ಪರಿಕ್ಕರ್ ಪತ್ರ ಮಂಡಳಿ ಮುಂದಿಟ್ಟರೆ ಮಧ್ಯಂತರ ಪರಿಹಾರ: ಯಡಿಯೂರಪ್ಪ
ಹುಬ್ಬಳ್ಳಿ, ಡಿಸೆಂಬರ್ 23: ಗೋವಾ ಮುಖ್ಯಮಂತ್ರಿ ಅವರು ಯಡಿಯೂರಪ್ಪ ಅವರಿಗೆ ಪತ್ರ ಬರೆದಿರುವುದು ಶಿಷ್ಟಾಚಾರ ಉಲ್ಲಂಘನೆ ಎಂದು ಕಾಂಗ್ರೆಸ್ ಟೀಕೆ ಪ್ರಾರಂಭ ಮಾಡುತ್ತಿದ್ದಂತೆ ಯಡಿಯೂರಪ್ಪ ಅವರು ಗೋವಾ ಮುಖ್ಯಮಂತ್ರಿ ಬರೆದ ಪತ್ರದ ಬಗ್ಗೆ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು 'ಪರಿಕ್ಕರ್ ನನಗೆ ಪತ್ರ ಬರೆದಿರುವುದು ರಾಜಕೀಯ ಗಿಮಿಕ್ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಆದರೆ, ಈ ವಿಷಯದಲ್ಲಿ ರಾಜಕೀಯ ಮಾಡುತ್ತಿರುವುದು ಕಾಂಗ್ರೆಸ್. ಕರ್ನಾಟಕಕ್ಕೆ ನೀರು ಬಿಡಲು ಗೋವಾ ಕಾಂಗ್ರೆಸ್ ಅಧ್ಯಕ್ಷ ಶಾಂತಾರಾಮ ನಾಯ್ಕ ವಿರೋಧ ವ್ಯಕ್ತಪಡಿಸಲು ಕಾರಣ ಇದೇ ಸಿದ್ದರಾಮಯ್ಯ ಎಂದು ದೂರಿದ ಅವರು ಎಐಸಿಸಿ ಅಧ್ಯಕ್ಷ ರಾಹುಲ್ಗಾಂಧಿ, ಸೋನಿಯಾ ಗಾಂಧಿ. ಅವರ ಕೈವಾಡ ಇರದಿದ್ದರೆ, ಒಂದು ರಾಜ್ಯದ ಕಾಂಗ್ರೆಸ್ ಅಧ್ಯಕ್ಷ ಈ ರೀತಿ ಹೇಳಿಕೆ ಕೊಡಲು ಸಾಧ್ಯವಿಲ್ಲ' ಎಂದು ಅವರು ಹೇಳಿದರು.

ಗೋವಾ ಮುಖ್ಯಮಂತ್ರಿ ನನಗೆ ಬರೆದಿರುವ ಪತ್ರದ ಆಧಾರದ ಮೇಲೆ ಕರ್ನಾಟಕ ಸರ್ಕಾರವು ನ್ಯಾಯಮಂಡಳಿ ಮುಂದೆ ಹೋಗಿ, ಈ ಸಂಬಂಧ ಸೂಕ್ತ ಆದೇಶ ಮಾಡಿ ಎಂದು ಮನವಿ ಮಾಡಿದರೆ, ಮಧ್ಯಂತರ ಪರಿಹಾರ ಸಿಗುವ ಅವಕಾಶವಿದೆ ಎಂದು ಅವರು ಹೇಳಿದರು.
'ಈ ಕುರಿತು ಕಾನೂನು ತಜ್ಞರ ಬಳಿ ಸಲಹೆ ಕೇಳಿದ್ದೇನೆ ಗೋವಾ ರಾಜ್ಯದ ಮುಖ್ಯಮಂತ್ರಿಯೇ ಪತ್ರ ಬರೆದಿರುವುದರಿಂದ ನ್ಯಾಯಮಂಡಳಿ ಅದನ್ನು ಪರಿಗಣಿಸುವ ಅವಕಾಶವಿದೆ ಎಂದು ತಜ್ಞರು ಹೇಳಿದ್ದಾರೆ ಎಂದು ಅವರು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಪರಿಕ್ಕರ್ ಪತ್ರಕ್ಕೆ ಯಾವುದೇ ಮಾನ್ಯತೆ ಇಲ್ಲ ಎಂದಿದ್ದ ಸಿದ್ದರಾಮಯ್ಯ ಅವರ ಮಾತಿಗೆ ಪ್ರತಿಕ್ರಿಯಿಸಿದ ಅವರು, ಅದೇ ಪತ್ರದ ಆಧಾರದ ಮೇಲೆ ಗೋವಾ ಮುಖ್ಯಮಂತ್ರಿಗೆ ಸಿದ್ದರಾಮಯ್ಯ ಪತ್ರ ಬರೆದಿದ್ದಾರೆ. ಆರು ತಿಂಗಳ ವಿಶೇಷ ಪ್ರಯತ್ನದಿಂದ ನಾವು ಈ ಕಾರ್ಯ ಸಾಧಿಸಿದ್ದೇವೆ, ಆದರೆ, ಅಲ್ಲಿ ಕಾಂಗ್ರೆಸ್ ಪಕ್ಷವನ್ನು ಎತ್ತಿಕಟ್ಟುವ ಮೂಲಕ ರಾಜಕೀಯ ಮಾಡಲಾಗುತ್ತಿದೆ' ಎಂದು ಯಡಿಯೂರಪ್ಪ ದೂರಿದರು.












Click it and Unblock the Notifications