂದ ಕರೀಂನಗರ ಪೊಲೀಸರು!
ಬೆಂಗಳೂರು, ಡಿ. 22: ಬೆಂಗಳೂರಿನ ಪ್ರತಿಷ್ಠಿತ ಸಾಫ್ಟ್ ವೇರ್ ಕಂಪನಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಾಫ್ಟ್ ವೇರ್ ಇಂಜಿನಿಯರ್ ಬಲ್ವಿಂದರ್ ಸಿಂಗ್ ಎಂಬುವವರನ್ನು ತೆಲಂಗಾಣರಾಜ್ಯದ ಕರೀಂ ನಗರ ಪೊಲೀಸರು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ.
24 ವರ್ಷ ವಯಸ್ಸಿನ ಬಲ್ವಿಂದರ್ ಸಿಂಗ್ ಅವರು ಮಂಗಳವಾರದಂದು ಕರೀಂನಗರದಲ್ಲಿ ತಲ್ವಾರ್ ಹಿಡಿದುಕೊಂಡು ರಸ್ತೆಗಿಳಿದು ಮನಬಂದಂತೆ ಸಾರ್ವಜನಿಕರ ಮೇಲೆ ಬೀಸುತ್ತಿದ್ದರು. ಹೆತ್ತವರ ಮೇಲೂ ಬಲ್ವಿಂದರ್ ಸಿಂಗ್ ಕತ್ತಿ ಝಳಪಿಸಿದ್ದರು. ಸುಮಾರು 20ಕ್ಕೂ ಅಧಿಕ ಜನರನ್ನು ಆಸ್ಪತ್ರೆಗೆ ಅಟ್ಟಿದ್ದ ಬಲ್ವಿಂದರ್ ಆಟಾಟೋಪ ಮಿತಿ ಮೀರಿದಾಗ ಪೊಲೀಸರು ಶೂಟ್ ಮಾಡಿದ್ದರು.
ಪೊಲೀಸರ ಗುಂಡೇಟು ತಿಂದ ಟೆಕ್ಕಿ, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ ಎಂದು ಕರೀಂನಗರದ ಡಿಎಸ್ ಪಿ ಜೆ ರಾಮರಾವ್ ಅವರು ಹೇಳಿದ್ದಾರೆ.

ಬೆಂಗಳೂರಿನ ಖಾಸಗಿ ಸಂಸ್ಥೆಯಲ್ಲಿ ಸುಮಾರು 18 ಲಕ್ಷ ರು ವಾರ್ಷಿಕ ಸಂಬಳ ಪಡೆಯುತ್ತಿದ್ದರು. ಸಿವಿಲ್ ಸರ್ವೀಸ್ ಪರೀಕ್ಷೆ ಬರೆದು ಯಶಸ್ಸು ಕಂಡಿರಲಿಲ್ಲ. ಮಾನಸಿಕ ಅಸ್ವಸ್ಥನಾಗಿದ್ದ ಈತನಿಗೆ ಚಿಕಿತ್ಸೆ ನೀಡಲಾಗುತ್ತಿತ್ತು.
ಬಲ್ವಿಂದರ್ ಸಿಂಗ್ ತನ್ನ ಪೋಷಕರಾದ ಎಸ್ ಅವತಾರ್ ಸಿಂಗ್ ಹಾಗೂ ಸತ್ವಾನಾಥ್ ಕೌರ್ ಅವರ ಜೊತೆ ಮಾತಿನ ಚಕಮಕಿ ನಡೆದಿದೆ. ನಂತರ ತಲ್ವಾರ್ ತೆಗೆದು ಅವರ ಮೇಲೆ ಹಲ್ಲೆ ಮಾಡಿದ್ದಾನೆ. ನಂತರ ಕೈಯಲ್ಲಿ ತಲ್ವಾರ್ ಹಿಡಿದು ರಸ್ತೆಯಲ್ಲಿ ಓಡಾಡುತ್ತಿದ್ದ. ಅಲ್ಲದೇ ಸಾರ್ವಜನಿಕರ ಮೇಲೆ ಹಲ್ಲೆ ನಡೆಸಿ, ಭಯದ ವಾತಾವರಣ ಮೂಡಿಸಿದ್ದ.
ಲಕ್ಷ್ಮಿನಗರದ ದಾರಿಯಲ್ಲಿ ಸಿಕ್ಕ ಆಟೋರಿಕ್ಷಾ ಚಾಲಕ ಶ್ರೀಮನ್ ನಾರಾಯಣ ಎಂಬುವರ ಕೈ ಕಡಿದಿದ್ದಾನೆ. ಈತನನ್ನು ತಡೆಯಲು ಯತ್ನಿಸಿದ ಪೊಲೀಸ್ ಪೇದೆ ಎಂಎಂ ಅಲಿ ಅವರಿಗೂ ತೀವ್ರ ಗಾಯಗಳಾಗಿವೆ. ಆರ್ ಟಿಸಿ ಬಸ್ ನಿಲ್ದಾಣ ಬಳಿ ಮತ್ತಿಬ್ಬರು ಪೇದೆಗಳಾದ ಮಲ್ಲಯ್ಯ, ವಾಲಿ ಅವರ ಮೇಲೂ ಕತ್ತಿ ಬೀಸಿದ್ದ. ಪರಿಸ್ಥಿತಿ ಕೈ ಮೀರಿದ್ದರಿಂದ ಒನ್ ಟೌನ್ ಸರ್ಕಲ್ ಇನ್ಸ್ ಪೆಕ್ಟರ್ ವಿಜಯಸಾರಥಿ ಅವರು ಬಲ್ವಿಂದರ್ ಮೇಲೆ ಗುಂಡು ಹಾರಿಸಿದರು. ಬಲ್ವಿಂದರ್ ನಿಂದ ಗಾಯಗೊಂಡವರ ಪೈಕಿ ನಾಲ್ಕೈದು ಮಂದಿಯ ದೇಹಸ್ಥಿತಿ ಚಿಂತಾಜನಕವಾಗಿದೆ. (ಒನ್ ಇಂಡಿಯಾ ಸುದ್ದಿ)












Click it and Unblock the Notifications