ಅಧಿಕಾರಿಗಳ ನಿರ್ಲಕ್ಷ್ಯದಿಂದ ಅಭಿವೃದ್ಧಿ ಕುಂಠಿತ: ಜಗದೀಶ್ ಶೆಟ್ಟರ್
ಹುಬ್ಬಳ್ಳಿ, ಜನವರಿ 28: ಯುವಕರು ಉದ್ಯಮದಲ್ಲಿ ತೊಡಗಿಸಿಕೊಳ್ಳಲಿ ಎಂದು ಸರಕಾರ ಬಹಳಷ್ಟು ಯೋಜನೆಗಳನ್ನು ಜಾರಿಗೆ ತಂದರೂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಯಾವುದೇ ಯೋಜನೆಗಳು ಜಾರಿಯಾಗುತ್ತಿಲ್ಲ ಹೀಗಾಗಿ ಅಭಿವೃದ್ಧಿ ಕುಂಠಿತವಾಗುತ್ತಿದೆ. ಎಂದು ಮಾಜಿ ಮುಖ್ಯಮಂತ್ರಿ, ವಿಧಾನಸಭೆ ವಿರೋಧ ಪಕ್ಷದ ಜಗದೀಶ ಶೆಟ್ಟರ್ ಹೇಳಿದರು.
ಅವರು ನಗರದ ಡೆನಿಸನ್ಸ್ ಹೊಟೆಲ್ ನಲ್ಲಿ ನಡೆಯುತ್ತಿರುವ ಟೈಕಾನ್ -2017 ಮಹಿಳಾ ಉದ್ಯಮಿಗಳ ಸಮಾವೇಶದಲ್ಲಿ ಶುಕ್ರವಾರ ಪಾಲ್ಗೊಂಡು ಮಾತನಾಡಿ, ಅಧಿಕಾರಿಗಳ ಸಹಕಾರ ಇರದಿದ್ದರೆ ಸರಕಾರ ರೂಪಿಸುವ ಸಾಕಷ್ಟು ಜನೋಪಯೋಗಿ ಯೋಜನೆಗಳುಯ ಜಾರಿಗೆ ಬರುವುದು ಅಸಾಧ್ಯ ಎಂದರು.[ಉದ್ಯಮಗಳು ಬೆಳೆದರೆ ಯವಕರಿಗೆ ಹೆಚ್ಚಿನ ಉದ್ಯೋಗಗಳು: ಶೆಟ್ಟರ್]
ಮುಂದಿನ ಉದ್ಯಮಿಗಳ ಸಮ್ಮೇಳನದಲ್ಲಿ ಐಎಎಸ್ ಅಧಿಕಾರಿಗಳು ಹಾಗೂ ಯುವ ಉದ್ಯಮಿಗಳ ಮಧ್ಯೆ ಸಂವಾದ ಏರ್ಪಡಿಸುವಂತಾಗಬೇಕು ಇದರಿಂದ ಅನೇಕ ಸಂಶಯ ಮತ್ತು ಸಮಸ್ಯೆಗಳು ಪರಿಹಾರವಾಗುತ್ತವೆ ಎಂದರು.
ಮಹಿಳೆಯರಿಗೆ ಸಹಾಯ:
ಕೈಗಾರಿಕೋದ್ಯಮಿಯಾಗಬೇಕೆಂದು ಶ್ರಮಿಸುವ ನವೋದ್ಯಮಿ ಮಹಿಳೆಯರಿಗೆ ಸರಕಾರದಿಂದ ಸಹಾಯ ಮಾಡುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಲಕರ್ಣಿ ಹೇಳಿದರು. ಅವರು ಟೈಕಾನ್ ಸಮಾವೇಶ ಉದ್ಘಾಟಿಸಿ ಮಾತನಾಡಿ, ಪ್ರಾಮಾಣಿಕತೆ, ಬದ್ಧತೆ ಮತ್ತು ಪರಿಶ್ರಮದಿಂದ ಕೆಲಸ ಮಾಡಿದರೆ ಯಶಸ್ವಿ ಉದ್ಯಮಿಯಾಗಲು ಸಾಧ್ಯ ಎಂದರು. ಕೈಗಾರಿಕಾ ಕ್ಷೇತ್ರಗಳಲ್ಲಿ ಮಹಿಳೆಯರನ್ನು ಪ್ರೋತ್ಸಾಹಿಸಲು ಧಾರವಾಡ ಬಳಿ ಪ್ರತ್ಯೇಕ ಮಹಿಳಾ ಕೈಗಾರಿಕಾ ವಸಾಹತು ಸ್ಥಾಪಿಸುವುದಾಗಿ ಸಚಿವ ಕುಲಕರ್ಣಿ ಹೇಳಿದರು.
