'ತಾಕತ್ತಿದ್ರೆ ಮೋದಿ ನನ್ನ ವಿರುದ್ಧ ನಿಂತು ಗೆಲ್ಲಲಿ'

ಎಂಐಎಂ(Majlis-e-Ittehad-ul Muslimeen) ಪಕ್ಷದ 56ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಭಾನುವಾರ ಮಾತನಾಡುವಾದ ಓವೈಸಿ ಅವರು ಈ ರೀತಿ ಸವಾಲು ಹಾಕಿದ್ದಾರೆ. ಇಷ್ಟೇ ಅಲ್ಲದೆ ಇಡೀ ದೇಶದಲ್ಲಿ ಸಂಚರಿಸಿ ಮೋದಿ ವಿರುದ್ಧ ಅಭಿಯಾನ ಹಮ್ಮಿಕೊಳ್ಳುವುದಾಗಿ ಹೇಳಿದ್ದಾರೆ.
ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರ ಜನಪ್ರಿಯತೆ ಎಲ್ಲವೂ ಸಂಘ ಪರಿವಾರ ಹಾಗೂ ಮಾಧ್ಯಮಗಳಿಂದ ಪಡೆದಿರುವ ಪೊಳ್ಳು ಅಂಕಿ ಅಂಶದ ಮೇಲೆ ನಿಂತಿದೆ. ಮೋದಿ ಜನಪ್ರಿಯತೆ ಏನಿದ್ದರೂ ಅದು ಗುಜರಾತಿಗೆ ಮಾತ್ರ ಸೀಮಿತ. ಒಂದು ವೇಳೆ ಮೋದಿ ಅವರಿಗೆ ತಮ್ಮ ಮೇಲೆ ಆತ್ಮವಿಶ್ವಾಸ ಹಾಗೂ ತಮ್ಮ ಜನಪ್ರಿಯತೆ ಮೇಲೆ ದೃಢನಂಬಿಕೆ ಇದ್ದರೆ ಅವರು ಹೈದರಾಬಾದಿನಿಂದ ಲೋಕಸಭೆಗೆ ಸ್ಪರ್ಧಿಸಿ ಗೆಲ್ಲಲಿ ಆಗ ಒಪ್ಪಿಕೊಳ್ಳುತ್ತೇನೆ ಎಂದು ಓವೈಸಿ ಹೇಳಿದ್ದಾರೆ.
ಹೈದರಾಬಾದಿನಲ್ಲಿ ಯಾವ ಪಕ್ಷ ಕೂಡಾ ಎಂಐಎಂ ಅಭ್ಯರ್ಥಿಯನ್ನು ಸೋಲಿಸಲು ಸಾಧ್ಯವಿಲ್ಲ. ಮುಸ್ಲಿಂ ಬಾಂಧವರೇ ನೀವೆಲ್ಲರೂ ಒಗ್ಗಟ್ಟಾಗಿ ಕೋಮುವಾದಿಗಳನ್ನು ಹಿಂದಕ್ಕೆ ತಳ್ಳಿ ನಮ್ಮ ಪಕ್ಷವನ್ನು ಮತ್ತೊಮ್ಮೆ ಗೆಲ್ಲಿಸಿ ಎಂದರು.
ಮೋದಿ ಅವರಂತೆ ಸಾಮಾಜಿಕ ಜಾಲ ತಾಣಗಳ ಬಳಕೆ ಹೆಚ್ಚಳ ಮಾಡಿಕೊಂಡು ಶೇ 80ಕ್ಕಿಂತ ಅಧಿಕ ಮತದಾನ ನಡೆಯುವಂತೆ ಮಾಡುವುದು ನಮ್ಮ ಗುರಿಯಾಗಿದೆ. ಜನರು ಹೆಚ್ಚು ಮತದಾನ ಮಾಡಿದಷ್ಟು ನಮ್ಮ ಬೆಲೆ ಗೊತ್ತಾಗುತ್ತದೆ ಎಂದು ಓವೈಸಿ ಅಭಿಪ್ರಾಯಪಟ್ಟಿದ್ದಾರೆ. ಎಂಐಎಂ ಹೈದರಾಬಾದ್ ಜತೆಗೆ ಸೀಮಾಂಧ್ರ, ಮಹಾರಾಷ್ಟ್ರ, ಉತ್ತರಪ್ರದೇಶ ಹಾಗೂ ಕರ್ನಾಟಕದಲ್ಲೂ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಮುಂದಾಗಿದೆ.
ರಾಜ್ಯಪಾಲರಿಗೆ ಅಧಿಕಾರ ಏಕೆ?: ತೆಲಂಗಾಣ ರಾಜ್ಯ ರಚನೆಯಾಗಿ ಸೀಮಾಂಧ್ರದಲ್ಲಿ ರಾಷ್ಟ್ರಪತಿ ಆಡಳಿತ ಹೇರಿಕೆ ಜಾರಿಗೊಂಡಿರುವುದನ್ನು ಓವೈಸಿ ಖಂಡಿಸಿದ್ದಾರೆ. ತೆಲಂಗಾಣ ಮುಖ್ಯಮಂತ್ರಿಗಳಿಗೆ ಕೇವಲ ಎಂಟು ಜಿಲ್ಲೆಗಳ ಮೇಲೆ ಅಧಿಕಾರವಿದ್ದರೂ ರಾಜ್ಯಪಾಲರನ್ನು ಎಲ್ಲದ್ದಕ್ಕೂ ಕೇಳಬೇಕಾಗುತ್ತದೆ. ಪಕ್ಷಕ್ಕೆ ಬೇಕಾದವರನ್ನೇ ರಾಜ್ಯಪಾಲರನ್ನಾಗಿಸುವುದು ಎಲ್ಲರಿಗೂ ಗೊತ್ತೇ ಇದೆ. ಬಿಜೆಪಿ ಅಧಿಕಾರಕ್ಕೆ ಬಂದರೆ ಅಲ್ಪಸಂಖ್ಯಾತ ಮುಸ್ಲಿಮರ ಗತಿಯೇನು? ರಾಜ್ಯಪಾಲರ ಆಡಳಿತ ಹೇರಿಕೆ ಅಸಂವಿಧಾನಿಕ ಕ್ರಮ, ಇದನ್ನು ಸುಪ್ರೀಂಕೋರ್ಟಿನಲ್ಲಿ ಪ್ರಶ್ನಿಸುತ್ತೇನೆ ಎಂದಿದ್ದಾರೆ.
ಹೈದರಾಬಾದಿನಲ್ಲಿ ಆರು ಗಂಟೆಗಳ ಕಾಲ ವಿದ್ಯುತ್ ಇರುವುದಿಲ್ಲ, ನಿಯಮಿತವಾಗಿ ವಿದ್ಯುತ್ ಪೂರೈಕೆಗಾಗಿ ವಿಶೇಷ ಯೋಜನೆ ಅಗತ್ಯ. ಹೈದರಾಬಾದಿಗೆ ಕುಡಿಯುವ ನೀರು ಪೂರೈಕೆಯನ್ನು ಮೊದಲು ನೀಡಬೇಕು ಎಂದು ಓವೈಸಿ ಆಗ್ರಹಿಸಿದ್ದಾರೆ.












Click it and Unblock the Notifications