ಹುಬ್ಬಳ್ಳಿ ಗಲಭೆ ಆಡಿಯೋ: 'ಕಲ್ಲು ತೂರಾಟದ ವಿಡಿಯೋ ಹಂಚಿಕೊಂಡರೆ ಸಂಕಷ್ಟ'
ಹುಬ್ಬಳ್ಳಿ ಏಪ್ರಿಲ್ 17: ಹುಬ್ಬಳ್ಳಿ ಗಲಭೆ ಬಳಿಕ ಆಡಿಯೋ ಸಂದೇಶವೊಂದು ಭಾರಿ ವೈರಲ್ ಆಗಿದೆ. ಆಡಿಯೋದಲ್ಲಿ ಗಲಭೆಯ ಷಡ್ಯಂತ್ರದ ಸಿಕ್ರೇಟ್ ಇದೆ ಎನ್ನುವ ಅನುಮಾನ ವ್ಯಕ್ತವಾಗಿದೆ. 'ಈವರೆಗೆ ನಡೆದ ಘಟನೆ ಅಲ್ಲಾನಿಗಾಗಿ ನಡೆದಿದೆ. ನಿನ್ನೆ ನಡೆದ ಘಟನೆಯ ವಿಡಿಯೋವನ್ನು ಹಂಚಿಕೊಳ್ಳಬೇಡಿ. ಕಲ್ಲು ತೂರಾಟದ ವಿಡಿಯೋ ಹಂಚಿಕೊಂಡರೆ ಸಂಕಷ್ಟ ಎದುರಾಗುತ್ತದೆ. ಮುಸ್ಲಿಂರನ್ನು ಗುರಿಯಾಗಿಸಿಕೊಂಡು ಬಂಧಿಸಲಾಗುತ್ತದೆ' ಎಂದು ಮುಸ್ಲಿಮರ ವಾಟ್ಸಪ್ ಗ್ರೂಪ್ಗಳಲ್ಲಿ ಆಡಿಯೋ ಸಂದೇಶ ಹಂಚಿಕೊಳ್ಳಲಾಗಿದೆ.
ಸಾಮಾಜಿಕ ಜಾಲತಾಣದಲ್ಲಿ ಯುವಕ ಹಾಕಿದ ಪ್ರಚೋದನಾಕಾರಿ ಪೋಸ್ಟರ್ನಿಂದಾಗಿ ಹುಬ್ಬಳ್ಳಿಯಲ್ಲಿ ನಿನ್ನೆ ವಿವಾದ ಉಂಟಾಗಿದೆ. ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಲಾಗಿದ್ದು, ಸೆಕ್ಷನ್ 144 ಜಾರಿಗೊಳಿಸಲಾಗಿದೆ. ಜೊತೆಗೆ ಆರು ಪೊಲೀಸರು ಈ ಘಟನೆಯಲ್ಲಿ ಗಾಯಗೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಮಸೀದಿ ಮೇಲೆ ಭಗವಾಧ್ವಜ ಹಾರಿಸಿದ ಚಿತ್ರವನ್ನು ಎಡಿಟ್ ಮಾಡಿ ಯುವಕನೊಬ್ಬ ಸ್ಟೇಟಸ್ ಹಾಕಿಕೊಂಡಿದ್ದ. ಇದಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಈ ಚಿತ್ರ ವೈರಲ್ ಆಗುತ್ತಿದ್ದಂತೆ ಒಂದು ಕೋಮಿನವರು ಕಲ್ಲು ತೂರಾಟ ನಡೆಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಹಲವರನ್ನು ಪೊಲೀಸರು ಬಂಧಿಸಿದ್ದಾರೆ.
ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಇದುವರೆಗೆ ಆರು ಪ್ರಕರಣ ದಾಖಲಾಗಿದೆ. ಕೇಶವಪುರ ಇನ್ಸ್ ಪೆಕ್ಟರ್ ದೂರಿನ ಮೇಲೆ ಕೇಸ್ ದಾಖಲಿಸಲಾಗಿದೆ. ಸಾರ್ವಜನಿಕ ಆಸ್ತಿ ಪಾಸ್ತಿ ಹಾನಿ, ಪೊಲೀಸ್ ಕರ್ತವ್ಯಕ್ಕೆ ಅಡ್ಡ, ಕೋಮು-ಗಲಭೆ ಸೃಷ್ಟಿ ಹೀಗೆ ಆರು ಪ್ರಕರಣಗಳನ್ನು ದಾಖಲಿಸಲಾಗಿದೆ.

