ವಾಣಿಜ್ಯ ನಗರಿಯಲ್ಲಿ ಒಣ ಮೆಣಸಿನಕಾಯಿ ಮೇಳ: ದಲ್ಲಾಳಿಗಳ ಕಾಟ ಇಲ್ಲದೆ ರೈತರ ಭರ್ಜರಿ ವ್ಯಾಪಾರ
ಹುಬ್ಬಳ್ಳಿ, ಜನವರಿ 21: ಕಳೆದ ಮೂರು ವರ್ಷಗಳ ಬಳಿಕ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ 11ನೇ ಒಣ ಮೆಣಸಿನಕಾಯಿ ಮೇಳವನ್ನು ಮೂರುಸಾವಿರ ಮಠದ ಆವರಣದಲ್ಲಿ ಇದೇ ಜನವರಿ 20 ಶುಕ್ರವಾರದಿಂದ ಜನವರಿ 23ರ ವರೆಗೆ ಹಮ್ಮಿಕೊಳ್ಳಲಾಗಿದೆ.
ತೋಟಗಾರಿಕೆ ಇಲಾಖೆಯ ಕರ್ನಾಟಕ ರಾಜ್ಯ ಸಾಂಬಾರು ಪದಾರ್ಥಗಳ ಅಭಿವೃದ್ಧಿ ಮಂಡಳಿಯ ಸಹಭಾಗಿತ್ವದಲ್ಲಿ ಮೂರು ದಿನಗಳ ಮೇಳವನ್ನು ಹಮ್ಮಿಕೊಳ್ಳಲಾಗಿದೆ. ರೈತನಿಂದ ನೇರವಾಗಿ ಗ್ರಾಹಕನ ಕೈ ಸೇರುವಂತ ಸದುದ್ದೇಶದಿಂದ ಇಂತಹದೊಂದು ಮೇಳಕ್ಕೆ ತೋಟಗಾರಿಕೆ ಇಲಾಖೆ ಮುಂದಾಗಿದೆ. ದಲ್ಲಾಳಿಗಳ ಕಾಟ ತಪ್ಪಿಸಲು ಸಾಂಬಾರ ಮಂಡಳಿಯಿಂದ ಮೇಳ ಆಯೋಜನೆ ಮಾಡಲಾಗಿದೆ.

ಉತ್ತರ ಕರ್ನಾಟಕದ ರೈತರಿಗಾಗಿ ಮೆಣಸಿನ ಮೇಳ
ಕಳೆದ 10 ವರ್ಷಗಳಿಂದ ಮೇಳ ನಡೆಸಿಕೊಂಡು ಬರಲಾಗುತ್ತಿದೆ. ಅಲ್ಲದೆ ರೈತರಿಂದ ಹಾಗೂ ಗ್ರಾಹಕರಿಂದ ಉತ್ತಮ ಸ್ಪಂದನೆ ಸಿಗುತ್ತಿರುವುದರಿಂದ, ಸಾಂಬಾರು ಮಂಡಳಿ ಉತ್ತರ ಕರ್ನಾಟಕ ಭಾಗದ ರೈತರಿಗೆ ಅನೂಕೂಲ ಮಾಡಿಕೊಡುವ ಉದ್ದೇಶದಿಂದ ಮೇಳ ಆಯೋಜಿಸಲಾಗಿದೆ.
ಅನ್ನದಾತರು ಕಷ್ಟಪಟ್ಟು ಬೆಳೆದ ಬೆಳೆಗೆ ಯೋಗ್ಯವಾದ ಬೆಲೆ ಸಿಗುತ್ತಿದ್ದು ಮಧ್ಯವರ್ತಿಗಳ ಹಾವಳಿ ಇಲ್ಲದೆ ರೈತರು ನೇರವಾಗಿ ಮಾರುಕಟ್ಟೆ ಪ್ರವೇಶ ಮಾಡಿದ್ದಾರೆ. ಹೀಗೆ ಮಾಡುವುದರಿಂದ ರೈತರಿಗೆ ಲಾಭ ಆಗುತ್ತಿದೆ. ಈ ನಿಟ್ಟಿನಲ್ಲಿ ಸರ್ಕಾರ ಇಂತಹ ಮೇಳಗಳನ್ನು ಹೆಚ್ಚು ಹೆಚ್ಚು ಆಯೋಜನೆ ಮಾಡಬೇಕು ಎನ್ನುವುದು ರೈತವರ್ಗದ ಕೋರಿಕೆಯಾಗಿದೆ.

