ನೈಋತ್ಯ ರೈಲ್ವೆಯಿಂದ ಕನ್ನಡ ಕಲಿಸಲು ತರಗತಿ, ವಿದ್ಯಾರ್ಥಿಗಳು ಯಾರು?
ಹುಬ್ಬಳ್ಳಿ, ಅಕ್ಟೋಬರ್ 31: ಹುಬ್ಬಳ್ಳಿಯಲ್ಲಿ ಪ್ರಧಾನ ಕಛೇರಿ ಹೊಂದಿರುವ ನೈಋತ್ಯ ರೈಲ್ವೆ ಕನ್ನಡ ಕಲಿಸಲು ತರಗತಿಗಳನ್ನು ನಡೆಸಲಿದೆ. ಈ ತರಗತಿಗೆ ಬರುವ ವಿದ್ಯಾರ್ಥಿಗಳು ಎಂದರೆ ಅಧಿಕಾರಿಗಳು/ ಸಿಬ್ಬಂದಿ ಅಚ್ಚರಿಯಾದರೂ ಇದು ಸತ್ಯ. ಹೊಸದಾಗಿ ನೇಮಕಗೊಂಡು ಕೆಲಸಕ್ಕೆ ಬರುವ, ಈಗ ಕೆಲಸ ಮಾಡುತ್ತಿರುವ ಬೇರೆ ರಾಜ್ಯದ ಅಧಿಕಾರಿಗಳಿಗೆ ಕನ್ನಡ ಕಲಿಸಲು ತರಗತಿಗಳನ್ನು ನಡೆಸಲಾಗುತ್ತದೆ. ಈ ಕುರಿತು ಈಗಾಗಲೇ ಸೂಚನೆಗಳನ್ನು ನೀಡಲಾಗಿದೆ.
ನೈಋತ್ಯ ರೈಲ್ವೆಯ ಹೆಚ್ಚುವರಿ ಆಡಳಿತಾಧಿಕಾರಿಗಳು ಈ ಕುರಿತು ವಲಯದ ವ್ಯಾಪ್ತಿಗೆ ಒಳಪಡುವ ಧಾರವಾಡ, ಹುಬ್ಬಳ್ಳಿ, ಮೈಸೂರು, ಬೆಂಗಳೂರು ಕಛೇರಿಗಳಿಗೆ ಈ ಕುರಿತು ನಿರ್ದೇಶನಗಳನ್ನು ನೀಡಿದ್ದಾರೆ. ವರ್ಕ್ಶಾಪ್ ಮತ್ತು ಇತರ ಪ್ರಮುಖ ಕಛೇರಿಗಳಲ್ಲಿ ಕಾರ್ಯ ನಿರ್ವಹಣೆ ಮಾಡುವ ಅಧಿಕಾರಿ, ಸಿಬ್ಬಂದಿಗಳು ಕನ್ನಡ ಕಲಿಯಬೇಕಿದೆ.

ಹೊಸದಾಗಿ ನೇಮಕಗೊಂಡು ವಲಯದ ವ್ಯಾಪ್ತಿಯಲ್ಲಿ ಕೆಲಸಕ್ಕೆ ಬರುವ ಉದ್ಯೋಗಿಗಳಿಗೆ ಕನ್ನಡ ಕಲಿಕೆ ಕಡ್ಡಾಯವಾಗಲಿದೆ. ಇದಕ್ಕಾಗಿ ತರಗತಿಗಳನ್ನು ನಡೆಸಲಾಗುತ್ತದೆ. ದೈನಂದಿನ ವ್ಯವಹಾರಗಳನ್ನು ನಡೆಸುವಷ್ಟು, ಸ್ಥಳೀಯ ಅಧಿಕಾರಿಗಳು, ಜನರ ಜೊತೆ ಮಾತನಾಡಲು ಬರುವಷ್ಟು ಕನ್ನಡವನ್ನು ಅಧಿಕಾರಿಗಳು/ ಸಿಬ್ಬಂದಿ ಕಲಿಯಬೇಕಾಗಿದೆ.
ಕನ್ನಡ ಪಾಠ: ನೈಋತ್ಯ ರೈಲ್ವೆ ವಲಯದಲ್ಲಿ ಕೆಲಸ ಮಾಡುವ ಅಧಿಕಾರಿ/ ಸಿಬ್ಬಂದಿಗಳಿಗೆ ಕನ್ನಡ ಬರುವುದಿಲ್ಲ ಎಂದು ಮಾಧ್ಯಮವೊಂದರಲ್ಲಿ ಪ್ರಕಟವಾದ ವರದಿಯನ್ನು ನೈಋತ್ಯ ರೈಲ್ವೆ ಪ್ರಧಾನ ವ್ಯವಸ್ಥಾಪಕ ಅರವಿಂದ್ ಶ್ರೀವಾಸ್ತವ್ ಗಂಭೀರವಾಗಿ ಪರಿಗಣಿಸಿದ್ದಾರೆ. ಆದ್ದರಿಂದ ಕನ್ನಡ ಕಲಿಯಬೇಕು ಎಂದು ಸೂಚನೆ ನೀಡಿದ್ದಾರೆ.
ನಾವು ಈಗಾಗಲೇ ಅಧಿಕಾರಿಗಳು/ ಸಿಬ್ಬಂದಿಗೆ ಕನ್ನಡ ಕಲಿಸಲು ಹಲವು ಕಾರ್ಯಕ್ರಮ ರೂಪಿಸಿದ್ದೇವೆ. ಕನ್ನಡ ಪುಸ್ತಕಗಳನ್ನು ಅವರಿಗೆ ತಿಳಿಸಿದ್ದೇವೆ. ದಿನನಿತ್ಯದ ವ್ಯವಹಾರದಲ್ಲಿ ಬಳಕೆ ಮಾಡುವಷ್ಟು ಕನ್ನಡ ಕಲಿಯಲು ನಮ್ಮದೇ ಆದ ವಿಶೇಷ ಪಠ್ಯವನ್ನು ರಚನೆ ಮಾಡಿಕೊಂಡಿದ್ದೇವೆ. ನಾವು ವಿವರವಾಗಿ ಕನ್ನಡ ಕಲಿಸಲು ಸಾಧ್ಯವಿಲ್ಲ. ಆದರೆ ಕನ್ನಡ ಮಾತನಾಡಲು ಕಲಿಯುವಂತೆ ಅವರಿಗೆ ಸೂಚಿಸಬಹುದು. ಈಗ ನಾವು ಅವರಿಗೆ ಕನ್ನಡ ಕಲಿತಾ ತರಗತಿಗಳಿಗೆ ತೆರಳುವಂತೆ ನಿರ್ದೇಶಿಸಬಹುದು ಎಂದು ಅಧಿಕಾರಿಗಳು ಹೇಳಿದ್ದಾರೆ.
ಬೇರೆ ರಾಜ್ಯದಿಂದ ಉದ್ಯೋಗಕ್ಕಾಗಿ ಕರ್ನಾಟಕಕ್ಕೆ ಆಗಮಿಸಿರುವ ಅಧಿಕಾರಿ/ ಸಿಬ್ಬಂದಿಗಳಿಗೆ ಸುಲಭವಾಗಿ ಕನ್ನಡವನ್ನು ಕಲಿಸಲು ನಾವು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸಹಕಾರವನ್ನು ಸಹ ಕೇಳಿದ್ದೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನೈಋತ್ಯ ರೈಲ್ವೆಯ ಕನ್ನಡ ಕಲಿಕಾ ತರಗತಿ ನಡೆಸುವ ತೀರ್ಮಾನವನ್ನು ವಿವಿಧ ರೈಲ್ವೆ ಹೋರಾಟ ಸಮಿತಿಗಳು ಸಹ ಸ್ವಾಗತಿಸಿವೆ. ಜನರು ಅಧಿಕಾರಿಗಳನ್ನು ಭೇಟಿ ಮಾಡಿದಾಗ ಪ್ರಾದೇಶಿಕ ಭಾಷೆಯಲ್ಲಿಯೇ ತಮ್ಮ ಅಹವಾಲು ಸಲ್ಲಿಸಲು ಅನುಕೂಲವಾಗುತ್ತದೆ. ಅಲ್ಲದೇ ಅಧಿಕಾರಿಗಳು ಸಹ ಪ್ರಾದೇಶಿಕ ಭಾಷೆಯಲ್ಲಿಯೇ ಉತ್ತರಿಸಲು ಇದು ಸಹಾಯಕ ಎಂದು ಅಭಿಪ್ರಾಯಪಟ್ಟಿದ್ದಾರೆ.
ಭಾರತೀಯ ರೈಲ್ವೆಗೆ ದೇಶದ ವಿವಿಧ ರಾಜ್ಯಗಳ ಅಭ್ಯರ್ಥಿಗಳು ನೇಮಕಗೊಳ್ಳುತ್ತಾರೆ. ಎಲ್ಲಾ ಅಧಿಕಾರಿಗಳು/ ಸಿಬ್ಬಂದಿ ಹಿಂದಿ ಮಾತನಾಡುತ್ತಾರೆ. ಆದರೆ ಹಿಂದಿ ಬರದ ರಾಜ್ಯಗಳಲ್ಲಿ ಅಲ್ಲಿನ ಪ್ರಾದೇಶಿಕ ಭಾಷೆಗಳನ್ನು ಕಲಿಸುವುದು ಉತ್ತಮ. ಇದರಿಂದಾಗಿ ಅವರಿಗೆ, ಜನರಿಗೂ ಸಹಾಯಕವಾಗುತ್ತದೆ ಎಂದು ರೈಲ್ವೆ ಹೋರಾಟಗಾರರು ಹೇಳಿದ್ದಾರೆ.
ಐಎಎಸ್/ ಐಪಿಎಸ್ ಮಾದರಿಯ ಉನ್ನತ ಹುದ್ದೆಯಲ್ಲಿ ಕಾರ್ಯ ನಿರ್ವಹಣೆ ಮಾಡುವವರಿಗೆ ತರಬೇತಿ ಹಂತದಲ್ಲಿಯೇ ಕನ್ನಡವನ್ನು ಕಲಿಸಲಾಗುತ್ತದೆ. ಇದೇ ಮಾದರಿಯಲ್ಲಿ ವಿವಿಧ ಇಲಾಖೆಯಲ್ಲಿ ಕಾರ್ಯ ನಿರ್ವಹಣೆ ಮಾಡುವ ಬೇರೆ ರಾಜ್ಯಗಳ ಸಿಬ್ಬಂದಿಗಳಿಗೂ ನೇಮಕಾತಿ ಆದೇಶ ನೀಡಿ, ಪೋಸ್ಟಿಂಗ್ ಮಾಡುವ ಮೊದಲೇ ಕನ್ನಡ ