Hescom: ವಿದ್ಯುತ್ ದರ ಹೆಚ್ಚಳಕ್ಕೆ ಸಾರ್ವಜನಿಕರ ತೀವ್ರ ಆಕ್ಷೇಪ
ಹುಬ್ಬಳ್ಳಿ, ಫೆಬ್ರವರಿ 22: ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿಯ (ಹೆಸ್ಕಾಂ) ದರ ಹೆಚ್ಚಳದ ಪ್ರಸ್ತಾವಕ್ಕೆ ಗ್ರಾಹಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ನವ ನಗರದಲ್ಲಿರುವ ಹೆಸ್ಕಾಂ ಸಭಾಂಗಣದಲ್ಲಿ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗದ (ಕೆಇಆರ್ಸಿ) ವತಿಯಿಂದ ಏರ್ಪಡಿಸಿದ್ದ ಸಾರ್ವಜನಿಕ ವಿಚಾರಣೆ ಸಭೆಯಲ್ಲಿ ಅನೇಕರು ಮಾತನಾಡಿ, ದರ ಹೆಚ್ಚಳ ಮಾಡದಿರುವಂತೆ ಮನವಿ ಮಾಡಿದರು.

ಮುಂದಿನ ವರ್ಷದ ಹೊತ್ತಿಗೆ 13094.12 ಮಿಲಿಯನ್ ಯುನಿಟ್ ವಿದ್ಯುತ್ ಅಗತ್ಯವಾಗಿದೆ. ಇಷ್ಟು ಯುನಿಟ್ ಮಾರಾಟದಿಂದ 12,244.20 ಕೋಟಿ ರೂ. ನಿವ್ವಳ ಆದಾಯ ಬರಲಿದೆ. ಪಸ್ತುತ ವಿದ್ಯುತ್ ದರಗಳಿಂದ 11502.45 ಕೋಟಿ ರೂ. ಆದಾಯ ಬರುತ್ತದೆ. ಹೀಗಾಗಿ ಕೊರತೆಯನ್ನು ಸರಿದೂಗಿಸಿಕೊಳ್ಳಲು ಪ್ರತಿ ಯುನಿಟ್ಟೆ 57 ಪೈಸೆ ಹೆಚ್ಚಳ ಮಾಡಬೇಕು. ಇದಕ್ಕೆ ಆಯೋಗ ಅನುಮತಿ ನೀಡುವಂತೆ ಹೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಮಹ್ಮದ್ ರೋಷನ್ ಕೋರಿದರು.
ಇದಕ್ಕೆ ಪ್ರತಿಕ್ರಿಯಿಸಿದ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗದ ಅಧ್ಯಕ್ಷ ಪಿ. ರವಿಕುಮಾರ, ವಿದ್ಯುತ್ ದರ ಪ್ರತಿ ವರ್ಷದಂತೆ ಹೆಚ್ಚಳ ಮಾಡಲು ಬರುವುದಿಲ್ಲ. ಹೆಸ್ಕಾಂಗೆ ಆಗುತ್ತಿರುವ ನಷ್ಟವನ್ನು ಸರಿದೂಗಿಸಲು ಇತರೆ ಖರ್ಚು ವೆಚ್ಚಗಳನ್ನು ಕಡಿಮೆ ಮಾಡಬಹುದಾಗಿದೆ ಎಂದರು.
ಸಾರ್ವಜನಿಕರ ಆಕ್ಷೇಪಣೆಗಳನ್ನು ಆಲಿಸಿದ ಅಧ್ಯಕ್ಷರು, ಪ್ರತಿ ಬಾರಿ ವಿದ್ಯುತ್ ದರ ಪರಿಷ್ಕರಣೆಗೆ ಅರ್ಜಿ ಸಲ್ಲಿಸಿದಾಗ ಒಪ್ಪಿಗೆ ಕೊಡುತ್ತ ಹೋದರೆ ಜನ ಸಾಮಾನ್ಯರಿಗೆ ಹೊರೆಯಾಗುತ್ತದೆ. ಪರ್ಯಾಯ ಮಾರ್ಗಗಳ ಮೂಲಕ ನಷ್ಟ ಸರಿದೂಗಿಸಿಕೊಳ್ಳಲು ಪ್ರಯತ್ನಿಸಿ. ವಿತರಣೆಯಲ್ಲಿನ ಸೋರಿಕೆ, ಅನಗತ್ಯ ವಿದ್ಯುತ್ ಖರೀದಿ ಮುಂತಾದವುಗಳನ್ನು ಕಡಿಮೆ ಮಾಡಿ, ವಿದ್ಯುತ್ ಶುಲ್ಕ ವಸೂಲಿ ಪರಿಣಾಮಕಾರಿಯಾಗಿ ಮಾಡಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಬಿಲ್ ಸರಿಪಡಿಸಲು ಸಾರ್ವಜನಿಕರ ಆಗ್ರಹ
ಗ್ರಾಹಕರಿಗೆ ನೀಡುತ್ತಿರುವ ವಿದ್ಯುತ್ ಬಿಲ್ ಓದಲು ಆಗುತ್ತಿಲ್ಲ. ಅನೇಕ ಗೊಂದಲಗಳು ಅದರಲ್ಲಿವೆ. ಅದನ್ನು ಸರಿಪಡಿಸಿ. ವಿತರಣಾ ವ್ಯವಸ್ಥೆಯಲ್ಲಿನ ನಷ್ಟವನ್ನು ಕಡಿಮೆ ಮಾಡಿ, ಬೇರೆ ಕಡೆಗಳಲ್ಲಿ ಈ ನಷ್ಟ ಕಡಿಮೆ ಇದೆ ಎಂದು ಅಧ್ಯಕ್ಷರು ಹೇಳಿದರು.
ಶಿರಸಿಯ ಜಿ.ಪಿ. ಹೆಗಡೆ ಕಡೆಕೋಡಿ ಅವರು, ವರ್ಷದಿಂದ ವರ್ಷಕ್ಕೆ ಹೆಸ್ಕಾಂ ನಷ್ಟದ ಪ್ರಮಾಣದ ಹೆಚ್ಚುತ್ತಿದೆ. ಇದನ್ನು ನೇರವಾಗಿ ಗ್ರಾಹಕರ ಮೇಲೆ ಹಾಕಲಾಗುತ್ತಿದೆ. ವಿದ್ಯುತ್ ಬಳಕೆ ಶುಲ್ಕ ಪರಿಣಾಮಕಾರಿ ವಸೂಲಿ ಮಾಡದೆ ಬ್ಯಾಂಕ್ಗಳಲ್ಲಿ ಸಾಲ ಮಾಡುತ್ತಾರೆ. ಇದರ ಬಡ್ಡಿ ಇತರೆ ವೆಚ್ಚಗಳು ಸಹ ಗ್ರಾಹಕರ ಮೇಲೆ ಹೇರುತ್ತಿದ್ದಾರೆ. ದೀನದಯಾಳ್ ಉಪಾಧ್ಯಾಯ ಯೋಜನೆಗೆ ಸಂಬಂಧಿಸಿ ಕೇಂದ್ರದ ಆಡಿಟ್ ವರದಿಯಲ್ಲಿ ಹೆಸ್ಕಾಂ ನಿಯಮ ಉಲ್ಲಂಘಿಸಿದೆ ಎಂದು ವರದಿಯಾಗಿದೆ. ಕೋಟ್ಯಂತರ ರೂಪಾಯಿ ಅವ್ಯವಹಾರ ಇದಾಗಿದೆ ಎಂದು ದೂರಿದರು.












Click it and Unblock the Notifications