ಯುವಕರು ರಾಜಕೀಯಕ್ಕೆ ಬರಲಿ
ರಾಜಕಾರಣಿಗಳು ಹಾಗೂ ಉದ್ಯಮಿಗಳು ಇಲ್ಲದೇ ದೇಶ ಅಭಿವೃದ್ಧಿ ಅಸಾಧ್ಯ ಎಂದು ಸಂಸದ ಪ್ರಹ್ಲಾದ ಜೋಶಿ ಹೇಳಿದರು. ಉದ್ಯಮ ಸ್ಥಾಪನೆಗೆ ಕೇಂದ್ರ ಹಾಗೂ ರಾಜ್ಯ ಸರಕಾರದ ಯೋಜನೆಗಳನ್ನು ಸದ್ಭಳಕೆ ಮಾಡಿಕೊಳ್ಳಬೇಕು ಎಂದರು.
ದೇಶದಲ್ಲಿನ ಅರ್ಥಿಕ ಪ್ರಗತಿಗೆ ಕೃಷಿ ಕ್ಷೇತ್ರದ ಪಾಲು ಕುಂಠಿತವಾಗುತ್ತಿದೆ. ಹೀಗಾಗಿ ಕೃಷಿ ಕ್ಷೇತ್ರಕ್ಕೆ ಸಹಕಾರ ನೀಡುವುದರೊಂದಿಗೆ ಉದ್ಯಮ ಕ್ಷೇತ್ರವನ್ನೂ ಪ್ರೋತ್ಸಾಹಿಸುವ ಅಗತ್ಯವಿದೆ ಎಂದರು. ರಾಜಕಾರಣ ಮತ್ತು ಉದ್ಯಮಗಳು ಜಂಟಿಯಾಗಿ ಬೆಳೆಯಬೇಕು. ಆದ್ದರಿಂದ ಯುವಜನಾಂಗ ಹೆಚ್ಚಿನ ಸಂಖ್ಯೆಯಲ್ಲಿ ರಾಜಕಾರಣ ಹಾಗೂ ಉದ್ಯಮದಲ್ಲಿ ತೊಡಗಿಸಿಕೊಳ್ಳಲು ಸಲಹೆ ಮಾಡಿದರು.
ಸೋಲಿಗೆ ತಲೆ ಕೆಡಿಸಿಕೊಳ್ಳಬೇಡಿ:
ಸಾಧನೆ ಮಾಡುವವರು ನಿಜವಾದ ಉದ್ಯಮಿಗಳು ಎಂದು ಶಾಸಕ ಬಸವರಾಜ ಬೊಮ್ಮಾಯಿ ತಿಳಿಸಿದರು. ಸಾಧಿಸಿದ ತೃಪ್ತಿ ಉದ್ಯಮಿಗೆ ಇರಬಾರದು ಇನ್ನೂ ಹೆಚ್ಚು ಸಾಧಿಸಬಲ್ಲೆ ಎಂಬ ಮಹತ್ವಾಕಾಂಕ್ಷೆ ಹೊಂದಿರಬೇಕು ಎಂದರು. ಉದ್ಯಮ ಕ್ಷೇತ್ರದಲ್ಲಿ ಯಾರದೂ ಮಾರ್ಗದರ್ಶನವಿಲ್ಲದೇ ತೆಗೆದುಕೊಳ್ಳುವ ಮಹತ್ವದ ನಿರ್ಧಾರಗಳಿ ಸೋಲನುಭವಿಸಿದರೂ ಸೋಲಿನ ಬಗ್ಗೆ ಕಂಗೆಡದೇ ಗೆಲುವಿಗಾಗಿ ಪ್ರಯತ್ನಿಸಬೇಕು ಎಂದರು.ಸಮಾವೇಶದಲ್ಲಿ ಉತ್ತರ ಕರ್ನಾಟಕದ 500 ಕ್ಕೂ ಹೆಚ್ಚು ಮಹಿಳಾ ಉದ್ಯಮಿಗಳು ಪಾಲ್ಗೊಂಡಿದ್ದರು.
