ಹೈದರಾಬಾದಿನಲ್ಲಿ 50 ಸಾವಿರ ಮಂದಿ ಕೊರೊನಾ ಸೋಂಕು ಪರೀಕ್ಷೆ
ಹೈದರಾಬಾದ್, ಜೂನ್ 15: ಹೈದರಾಬಾದಿನಲ್ಲಿ 50 ಸಾವಿರ ಮಂದಿಗೆ ಕೊರೊನಾ ಸೋಂಕು ಪರೀಕ್ಷೆ ಮಾಡಿಸಲಾಗುತ್ತದೆ ಎಂದು ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಮಾಹಿತಿ ನೀಡಿದ್ದಾರೆ. ಹೈದರಾಬಾದ್, ರಂಗಾರೆಡ್ಡಿ, ವಿಕಾರಾಬಾದ್, ಸಂಗಾರೆಡ್ಡಿ ಜಿಲ್ಲೆ ಸೇರಿ ಒಟ್ಟು 30 ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ 50 ಸಾವಿರ ಮಂದಿಗೆ ಕೊರೊನಾ ಪರೀಕ್ಷೆಗೆ ಒಳಪಡಿಸಲಾಗುತ್ತದೆ.
ಒಟ್ಟು 10 ದಿನಗಳಲ್ಲಿ ಈ ಐವತ್ತು ಸಾವಿರ ಜನರಿಗೆ ಪರೀಕ್ಷೆ ನಡೆಯಲಿದೆ. ಇನ್ನು ದೆಹಲಿಯಲ್ಲಿ ಕೊರೊನಾ ಸೋಂಕಿತರಿಗಾಗಿಯೇ 20 ಸಾವಿರ ಹಾಸಿಗೆಗಳನ್ನು ಸಿದ್ಧಪಡಿಸುವಂತೆ ಸರ್ಕಾರ ಜಿಲ್ಲಾ ಮ್ಯಾಜಿಸ್ಟ್ರೇಟ್ಗಳಿಗೆ ಸೂಚನೆ ನೀಡಿದೆ.
ತೆಲಂಗಾಣದಲ್ಲಿ ಒಟ್ಟು 4737 ಕೊರೊನಾ ಸೋಂಕಿತ ಪ್ರಕರಣಗಳಿವೆ, 2,352 ಮಂದಿ ಗುಣಮುಖರಾಗಿದ್ದಾರೆ. 182 ಮಂದಿ ಮೃತಪಟ್ಟಿದ್ದಾರೆ. ತೆಲಂಗಾಣದಲ್ಲಿ ಕಳೆದ ಗಂಟೆಗಳಲ್ಲಿ ಮತ್ತೆ 237 ಕೊರೊನಾ ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ.

ನಿತ್ಯ 15-20 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗುತ್ತಿದ್ದಾರೆ. ಈ ತಿಂಗಳು ಕಳೆಯುವುದರೊಳಗೆ ನಿತ್ಯ ಸರಾಸರಿ 400 ಕೊರೊನಾ ಸೋಂಕಿತ ಪ್ರಕರಗಳು ದಾಖಲಾಗುವ ಸಾಧ್ಯತೆ ಇದೆ. 2412 ಸಕ್ರಿಯ ಪ್ರಕರಣಗಳಿವೆ. ತೆಲಂಗಾಣ ರಾಷ್ಟ್ರೀಯ ಸಮಿತಿಯ(ಟಿಆರ್ಎಸ್) ಶಾಸಕನಿಗೆ ಕೊರೊನಾ ಪಾಸಿಟಿವ್ ಕಾಣಿಸಿಕೊಂಡಿದ್ದು, ಹೀಗಾಗಿ ಅವರ ಸಂಪರ್ಕದಲ್ಲಿದ್ದ ಸಚಿವರು ಹೋಂ ಕ್ವಾರಂಟೈನ್ಗೆ ಒಳಗಾಗಿದ್ದಾರೆ.
ಆಡಳಿತ ಪಕ್ಷ ಟಿಆರ್ಎಸ್ನ ಯಡಿಗಿರಿ ರೆಡ್ಡಿಗೆ ಕೋವಿಡ್ ಪಾಸಿಟಿವ್ ಕಾಣಿಸಿಕೊಂಡಿದ್ದರಿಂದ ರಾಜ್ಯ ಹಣಕಾಸು ಸಚಿವ ಟಿ. ಹರೀಶ್ ರಾವ್ ಕ್ವಾರಂಟೈನ್ ಆಗಿದ್ದಾರೆ. ಶಾಸಕ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದು, ಅವರ ಆರೋಗ್ಯ ಸ್ಥಿರವಾಗಿದೆ ಎಂದು ತಿಳಿದು ಬಂದಿದೆ.
ಶಾಸಕನ ಕುಟುಂಬಸ್ಥರು, ಸಿಬ್ಬಂದಿ ಸಂಪೂರ್ಣವಾಗಿ ಹೋಂ ಕ್ವಾರಂಟೈನ್ನಲ್ಲಿದ್ದು, ಶಾಸಕರು ಈಗಾಗಲೇ ಅನೇಕ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದಾರೆ ಎಂದು ತಿಳಿದು ಬಂದಿದೆ. ಜೂನ್ 2ರಂದು ತೆಲಂಗಾಣ ನಿರ್ಮಾಣ ದಿನದಲ್ಲೂ ಇವರು ಭಾಗಿಯಾಗಿದ್ದು, ಜೂನ್ 5ರಂದು ಮತ್ತೊಂದು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.












Click it and Unblock the Notifications