ಹುಬ್ಬಳ್ಳಿ: ಇನ್ಮೇಲೆ ಪೊಲೀಸ್ ಠಾಣೆಗಳಲ್ಲಿಯೇ ದಂಡ ಕಟ್ಟಿ
ಹುಬ್ಬಳ್ಳಿ, ಫೆಬ್ರವರಿ, 4- ಹುಬ್ಬಳ್ಳಿ ಧಾರವಾಡ ಪೊಲೀಸರು ಸಂಚಾರ ನಿಯಮ ಉಲ್ಲಂಘಸಿ ಕದ್ದು ತಿರುಗಾಡುವ ವಾಹನ ಸವಾರರಿಗೆ ಬುದ್ದಿಕಲಿಸಲು ಮುಂದಾಗಿದ್ದಾರೆ. ಕದ್ದು ತಿರುಗುವ ವಾಹನ ಸವಾರರ ವಾಹನದ ನಂಬರ್ ತಿಳಿದು ಪೈನ್ ಕಟ್ಟಲು ಮೊಬೈಲ್ ತಂತ್ರಾಂಶವನ್ನು ಬಳಸುತ್ತಿದ್ದಾರೆ. ವಾಹನ ಸವಾರರು ಪೊಲೀಸ್ ಠಾಣೆಯಲ್ಲಿಯೇ ದಂಡ ಕಟ್ಟುವಂತೆ ತಾಕೀತು ಮಾಡಿದ್ದಾರೆ.
ಕಳೆದೆರಡು ವಾರಗಳಿಂದ ಅವಳಿ ನಗರಗಳಲ್ಲಿ ವಾಹನ ಸವಾರರಿಗೆ ದಂಡ ಕಟ್ಟಲು ಮೊಬೈಲ್ ಗಳಿಗೆ ಸಂದೇಶ ರವಾನಿಸುತ್ತಿದ್ದಾರೆ. ಹೀಗೆ ಬಂದ ದಂಡ ನೋಟಿಸ್ ಅನ್ನು ಹಿಡಿದುಕೊಂಡು ಪೊಲೀಸ್ ಠಾಣೆಗೆ ಹಿಡಿಶಾಪ ಹಾಕುತ್ತಾ ಹೋಗಿ ದಂಡ ಕಟ್ಟುವಂತಾಗಿದೆ.[ಚಿಕ್ಕಮಗಳೂರು: ತಬ್ಬಲಿಯಾಗಲಿದ್ದ ಯುವತಿಗೆ ಅಣ್ಣನಾದ ಎಸ್ಪಿ ಅಣ್ಣಾಮಲೈ]
ಈ ಹಿಂದೆ ಪೊಲೀಸರು ನಿಯಮ ಮೀರುವ ವಾಹನ ಸವಾರರು ಕೈಗೆ ಸಿಕ್ಕರೆ ಮಾತ್ರ ಹಿಡಿದು ರಸೀದಿ ನೀಡಿ ದಂಡ ಪಾವತಿಸುತ್ತಿದ್ದರು. ಕೆಲ ಪೊಲೀಸರು ರಸೀದಿಯನ್ನೇ ನೀಡದೆ ಹಣವನ್ನು ಕಿಸೆಯಲ್ಲಿ ಹಾಕಿಕೊಳ್ಳುತ್ತಿದ್ದ ಆರೋಪಗಳೂ ಇದ್ದವು. ಹೆಲ್ಮೆಟ್ ಹಾಕಿರದವರಿಗೆ, ದ್ವಿಚಕ್ರ ವಾಹನದಲ್ಲಿ ಮೂರು ಜನ ಸಾಗುವವರಿಗೆ ಹೀಗೆ ಇರುವವರಿಗೂ ಇದೇ ಮಾದರಿ ಫೈನ್ ವ್ಯವಸ್ಥೆಯಿತ್ತು. ಆದರೆ ಈಗ ಮೊಬೈಲ್ ಅಪ್ಲಿಕೇಶನ್ ಬಂದಿರುವುದರಿಂದ ನಗರದ ಮೂಲೆ ಮೂಲೆಗಳಲ್ಲಿ ಸಂಚಾರಿ ಪೊಲೀಸರು ಸಂಚಾರ ನಿಯಮ ಉಲ್ಲಂಘಿಸುವ ವಾಹನ ಸವಾರರಿಗೆ ದಂಡ ವಿಧಿಸುತ್ತಿದ್ದಾರೆ.[ಮೈಸೂರಿನಲ್ಲಿ ರೌಡಿಶೀಟರ್ ಗಳ ನಿದ್ದೆಗೆಡಿಸಿದ ಪೊಲೀಸ್ ದಾಳಿ]
ಈ ಬಗ್ಗೆ ಇತ್ತೀಚೆಗೆ ಸುಮಾರು 50 ಕ್ಕೂ ಹೆಚ್ಚು ವಿವಿಧ ಸಂಘಟನೆಗಳ ಮುಖಂಡರು ಹು-ಧಾ ಪೊಲೀಸ್ ಆಯುಕ್ತ ಪಾಂಡುರಂಗ ರಾಣೆ ಅವರನ್ನು ಭೇಟಿಯಾಗಿ ದಂಡ ವಿಧಿಸುವುದನ್ನು ನಿಲ್ಲಿಸಬೇಕೆಂದು ಕೇಳಿಕೊಂಡಿದ್ದರು. ಆದರೆ ರಾಣೆ ಇದು ಸುಪ್ರೀಂ ಕೋರ್ಟ್ ಆದೇಶವಾಗಿದ್ದು ಮತ್ತು ಸರಕಾರದ ಆದೇಶವಿದೆ ಹೀಗಾಗಿ ದಂಡ ವಿಧಿಸುವ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ. ಜೊತೆಗೆ ನಮ್ಮ ನಗರಕ್ಕೆ ಈಗಾಗಲೇ 50 ಮೊಬೈಲ್ ಗಳು ಬಂದಿವೆ. ಸಂಚಾರಿ ಪೊಲೀಸರಿಗೆ ಅತೀ ಹೆಚ್ಚಿನ ಫೋಟೋಗಳನ್ನು ತೆಗೆಯಲು ಹೇಳಲಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಮೊಬೈಲ್ ಗಳನ್ನು ತರಿಸಿಕೊಳ್ಳಲು ಯೋಚಿಸಲಾಗಿದೆ ಎಂದು ಒನ್ ಇಂಡಿಯಾಗೆ ತಿಳಿಸಿದರು.
ಜೊತೆಗೆ ಸಂಚಾರ ನಿಯಮ ಉಲ್ಲಂಘಿಸಿದ ವಾಹನ ಸವಾರರು ಇನ್ಮುಂದೆ ಸಂಚಾರ ನಿರ್ವಹಣಾ ಕೇಂದ್ರಕ್ಕೆ ಬರಬೇಕಿಂತಿಲ್ಲ. ನಗರದ ಯಾವುದೇ ಪೊಲೀಸ್ ಠಾಣೆಗೆ ತೆರಳಿ ದಂಡ ಪಾವತಿಸಬಹುದು ಎಂದು ಒನ್ ಇಂಡಿಯಾಗೆ ತಿಳಿಸಿದರು. ದಂಡ ತುಂಬಿರುವ ಕುರಿತು ರಸೀದಿಯನ್ನು ಮರೆಯದೇ ಪಡೆದುಕೊಳ್ಳಬೇಕು ಎಂದು ರಾಣೆ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.