ಕೃಷಿ ಭೂಮಿ ಹಿಂತಿರುಗಿಸಿ ಉಪೇಂದ್ರ ಮೊದಲು ಬದಲಾಗಲಿ: ಹಿರೇಮಠ
ಹುಬ್ಬಳ್ಳಿ, ಆಗಸ್ಟ್ 14 : ನಟ-ನಿರ್ದೇಶಕ ಉಪೇಂದ್ರ ಹೊಸ ರಾಜಕೀಯ, ಅಲ್ಲಲ್ಲ 'ಪ್ರಜಾಕೀಯ' ಪಕ್ಷ ಕಟ್ಟಲು ಹೊರಟಿರುವ ಸಂಗತಿ ನಿಮಗೆಲ್ಲ ಗೊತ್ತೇ ಇದೆ. ಅವರ ನಿರ್ಧಾರವನ್ನು ಸ್ವಾಗತಾರ್ಹ ಎಂದಿರುವ ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್.ಆರ್.ಹಿರೇಮಠ, ರಾಜಕಾರಣದಲ್ಲಿ ಬದಲಾವಣೆ ಬಯಸಿರುವ ಉಪೇಂದ್ರ ಆ ಬದಲಾವಣೆ ತಮ್ಮಲ್ಲಿ ಮಾಡಿಕೊಳ್ಳಲಿ ಎಂದಿದ್ದಾರೆ.
ಮೊದಲಿಗೆ ಉಪೇಂದ್ರ ಅವರು ಕೃಷಿ ಭೂಮಿಯನ್ನು ಹಿಂತಿರುಗಿಸಿ ವೈಯಕ್ತಿಕವಾಗಿ ಬದಲಾವಣೆ ತಂದುಕೊಳ್ಳಬೇಕು ಎಂದಿದ್ದಾರೆ. ರೈತರಿಂದ ಖರೀದಿ ಮಾಡಿದ ಕೃಷಿ ಭೂಮಿಯನ್ನು ಉಪೇಂದ್ರ ಅವರು ವಾಣಿಜ್ಯ ಉದ್ದೇಶಕ್ಕೆ ಬಳಸಿಕೊಂಡಿದ್ದಾರೆ. ಅದನ್ನು ಮೊದಲು ಹಿಂತಿರುಗಿಸುವ ಮೂಲಕ ತಮ್ಮಲ್ಲಿ ಬದಲಾವಣೆಯನ್ನು ತಂದುಕೊಳ್ಳಬೇಕು ಎಂದು ಅವರು ಹೇಳಿದ್ದಾರೆ.

ಈಚೆಗೆ ರುಪ್ಪೀಸ್ ರೆಸಾರ್ಟ್ ನಲ್ಲಿ ಉಪೇಂದ್ರ ಪತ್ರಿಕಾಗೋಷ್ಠಿ ನಡೆಸಿದ ಸಂದರ್ಭದಲ್ಲೂ ಈ ವಿಚಾರವನ್ನು ಪತ್ರಕರ್ತರೊಬ್ಬರು ಎತ್ತಿದ್ದರು. ಇದರಿಂದ ಸ್ವಲ್ಪ ಸಿಟ್ಟಾದಂತೆ ಕಂಡ ಉಪ್ಪಿ, ಈಗಾಗಲೇ ಕೋರ್ಟ್ ಈ ಬಗ್ಗೆ ತೀರ್ಪು ಕೊಟ್ಟಿದೆ. ಅದನ್ನು ಗೌರವಿಸುತ್ತೇನೆ ಎಂದರು.
ಲಿಂಗಾಯತ ಪ್ರತ್ಯೇಕ ಧರ್ಮ ಸ್ಥಾನ ಮಾನಕ್ಕೆ ಸಂಬಂಧಿಸಿದ ಹಾಗೆ ಪ್ರತಿಕ್ರಿಯೆ ನೀಡಿದ ಅವರು, ಈ ವಿಚಾರ ಇಟ್ಟುಕೊಂಡು ಕೀಳು ರಾಜಕೀಯ ಮಾಡಲಾಗುತ್ತಿದೆ. ಧರ್ಮ ಹಾಗೂ ರಾಜಕೀಯ ಎರಡೂ ಬೇರೆ ಬೇರೆ. ಅವೆರಡನ್ನೂ ಬೆರೆಸಬಾರದು ಎಂದು ಹಿರೇಮಠ ಹೇಳಿದರು.












Click it and Unblock the Notifications