ರಸ್ತೆ ಗುಂಡಿ ಮುಚ್ಚುವಂತೆ ಹುಬ್ಬಳ್ಳಿಯಲ್ಲಿ ವಿನೂತನ ಪ್ರತಿಭಟನೆ
ಹುಬ್ಬಳ್ಳಿ, ನವೆಂಬರ್ 16: ಪ್ರಾಣಕ್ಕೆ ಕುತ್ತು ತರುವ ರಸ್ತೆ ಗುಂಡಿಗಳಿಂದ ಅವಳಿ ನಗರದ ಜನರು ಬೇಸತ್ತು ಹೋಗಿದ್ದಾರೆ. ರಸ್ತೆಗಳ ಅವ್ಯವಸ್ಥೆಯಿಂದ ನಿತ್ಯ ಒಂದಿಲ್ಲೊಂದು ಅವಘಡಗಳು ಸಂಭವಿಸುತ್ತಲೆ ಇದೆ.
ಅದರಲ್ಲೂ ಉತ್ತರ ಕರ್ನಾಟಕದ ಅವಿಭಾಜ್ಯ ಹಾಗೂ ಸುಪ್ರಸಿದ್ಧ ನಗರಗಳು ಎನಿಸಿಕೊಂಡಿರುವ ಹುಬ್ಬಳ್ಳಿ ಧಾರವಾಡದ ಬಹುತೇಕ ರಸ್ತೆಗಳು ಸಂಪೂರ್ಣವಾಗಿ ಹದಗೆಟ್ಟಿದ್ದು ಸಾರ್ವಜನಿಕರು ಹಾಗೂ ವಾಹನ ಸವಾರರು ನಿತ್ಯ ನರಕಯಾತನೆಯನ್ನು ಅನುಭವಿಸುತ್ತಿದ್ದಾರೆ.
ಕೇವಲ ಒಂದು ಎರಡು ಮಾರ್ಗಗಳು ಮಾತ್ರವಲ್ಲ, ಪ್ರಮುಖ ರಸ್ತೆಗಳು ಹಾಗೂ ಫ್ಲೈಓವರ್ ಮೇಲೆ ರಸ್ತೆಗಳು ಸಂಪೂರ್ಣವಾಗಿ ಗುಂಡಿಗಳಿಂದ ತುಂಬಿಹೋಗಿದ್ದು, ನಗರದ ನಿವಾಸಿಗಳು ಪರದಾಡುತ್ತಿದ್ದಾರೆ.

ರಾಜ್ಯದ ಗತಿಯೇನು ಎಂದು ಜನರ ಆಕ್ರೋಶ
ಈ ಕುರಿತು ಮಹಾನಗರ ಪಾಲಿಕೆ, ಅಧಿಕಾರಿಗಳು, ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಸಂಸದ ಪ್ರಲ್ಹಾದ್ ಜೋಶಿ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ತವರು ಜಿಲ್ಲೆಗಳಾದ ಹುಬ್ಬಳ್ಳಿ ಧಾರವಾಡದಲ್ಲಿ ಇಂಥ ಪರಿಸ್ಥಿತಿಯಾದರೆ. ಇನ್ನು ರಾಜ್ಯದ ಗತಿಯೇನು ಎಂದು ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಜೀವಕ್ಕೆ ಕಂಟಕವಾಗಿರುವ ಈ ರಸ್ತೆ ಗುಂಡಿಗಳನ್ನು ಸರಿಪಡಿಸುವಂತೆ ಆಗ್ರಹಿಸಿ ನಗರದ ಯುವಕರು ವಿಭಿನ್ನವಾಗಿ ಪ್ರತಿಭಟನೆ ಮಾಡುವುದರ ಮೂಲಕ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಜನಪ್ರತಿನಿಧಿಗಳ, ಅಧಿಕಾರಿಗಳ ಮೇಲೆ ಪ್ರಕರಣ ದಾಖಲಿಸುವಂತೆ ಒತ್ತಾಯ
ರಸ್ತೆಯಲ್ಲಿ ಗುಂಡಿಗಳ ಜೊತೆ ರಾಡ್ಗಳು ಬಾಯ್ತೆರದುಕೊಂಡಿದ್ದು, ಅಪಾಯಕ್ಕೆ ಎಡೆ ಮಾಡಿಕೊಡುತ್ತಿವೆ. ರಸ್ತೆ ದುರಸ್ತಿ ಕಾರ್ಯ ಆರಂಭಸದ ಸರ್ಕಾರದ ವಿರುದ್ಧ ಹುಬ್ಬಳ್ಳಿಯ ಯುವಕರು ರಸ್ತೆಗಿಳಿದು ಪ್ರತಿಭಟನೆ ನಡೆಸಿದ್ದಾರೆ. ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹಾಗೂ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಉದ್ಘಾಟನೆ ಮಾಡಿರುವ ರೈಲ್ವೆ ಫ್ಲೈಓವರ್ ಶಿಲಾನ್ಯಾಸಕ್ಕೆ ಹಾಲು ಎರೆದು ಆಕ್ರೋಶ ಹೊರಹಾಕಿದ ಪ್ರತಿಭಟನಾಕಾರರು, ಪ್ರಾಣಘಾತುಕ ರಸ್ತೆ ಗುಂಡಿಗಳ ಸಂಬಂಧಿಸಿದಂತೆ ಜನಪ್ರತಿನಿಧಿಗಳ, ಅಧಿಕಾರಿಗಳ ಮೇಲೆ ಐಪಿಸಿ 307 ಪ್ರಕರಣ ದಾಖಲಿಸುವಂತೆ ಒತ್ತಾಯಿಸಿದರು.

ರಸ್ತೆಗಿಳಿದು ಹುಬ್ಬಳ್ಳಿ ಯುವಕರ ಪ್ರತಿಭಟನೆ
ಇತ್ತೀಚೆಗೆ ನಿರ್ಮಿಸಲಾದ ಜಿಮ್ಖಾನಾ ಕ್ಲಬ್ ಬಳಿ ರೈಲ್ವೆ ಮೇಲ್ಸೇತುವೆ ಮೇಲೆ ಅಪಾಯಕಾರಿ ಸ್ಟೀಲ್ ರಾಡ್ಗಳು ಬಾಯ್ತರೆದುಕೊಂಡಿದೆ. ಅಪಾಯಕಾರಿ ಗುಂಡಿಗಳು ಮತ್ತು ಸ್ಟೀಲ್ ಬಾರ್ಗಳು ಕಾಣುವಂತೆ ವಿದ್ಯಾರ್ಥಿಗಳು ಮತ್ತು ಯುವಕರು ಫೋಟೋಗಳು ಮತ್ತು ವೀಡಿಯೊಗಳನ್ನು ನಿರಂತರವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರಧಾನ ಮಂತ್ರಿಗಳು, ಮುಖ್ಯಮಂತ್ರಿಗಳು, ರೈಲ್ವೆ ಸಚಿವರು, ಸಂಸದರು, ಶಾಸಕರು, ಮೇಯರ್ ಮತ್ತು ಇತರ ಹಲವು ಅಧಿಕಾರಿಗಳನ್ನು ಟ್ಯಾಗ್ ಮಾಡುವ ಮೂಲಕ ಪೋಸ್ಟ್ ಮಾಡಿ ರಸ್ತೆ ದುರಸ್ತಿ ಮಾಡುವಂತೆ ಆಗ್ರಹಿಸಿದರು. ಆದರೆ ಯಾವುದೇ ಪ್ರಯೋಜನ ಕಂಡುಬಾರದ ಹಿನ್ನಲೆಯಲ್ಲಿ ಬುಧವಾರ ಯುವಕರು ರಸ್ತೆಗಿಳಿದು ಪ್ರತಿಭಟನೆ ನಡೆಸಿದರು.

ಅರವಿಂದ್ ಬೆಲ್ಲದ್ ಭಾವಚಿತ್ರಕ್ಕೆ ಹಾಲೆರೆದು ಆಕ್ರೋಶ
ರಸ್ತೆ ಗುಂಡಿಗಳಿಗೆ ಸಂಬಂಧಿಸಿದಂತೆ ಸ್ಥಳೀಯ ಜನಪ್ರತಿನಿಧಿಗಳು, ಸಂಬಂಧಿತ ಅಧಿಕಾರಿಗಳ ಮೇಲೆ U/s IPC 307 ಕೊಲೆ ಯತ್ನ ಪ್ರಕರಣ ದಾಖಲಿಸುವಂತೆ ಯುವಕರು ಒತ್ತಾಯಿಸಿದ್ದಾರೆ. ಒಂದು ತಿಂಗಳ ಒಳಗಾಗಿ ಧಾರವಾಡದ ರಸ್ತೆ ಗುಂಡಿಗಳನ್ನು ಸಂಪೂರ್ಣ ಮುಚ್ಚಿಸಬೇಕು. ತೀರಾ ಹದಗೆಟ್ಟಿರುವ ಧಾರವಾಡದ ರಸ್ತೆ ಗುಂಡಿಗಳನ್ನು ಮುಚ್ಚಿ, ಸಾರ್ವಜನಿಕರಿಗೆ ಸುಗಮ ಸಂಚಾರಕ್ಕಾಗಿ ಅವಕಾಶ ಮಾಡಿಕೊಡಲು ಧಾರವಾಡ ಬಿಜೆಪಿ ಶಾಸಕ ಅರವಿಂದ ಬೆಲ್ಲದ್ ಅವರಿಗೆ ದೇವರು ಒಳ್ಳೆಯ ಬುದ್ದಿ ನೀಡಲಿ ಎಂದು ಬೆಲ್ಲದ್ ಭಾವಚಿತ್ರಕ್ಕೆ ಹಾಲೆರೆದು
ಎಂದು ಕೆಪಿಸಿಸಿ ವಕ್ತಾರ ಹಾಗೂ ಕಾಂಗ್ರೆಸ್ ಮುಖಂಡ ಪಿ.ಎಚ್. ನೀರಲಕೇರಿ ಆಕ್ರೋಶ ವ್ಯಕ್ತಪಡಿಸಿದರು.
"ರಸ್ತೆ ನಿರ್ಮಾಣ, ದುರಸ್ತಿ ಬಗ್ಗೆ ಶಾಸಕರು ಗುದ್ದಲಿ ಪೂಜೆ ಮಾತ್ರ ಮಾಡುತ್ತಾರೆ. ಆ ಮೂಲಕ ಮಾಧ್ಯಮಗಳಲ್ಲಿ ಮಿಂಚುತ್ತಾರೆ. ಆದರೆ ವಾಸ್ತವದಲ್ಲಿ ಧಾರವಾಡದ ರಸ್ತೆಗಳ ಪರಿಸ್ಥಿತಿ ತೀರಾ ಶೋಚನಿಯವಾಗಿದೆ" ಎಂದು ಪಿ.ಎಚ್. ನೀರಲಕೇರಿ ರಾಜ್ಯ ಸರ್ಕಾರಗಳ ವಿರುದ್ಧ ಕಿಡಿಕಾರಿದ್ದಾರೆ.












Click it and Unblock the Notifications