ಮೊದಲ ದಿನವೇ ಭರ್ಜರಿ ವ್ಯಾಪಾರ
ವಾಣಿಜ್ಯನಗರಿ ಹುಬ್ಬಳ್ಳಿಯ ಮೂರು ಸಾವಿರ ಮಠದ ಆವರಣದಲ್ಲಿ ಹಮ್ಮಿಕೊಳ್ಳಲಾಗಿರುವ ಮೂರು ದಿನಗಳ 11ನೇ ಒಣ ಮೆಣಸಿನಕಾಯಿ ಮೇಳಕ್ಕೆ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಚಾಲನೆ ನೀಡಿದರು.
ಕುಂದಗೋಳ, ಬ್ಯಾಡಗಿ ಭಾಗದಲ್ಲಿ ಅತಿಹೆಚ್ಚು ಮೆಣಸಿನಕಾಯಿ ಬೆಳೆಯಲಾಗುತ್ತಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ರೈತರು ಹಾಗೂ ಗ್ರಾಹಕರು ಭಾಗವಹಿಸುವ ಮೂಲಕ ಮೇಳಕ್ಕೆ ಮೆರಗನ್ನು ತಂದಿದ್ದಾರೆ. ಧಾರವಾಡ, ಹಾವೇರಿ ಹಾಗೂ ಗದಗ ಜಿಲ್ಲೆಯಲ್ಲಿ ಬೆಳೆದ ಮೆಣಸಿನಕಾಯಿಗೆ ದೇಶದಾದ್ಯಂತ ಬೇಡಿಕೆ ಇದೆ. ಈ ಭಾಗದ ಉತ್ಪನ್ನಗಳನ್ನು ದೇಶದ ಮೂಲೆಮೂಲಗೆ ತಲುಪಿಸುವ ಕೆಲಸವನ್ನು ಸಾಂಬಾರು ಮಂಡಳಿ ಮಾಡುತ್ತಿರುವುದು ವಿಶೇಷವಾಗಿದೆ.

ತೋಟಗಾರಿಕೆ ಇಲಾಖೆಯಿಂದ ವಿಶೇಷ ಕಾರ್ಯ
ಸಂಬಾರು ಪದಾರ್ಥಗಳ ಅಭಿವೃಧ್ಧಿ ಮಂಡಳಿ, ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ, ತೋಟಗಾರಿಕೆ ಇಲಾಖೆ, ಹುಬ್ಬಳ್ಳಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ, ಸಂಶಿಯ ಅಮರಶಿವ ರೈತ ಉತ್ಪಾದಕ ಸಂಸ್ಥೆ ಸಂಶಿ ಹಾಗೂ ಅಮರಗೋಳದ ಉಳುವ ಯೋಗಿ ರೈತ ಉತ್ಪಾದಕ ಸಂಸ್ಥೆ ಸಹಯೋಗದಲ್ಲಿ ಮೇಳ ಆಯೋಜಿಸಲಾಗಿದೆ. ಧಾರವಾಡ, ಹಾವೇರಿ, ಗದಗ ಸೇರಿದಂತೆ ಸುತ್ತಮುತ್ತಲಿನ ತಾಲೂಕುಗಳ ರೈತರು ಮೇಳದಲ್ಲಿ ಭಾಗವಹಿಸಿದ್ದು, ವಿವಿಧ ತಳಿಯ ಸುಮಾರು ನೂರು ಮಳಿಗೆಗಳು ಮೇಳದಲ್ಲಿವೆ.

ಖರೀದಿಗೆ ಮುಗಿಬಿದ್ದ ಗ್ರಾಹಕರು
ಇನ್ನು ಕೋವಿಡ್-19ರ ಕಾರಣದಿಂದ ಕಳೆದ ಮೂರು ವರ್ಷಗಳಿಂದ ಮೇಳ ಆಯೋಜಿಸಿಲು ಸಾಧ್ಯವಾಗಿರಲಿಲ್ಲ. ಈ ನಿಟ್ಟಿನಲ್ಲಿ ಈ ವರ್ಷ ಮತ್ತೆ ಮೆಣಸಿನಕಾಯಿ ಮೇಳ ಆಯೋಜಿಸಿರುವುದು ಕೃಷಿಕರ ಖುಷಿಗೆ ಕಾರಣವಾಗಿದೆ. ಅಲ್ಲದೇ ಗ್ರಾಹಕರೂ ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ಖರೀದಿಗೆ ಮುಗಿ ಬಿದ್ದಿರುವ ದೃಶ್ಯಗಳು ಸಾಮಾನ್ಯವಾಗಿತ್ತು.
ಮೂರು ವರ್ಷಗಳ ಬಳಿಕ ನಡೆಯುತ್ತಿರುವ ಮೇಳದಿಂದ ರೈತರಿಗೆ ಹಾಗೂ ಗ್ರಾಹಕರಿಗೆ ಹೊಸ ಖುಷಿಯನ್ನು ತಂದಿದೆ. ಅನ್ನದಾತನ ಸಂಕಷ್ಟ ದೂರವಾಗಿ ಮಧ್ಯವರ್ತಿಗಳ ಹಾವಳಿ ತಪ್ಪಿದರೇ ಸಾಕು ಎಂಬುವುದು ಸಾರ್ವಜನಿಕರ ಮನವಿಯಾಗಿದೆ.












Click it and Unblock the Notifications