10 ವರ್ಷದ ಬಾಲಕ ಹೈದರಾಬಾದಿನ ಪೊಲೀಸ್ ಕಮಿಷನರ್
ಹೈದರಾಬಾದ್, ಅ.16: ಇತಿಹಾಸ ಮರುಕಳಿಸುತ್ತದೆ ಎಂಬ ಮಾತಿದೆ. ಸಿನಿಮಾದಲ್ಲಿ ಬರುವ ದೃಶ್ಯಗಳು ನಿಜ ಜೀವನದಲ್ಲಿ ಕೆಲವೊಮ್ಮ ರಿಪೀಟ್ ಆಗುತ್ತವೆ. 10 ವರ್ಷದ ಬಾಲಕ ಹೈದರಾಬಾದಿನ ಪೊಲೀಸ್ ಕಮೀಷನರ್ ಆದ ಕಥೆಯೂ ಈ ಹಿಂದೆ ಸಿನಿಮಾದಲ್ಲಿ ಬಂದು ಹೋಗಿದೆ.
ಹೈದರಾಬಾದ್ನ ಹತ್ತು ವರ್ಷದ ಬಾಲಕ ಸಾದಿಕ್ಗೆ ಮಾರಣಾಂತಿಕ ಕಾಯಿಲೆಯೊಂದು ಬಾಧಿಸುತ್ತಿದೆ. ಆದರೆ, ತಾನು ಪೊಲೀಸ್ ಕಮಿಷನರ್ ಆಗಬೇಕೆಂಬುದು ಆತನ ಕನಸು. ಬುಧವಾರ ಸಾದಿಕ್ ಕನಸು ನನಸಾಯಿತು. ಬಾಲಕನ ಕನಸಿಗೆ ಬೆಲೆ ಕೊಟ್ಟ ಪೊಲೀಸ್ ಅಧಿಕಾರಿಗಳು ಒಂದು ದಿನದ ಮಟ್ಟಿಗೆ ಸಾದಿಕ್ನನ್ನು ಹೈದರಾಬಾದ್ ನಗರ ಪೊಲೀಸ್ ಕಮಿಷನರ್ ಆಗಲು ಅವಕಾಶ ಮಾಡಿಕೊಟ್ಟಿದ್ದಾರೆ.
ಇದೇ ರೀತಿ ದೃಶ್ಯ 2011ರಲ್ಲಿ ತೆರೆ ಕಂಡ ನಂದಿನಿ ರೆಡ್ಡಿ ನಿರ್ದೇಶನದ ಅಲಾ ಮೊದಲೈಂದಿ ಚಿತ್ರದಲ್ಲೂ ಇದೆ. ಪೊಲೀಸ್ ಕಮಿಷನರ್ ಆದ ಹುಡುಗ ಸುದ್ದಿಗಾರರೊಂದಿಗೆ ಮಾತನಾಡುತ್ತಾನೆ. ಅದರೆ, ನಂತರ ಮಾಧ್ಯಮದವರಲ್ಲಿ ಮನವಿ ಮಾಡಿಕೊಳ್ಳುವ ನಾಯಕಿ. ಈ ಸುದ್ದಿಯನ್ನು ರೋಚಕವಾಗಿ ಬರೆಯಬೇಡಿ. ನಾಳೆ ದಿನ ಈ ಹುಡುಗನಿಗೆ ತನಗೆ ಕ್ಯಾನ್ಸರ್ ಇದೆ ಎಂದು ತಿಳಿದರೆ ಆಘಾತವಾಗುತ್ತದೆ ಎನ್ನುತ್ತಾಳೆ. ನಾವು ಬರೆಯದಿದ್ದರೆ ಹುಡುಗ ಏನು ಬದುಕುತ್ತಾನಾ? ಎಂದು ಒಬ್ಬ ಪ್ರಶ್ನೆ ಎಸೆಯುತ್ತಾನೆ. ಇದಕ್ಕೆ ನಾಯಕಿ ಸಿಟ್ಟಾಗುತ್ತಾಳೆ ನಿಮ್ಮ ಟಿಆರ್ ಪಿ ಗೋಸ್ಕರ ಬಾಲಕನ ಬದುಕನ್ನು ಮೊಟಕುಗೊಳಿಸಬೇಡಿ ಎನ್ನುತ್ತಾಳೆ.
ಈಗ ಇದೇ ದೃಶ್ಯವನ್ನು ಮೇಕ್ ಎ ವಿಶ್ ಫೌಂಡೇಶನ್ ನಿಜವಾಗಿಸಿದೆ. 10 ವರ್ಷದ ಬಾಲಕ ಸಾದಿಕ್ ಪೊಲೀಸ್ ಕಮಿಷನರ್ ದಿರಿಸಿನಲ್ಲಿ ಕಾಣಿಸಿಕೊಂಡಿದ್ದಾನೆ. ಸಾದಿಕ್ ಜೊತೆ ಜೊತೆಗೆ ನಗರ ಪೊಲೀಸ್ ಆಯುಕ್ತ ಮಹೇಂದ್ರ ರೆಡ್ಡಿ ಸಾಗುತ್ತಾ ತಮ್ಮ ಸಹದ್ಯೋಗಿಗಳ ಪರಿಚಯ ಮಾಡಿಕೊಟ್ಟಿದ್ದಾರೆ.