ಈ ನಡುವೆ ಪೊಲೀಸರ ಮುಂದೆ ಕುಟುಂಬಸ್ಥರು ವಾಗ್ವಾದ ನಡೆಸಿದ್ದಾರೆ. ವಿನಾಕಾರಣ ಮನೆಗೆ ನುಗ್ಗಿ ನಮ್ಮ ಮಕ್ಕಳನ್ನು ಕರೆದುಕೊಂಡಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. "ನಮ್ಮ ಮನೆಯವರು ಮನೆಯಲ್ಲೇ ಇದ್ದರು. ಹೊರಗಡೆ ಹೋಗೇ ಇಲ್ಲ. ನನ್ನ ನಾಲ್ಕು ಮಕ್ಕಳನ್ನು ಮನೆಗೆ ಏಕಾಏಕಿ ನುಗ್ಗಿ ಪೊಲೀಸರು ಕರೆದುಕೊಂಡು ಹೋಗಿದ್ದಾರೆ'' ಎಂದು ಸ್ಥಳೀಯ ಮುಸ್ಲಿಂ ಮಹಿಳೆ ಆರೋಪಿಸಿದ್ದಾರೆ.

''ನನ್ನ ಮಗನಿಗೆ ಹೃದಯದ ಸಮಸ್ಯೆ ಇದೆ. ದಿನಕ್ಕೆ ಎರಡು ಬಾರಿ ಮಾತ್ರೆ ತೆಗೆದುಕೊಳ್ಳಬೇಕು. ಆತನನ್ನು ವಿನಾಕಾರಣ ಬಂಧಿಸಿದ್ದಾರೆ ಎಂದು ಠಾಣೆಯ ಮುಂದೆ ಮುಸ್ಲಿಂ ಮಹಿಳೆ ಕಣ್ಣೀರು ಹಾಕಿದ್ದಾರೆ. ಇನ್ನೂ ನನ್ನ ಮಗ ಕೆಲಸಕ್ಕೆ ಹೋಗುವ ವೇಳೆ ಪೊಲೀಸರು ಆತನನ್ನು ಬಂಧಿಸಿದ್ದಾರೆ. ಆತನಿಗೂ ಈ ಘಟನೆಗೂ ಏನೂ ಸಂಬಂಧವಿಲ್ಲ,'' ಎಂದು ಸ್ಥಳೀಯ ಮುಸ್ಲಿಂ ಮಹಿಳೆ ಠಾಣೆಯ ಮುಂದೆ ಕಣ್ಣೀರು ಹಾಕಿದ್ದಾರೆ.

ಹೊಸಪೇಟೆಯಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಈ ಬಗ್ಗೆ ಪ್ರತಿಕ್ರಿಯಿಸಿ, 'ಕಾಶ್ಮೀರದಲ್ಲಿ ಮಾಡುತ್ತಿದ್ದ ಕೆಲಸವನ್ನು ಇಲ್ಲಿ ಶುರು ಮಾಡಿದ್ದಾರೆ. ಅಂಥವರನ್ನು ಬಂಧಿಸಬೇಕು. ಮುಸ್ಲಿಂ ಗೂಂಡಾಗಳ ವಿರುದ್ಧ ಕ್ರಮ ಕೈಗೊಳ್ಳಬೇಕು' ಎಂದು ಹೇಳಿದ್ದಾರೆ.












Click it and Unblock the Notifications