ಆಂಧ್ರದಲ್ಲಿ ಕಾಪು ಸಮುದಾಯಕ್ಕೆ ಶೇ. 5 ಮೀಸಲಾತಿ
ಅಮರಾವತಿ, ಡಿಸೆಂಬರ್ 2: ಕಾಪು ಸಮುದಾಯದ ಹೋರಾಟಕ್ಕೆ ಅಂತಿಮವಾಗಿ ಜಯ ದಕ್ಕಿದೆ. ಕಾಪು ಮೀಸಲಾತಿ ಮಸೂದೆ ಆಂಧ್ರ ಪ್ರದೇಶ ವಿಧಾನಸಭೆಯಲ್ಲಿ ಅವಿರೋಧವಾಗಿ ಅಂಗೀಕಾರ ಪಡೆದಿದೆ.
ಇದರಿಂದ ಶಿಕ್ಷಣ ಮತ್ತು ಉದ್ಯೋಗದಲ್ಲಿ ಕಾಪು ಸಮುದಾಯಕ್ಕೆ ಶೇಕಡಾ 5ರಷ್ಟು ಮೀಸಲಾತಿ ಸಿಗಲಿದೆ. ಈ ಮಸೂದೆ ಪ್ರಕಾರ ಕಾಪು, ಬಲಿಜ, ವಂತರಿ, ತೆಲಗ ಸಮುದಾಯಗಳನ್ನು ಹಿಂದುಳಿದ ವರ್ಗ ಎಫ್ ವಿಭಾಗಕ್ಕೆ ಸೇರಿಸಲಾಗಿದೆ. ಕಾಪು ಸಮುದಾಯಕ್ಕೆ ಹೆಚ್ಚುವರಿ ಮೀಸಲಾತಿ ನೀಡುವುದರ ಮೂಲಕ ಒಟ್ಟಾರೆ ಮೀಸಲಾತಿ ಪ್ರಮಾಣವನ್ನು ಆಂಧ್ರ ಸರಕಾರ ಶೇಕಡಾ 50ಕ್ಕೆ ಹೆಚ್ಚಿಸಿದೆ.
ಮಸೂದೆಗೆ ಆಂಧ್ರ ವಿಧಾನಸಭೆಯಲ್ಲಿ ಅಂಗೀಕಾರ ಸಿಕ್ಕಿದ್ದರೂ ಇದಕ್ಕೆ ಕೇಂದ್ರ ಸರ್ಕಾರದ ಅನುಮೋದನೆ ಅಗತ್ಯವಾಗಿದೆ. ಹೀಗಾಗಿ ಸದ್ಯದಲ್ಲೇ ಮಸೂದೆಯನ್ನು ಕೇಂದ್ರ ಸರ್ಕಾರಕ್ಕೆ ರವಾನಿಸಲಾಗುತ್ತದೆ.

ಮಸೂದೆ ಮಂಡಿಸಿ ವಿಧಾನಸಭೆಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, "ತಮ್ಮನ್ನು ಭೇಟಿಯಾಗಿದ್ದ ಕಾಪು ಸಮುದಾಯದ ಮುಖಂಡರು ನಮಗೆ ರಾಜಕೀಯ ಮೀಸಲಾತಿ ಬೇಡ. ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ಸಾಕು ಎಂದು ಹೇಳಿದ್ದರು. ಹೀಗಾಗಿ ಅವರ ಬೇಡಿಕೆಯನ್ನು ಈಡೇರಿಸಲಾಗಿದೆ," ಎಂದರು.
ಮೀಸಲಾತಿ ಸಿಕ್ಕಿದ ಖುಷಿಯಲ್ಲಿ ಕಾಪು ಸಮುದಾಯದ ಮುಖಂಡರು ಚಂದ್ರಬಾಬು ನಾಯ್ಡು ಅವರಿಗೆ ಸಿಹಿ ತಿನ್ನಿಸಿ ಸಂತಸ ಹಂಚಿಕೊಂಡರು.
ಈ ಹಿಂದೆ ಕಾಪು ಜನಾಂಗಕ್ಕೆ ಮೀಸಲಾತಿ ಕೋರಿ ಭಾರೀ ಪ್ರತಿಭಟನೆ ನಡೆಸಲಾಗಿತ್ತು. ಜನವರಿಯಲ್ಲಿ "ಕಾಪು ಘರ್ಜನೆ" ಹೆಸರಲ್ಲಿ ಕಾಪು ನಾಯಕ ಮುದ್ರಗಡ ಪದ್ಮನಾಭಂ ನೇತೃತ್ವದಲ್ಲಿ ಭಾರೀ ಪ್ರತಿಭಟನೆ ನಡೆದಿತ್ತು. ಇದು ಹಿಂಸೆಗೂ ತಿರುಗಿ ದೇಶದಾದ್ಯಂತ ಸುದ್ದಿಯಾಗಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.












Click it and Unblock the Notifications