ಮಹಿಳಾ ಉದ್ಯೋಗಿ ಜೊತೆ ಅಶ್ಲೀಲ ಮಾತುಕತೆ, ಸಂಕಟದಲ್ಲಿ ಹಾಸ್ಯನಟ
ಹೈದರಾಬಾದ್, ಜನವರಿ 13: ತಿರುಪತಿ ತಿರುಮಲ ದೇವಸ್ವಂ(ಟಿಟಿಡಿ) ನಿರ್ವಹಣೆಯ ಶ್ರೀ ವೆಂಕಟೇಶ್ವರ ಭಕ್ತಿ ಚಾನೆಲ್ ಮುಖ್ಯಸ್ಥ, ನಿರ್ದೇಶಕ ಹುದ್ದೆಯಿಂದ ಟಾಲಿವುಡ್ ಹಾಸ್ಯ ನಟ ಬಿ ಪೃಥ್ವಿ ರೆಡ್ಡಿ ಕೆಳಗಿಳಿದಿದ್ದಾರೆ. ಪೃಥ್ವಿ ವಿರುದ್ಧ ಭಕ್ತಿ ಚಾನೆಲ್ ನ ಮಹಿಳಾ ಉದ್ಯೋಗಿ ಜೊತೆ ಅಶ್ಲೀಲವಾಗಿ ಮಾತುಕತೆ ನಡೆಸಿದ ಆರೋಪ ಹೊರೆಸಲಾಗಿದೆ.
30 ವರ್ಷಗಳ ಕಾಲ ಟಾಲಿವುಡ್ ನಲ್ಲಿ ಹತ್ತು ಹಲವು ಚಿತ್ರಗಳಲ್ಲಿ ನಟಿಸಿ ಹೆಸರು ಗಳಿಸಿರುವ ರೆಡ್ಡಿ ಅವರು ಸಹೋದ್ಯೋಗಿ ಜೊತೆಗೆ ಸರಸ ಸಲ್ಲಾಪದ ಮಾತನಾಡಿದ್ದಾರೆ ಎಂಬ ಆರೋಪ ಹೊರೆಸಿದ ಆಡಿಯೋ ಕ್ಲಿಪ್ಪಿಂಗ್ ಇತ್ತೀಚೆಗೆ ಲೀಕ್ ಆಗಿತ್ತು. ವಿಡಿಯೋ ವೈರಲ್ ಆಗುತ್ತಿದ್ದಂತೆ ಎಸ್ ವಿ ಬಿಸಿ ಸಿಬ್ಬಂದಿಗಳು ಪೃಥ್ವಿ ಅವರ ರಾಜೀನಾಮೆಗೆ ಆಗ್ರಹಿಸಿ ಪ್ರತಿಭಟನೆ ನಡೆಸಿದ್ದರು.
ವಿಷಯ ಕೊನೆಗೂ ಆಂಧ್ರಪ್ರದೇಶದ ಮುಖ್ಯಮಂತ್ರಿ ವೈಎಸ್ ಜಗನ್ ಮೋಹನ್ ರೆಡ್ಡಿ ಕಿವಿಗೆ ಮುಟ್ಟಿತು. ತನಿಖೆ ಮುಗಿಯುವ ತನಕ ರಾಜೀನಾಮೆ ಸಲ್ಲಿಸುವಂತೆ ಪೃಥ್ವಿಗೆ ಜಗನ್ ಸೂಚಿಸಿದ್ದಾರೆ. ಅದರಂತೆ, ರಾಜೀನಾಮೆ ನೀಡಿರುವ ಪೃಥ್ವಿ ತನಿಖೆಗೆ ಸಿದ್ಧ ಎಂದು ಘೋಷಿಸಿಕೊಂಡಿದ್ದಾರೆ. ಆಡಿಯೋದಲ್ಲಿರುವ ಧ್ವನಿ ನನ್ನದಲ್ಲ ಯಾರೋ ನಕಲು ಮಾಡಿದ್ದಾರೆ. ನನ್ನ ಚಾರಿತ್ರ್ಯ ವಧೆ ಮಾಡುವ ಕುತಂತ್ರ ಇದಾಗಿದೆ ಎಂದು ಪ್ರತಿಕ್ರಿಯಿಸಿದ್ದಾರೆ.

ಪೃಥ್ವಿರೆಡ್ಡಿ ಆಡಿಯೋ ಪ್ರಕರಣದ ತನಿಖೆಗೆ ಆದೇಶಿಸಲಾಗಿದೆ ಎಂದು ತಿರುಪತಿ ತಿರುಮಲ ದೇವಸ್ಥಾನ ಸಮಿತಿ ಅಧ್ಯಕ್ಷ ಸುಬ್ಬಾರೆಡ್ಡಿ ಹೇಳಿದ್ದಾರೆ.
2018ರಲ್ಲಿ ಪ್ರಜಾ ಸಂಕಲ್ಪ ಯಾತ್ರೆ ಸಂದರ್ಭದಲ್ಲಿ ಜಗನ್ ಭೇಟಿ ಮಾಡಿದ್ದ ಪೃಥ್ವಿ, ಪಶ್ಚಿಮ ಗೋದಾವರಿ ಜಿಲ್ಲೆಯಲ್ಲಿ ವೈಎಸ್ಸಾರ್ ಕಾಂಗ್ರೆಸ್ ಪಕ್ಷಕ್ಕೆ ಸೇರಿದ್ದರು. ಇದಕ್ಕೂ ಮುನ್ನ ತೆಲುಗುದೇಶಂ ಪಕ್ಷವನ್ನು ಹಿಗ್ಗಾ ಮುಗ್ಗಾ ಬೈದಿದ್ದರು. ಸಿನಿಮಾ ನಟರನ್ನು ನಂಬಿ ಮತ ಹಾಕಬೇಡಿ ಎಂದಿದ್ದರು. ಅಮರಾವತಿ ರೈತರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದರು. ಎಸ್ ವಿಬಿಸಿ ಸೇರಿದ ಮೇಲೆ ಭ್ರಷ್ಟಾಚಾರ ಆರೋಪವನ್ನು ಹೊತ್ತುಕೊಂಡಿದ್ದರು. ಈಗ ಚಾನೆಲ್ ತೊರೆಯುವ ಪರಿಸ್ಥಿತಿ ಎದುರಿಸುತ್ತಿದ್ದಾರೆ.












Click it and Unblock the Notifications