ದೇಶದಲ್ಲಿ ವಾರಕ್ಕೆ 10 ನವೋದ್ಯಮಗಳ ಸ್ಥಾಪನೆ:
ದೇಶದಲ್ಲಿ ಪ್ರತಿ ವಾರಕ್ಕೆ 10 ನವೋದ್ಯಮಗಳು ಸ್ಥಾಪನೆಯಾಗುತ್ತಿವೆ ಎಂದು ಮಸ್ಬೇಕ್ ಕಂಪನಿ ಸಂಸ್ಥಾಪಕ ಅಶಾಂಕ ದೇಸಾಯಿ ಹೇಳಿದರು .30 ವರ್ಷಗಳ ಹಿಂದಿನ ಸ್ಥಿತಿ ಈಗಿಲ್ಲ. ಮುಂಬಯಿನಲ್ಲಿ ಆಗ ಒಂದು ಟೆಲಿಫೋನ್ ತೆಗೆದುಕೊಳ್ಳಲು 10 ವರ್ಷಗಳು ಬೇಕಾದವು. ಉದ್ಯಮ ಸ್ಥಾಪನೆಗೆ ಆಗ ಸರಕಾರದ ಸಹಕಾರ ಸಿಗುತ್ತಿರಲಿಲ್ಲ. ಈಗ ಸರಕಾಗಳೇ ಉದ್ಯಮಿಗಳನ್ನು ಆಹ್ವಾನಿಸಿ ಸಹಾಯ ಮಾಡುತ್ತಿವೆ. ಯುವಕರು ಮುಂದುವರಿದ ತಂತ್ರಜ್ಞಾನ ಬಳಸಿಕೊಂಡು ಉದ್ಯಮ ಸ್ಥಾಪಿಸಲು ಶ್ರಮಿಸಬೇಕು. ದೇಶದಲ್ಲಿ ಪ್ರಸ್ತುತ 10 ಮಿಲಿಯನ್ ಉದ್ಯಮಿಗಳಿದ್ದು ಮುಂದಿನ ಐದೇ ವರ್ಷಗಳಲ್ಲಿ ಈ ಸಂಖ್ಯೆ 20 ಮಿಲಿಯನ್ ದಾಟಲಿದೆ. ಇದರಿಂದ ದೇಶದಲ್ಲಿ ನಿರುದ್ಯೋಗ ಸಮಸ್ಯೆ ಬಗೆಹರಿಯಬಹುದಾಗಿದೆ ಎಂದರು.
ಉದ್ಯಮ ಸ್ಥಾಪನೆಯಲ್ಲಿ ತೊಂದರೆಗಳು ಸಹಜ:
ಪ್ರತಿಯೊಂದು ಉದ್ಯಮ ಸ್ಥಾಪನೆಯ ಸಮಯದಲ್ಲಿ ತೊಂದರೆಗಳು ಬರುವುದು ಸಹಜ ಎಂದು ದೇಶಪಾಂಡೆ ಫೌಂಡೇಶನ್ ನ ಡಾ.ಗುರುರಾಜ ದೇಶಪಾಂಡೆ ಹೇಳಿದರು. ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಸಾಮರ್ಥ್ಯ ಯುವಕರಿದೆ ಎಂದರು. ಈಗ ಸಮಾಜದಲ್ಲಿ ಮೂರು ತರಹದ ಯುವಕರಿದ್ದಾರೆ. ಒಬ್ಬರು ಕೇವಲ ಸಮಸ್ಯೆಗಳ ಬಗ್ಗೆ ಚರ್ಚಿಸುತ್ತಿದ್ದಾರೆ, ಮತ್ತೊಬ್ಬರು ಏನನ್ನೂ ಮಾಡದೇ ಸುಮ್ಮನಿರುತ್ತಾರೆ. ಇನ್ನೊಬ್ಬರು ಸಮಸ್ಯೆಗಳಿಗೆ ಪರಿಹಾರ ಹುಡುಕಲು ಶ್ರಮಿಸುತ್ತಾರೆ ಎಂದರು.
ವೃತ್ತಿಪರ ಕೋರ್ಸ್ ಗೆ ಸೇರಿಕೊಳ್ಳಿ:
ಉದ್ಯಮ ರಂಗದಲ್ಲಿ ಹೆಚ್ಚುತ್ತಿರುವ ಜಾಗತಿಕ ಸ್ಪರ್ಧೆಗೆ ವೃತ್ತಿ ಪರ ಕೋರ್ಸ್ ಗಳಿಗೆ ವಿದ್ಯಾರ್ಥಿಗಳು ಸೇರಬೇಕು ಎಂದು ಧಾರವಾಡ ಐಐಟಿ ನಿಯೋಜಿತ ನಿರ್ದೇಶಕ ಪಿ.ಶೇಷು ಹೇಳಿದರು. ಮೇಕ ಇನ್ ಇಂಡಿಯಾ, ಸ್ಟಾರ್ಟ್ಅಪ್ ಇಂಡಿಯಾ ಯೋಜನೆಗಳಿಂದ ದೇಶದ ಅಭಿವೃದ್ಧಿ ಸಾಧ್ಯ ಎಂದರು. ಶೈಕ್ಷಣಿಕ ಕ್ಷೇತ್ರದಲ್ಲಿ ಸಂಶೋಧನೆ ಮತ್ತು ಕೇವಲ ಉದ್ಯಮಶೀಲ ಮಾತ್ರ ಇರುತ್ತದೆ. ಐಐಟಿ, ಐಐಎಂ, ಐಐಐಟಿ ಸಂಸ್ಥೆಗಳಿಂದ ವಿದ್ಯಾರ್ಥಿಗಳಿಗೆ ಜಾಗತಿಕವಾಗಿ ಗುರುತಿಸಿಕೊಳ್ಳಲು ವೇದಿಕೆಯಾಗಿವೆ ಎಂದರು.