ಮಾಧ್ಯಮಗಳ ಮುಂದೆ ಸೆಲ್ಯೂಟ್ ಹೊಡೆದ ಸಾದಿಕ್
ಬಾಲಕನ ಕನಸಿಗೆ ಬೆಲೆ ಕೊಟ್ಟ ಪೊಲೀಸ್ ಅಧಿಕಾರಿಗಳು ಒಂದು ದಿನದ ಮಟ್ಟಿಗೆ ಸಾದಿಕ್ನನ್ನು ಹೈದರಾಬಾದ್ ನಗರ ಪೊಲೀಸ್ ಕಮಿಷನರ್ ಆಗಲು ಅವಕಾಶ ಮಾಡಿಕೊಟ್ಟಿದ್ದಾರೆ.

ಅಲಾ ಮೊದಲೈಂದಿ ಚಿತ್ರದ ದೃಶ್ಯದಲ್ಲಿ ಏನಿದೆ?
ನಾಯಕಿ ನಿತ್ಯಾಮೆನನ್ ಅವರು ನಾಯಕ ನಾನಿಗೆ ನಾಳೆ ನಿನಗೊಂದು ಡಿಫೆರೆಂಟ್ ದೃಶ್ಯ ತೋರಿಸುತ್ತೇನೆ ಬಾ ಎನ್ನುತ್ತಾಳೆ. ಹೈದರಾಬಾದಿನ ಪೊಲೀಸ್ ಕಮೀಷನರ್ ಆಗಿ ಬಾಲಕನೊಬ್ಬ ಅಧಿಕಾರ ಸ್ವೀಕರಿಸುತ್ತಾನೆ. ಇದನ್ನು ಕಂಡು ನಾಯಕ ಮುಸಿ ಮುಸಿ ನಗುತ್ತಾನೆ. ಯಾರು ಇದೆಕ್ಕೆಲ್ಲ ಡೈರೆಕ್ಟರ್ ಎಂದು ನಾಯಕಿಯನ್ನು ಪ್ರಶ್ನಿಸುತ್ತಾನೆ.
ಇದಕ್ಕೆ ದೇವರೇ ನಿರ್ದೇಶಕ. ಆ ಹುಡುಗನಿಗೆ ಮಾರಾಣಾಂತಿಕ ಕಾಯಿಲೆಯಿದೆ ಈ ಬಗ್ಗೆ ಆತನಿಗೆ ಪೂರ್ಣ ಅರಿವಿಲ್ಲ. ಒಂದು ದಿನದ ಮಟ್ಟಿಗೆ ಪೊಲೀಸ್ ಕಮಿಷನರ್ ಆಗಬೇಕು ಎಂದು ಕನಸು ಕಂಡಿದ್ದ. ಅದನ್ನು ಮೇಕ್ ಎ ವಿಶ್ ಫೌಂಡೇಶನ್ ಮೂಲಕ ನಾನು ಸಾಧ್ಯವಾಗಿಸಿದ್ದೇನೆ ಎಂದು ನಾಯಕಿ ಹೇಳಿದಾಗ ನಾಯಕನಿಗೆ ಮಾತೇ ಹೊರಡದಾಗುತ್ತದೆ.

ಸಾದಿಕ್ ಮೊದಲ ಸುದ್ದಿಗೋಷ್ಠಿಯಲ್ಲಿ
ಕರೀಂನಗರದ ಪೆದ್ದಪಲ್ಲಿಯ ಸಾದಿಕ್ ಪೊಲೀಸ್ ಕಮಿಷನರ್ ಆದ ಮೇಲೆ ಮೊಟ್ಟ ಮೊದಲ ಸುದ್ದಿಗೋಷ್ಠಿ ನಡೆಸಿ 'ನಾನು ರೌಡಿಗಳನ್ನು ಮಟ್ಟ ಹಾಕುತ್ತೇನೆ' ಇದು ನನ್ನ ಮೊದಲ ಆದ್ಯತೆ ಎಂದಿದ್ದಾನೆ. ನಂತರ ನಗರದ ಶಾಂತಿ ಸುವ್ಯವಸ್ಥೆ ಕಾಯ್ದುಕೊಳ್ಳುತ್ತೇನೆ. ಟ್ರಾಫಿಕ್ ನಿಯಮ ಸರಳಗೊಳಿಸುತ್ತೇನೆ ಎಂದಿದ್ದಾನೆ.

ಪೊಲೀಸ್ ಕಮಿಷನರ್ ಕನಸು ಕಂಡಿದ್ದೇಕೆ?
ನನ್ನ ಮೂವರು ಅಂಕಲ್ ಗಳು ಭಾರತೀಯ ಸೇನೆಯಲ್ಲಿದ್ದಾರೆ. ಇಬ್ಬರು ಪೊಲೀಸ್ ಇಲಾಖೆಯಲ್ಲಿ ದುಡಿಯುತ್ತಿದ್ದಾರೆ. ಎಲ್ಲರೂ ತೆಲಂಗಾಣದ ಕರೀಂನಗರ ಜಿಲ್ಲೆಯಲ್ಲಿದ್ದಾರೆ. ಇವರೆಲ್ಲರನ್ನು ಹತ್ತಿರ ನೋಡಿ ನನಗೂ ಪೊಲೀಸ್ ಕಮಿಷನರ್ ಆಗಬೇಕು ಎಂಬ ಹಂಬಲ ಹುಟ್ಟಿತು ಎಂದು ಸಾದಿಕ್ ಹೇಳಿದ್ದಾನೆ.

ಆನಂದ ಬಾಷ್ಪ ಸುರಿಸಿದ ಸಾದಿಕ್ ಅವರ ತಂದೆ
ಆನಂದ ಬಾಷ್ಪ ಸುರಿಸಿದ ಸಾದಿಕ್ ಅವರ ತಂದೆ ಮಹಮ್ಮದ್ ರಹೀಮುದ್ದೀನ್, ನನ್ನ ಮಗುವಿನ ಕನಸು ಇಂದು ಈಡೇರಿದೆ. ಅದರೆ, ಬದುಕು ಎಂಥಾ ಕ್ರೂರ ಎಂಬುದನ್ನು ನಾವು ಅರಗಿಸಿಕೊಳ್ಳಲು ಆಗುತ್ತಿಲ್ಲ ಎಂದಿದ್ದಾರೆ.

ಐದು ತಿಂಗಳ ಹಿಂದೆ ಕೇಳಿಬಂದ ಸುದ್ದಿ
ಐದು ತಿಂಗಳ ಹಿಂದೆ ಕೇಳಿಬಂದ ಆಘಾತಕಾರಿ ಸುದ್ದಿಯಿಂದ ಇನ್ನೂ ಈ ಕುಟುಂಬ ಚೇತರಿಸಿಕೊಂಡೀಲ್ಲ. ಎಂಎನ್ ಜೆ ಇನ್ಸ್ಟಿಟ್ಯೂಟ್ ಆಫ್ ಅಂಕಾಲಜಿಯಲ್ಲಿ ಸಾದಿಕ್ ಗೆ ಚಿಕಿತ್ಸೆ ಕೊಡಿಸುತ್ತಿದ್ದಾರೆ.

ನೆರವಿಗೆ ಬಂದ ಮೇಕ್ ಎ ವಿಶ್ ಫೌಂಡೇಷನ್
ಸಿನಿಮಾದಲ್ಲಿ ನಾಯಕಿ ಹೇಳಿದಂತೆ ಮೇಕ್ ಎ ವಿಶ್ ಫೌಂಡೇಷನ್ ನಿಜ ಜೀವನದಲ್ಲೂ ಈ ದೃಶ್ಯವನ್ನು ರಿಪೀಟ್ ಮಾಡಿದೆ. ಬಾಲಕನ ಕನಸು ನನಸಾಗಿಸಿದೆ. ಪೊಲೀಸ್ ಕಮಿಷನರ್ ಮಹೇಂದ್ರ ರೆಡ್ಡಿ ಅವರು ಮಾನವೀಯ ಮೌಲ್ಯವುಳ್ಳ ಕೋರಿಕೆಗೆ ತಕ್ಷಣವೇ ಸ್ಪಂದಿಸಿ ಬಾಲಕನಿಗೆ ನೆರವಾಗಿದ್ದಾರೆ ಎಂದು ಸಂಸ್ಥೆ ಹೇಳಿದೆ.












Click it and Unblock the Notifications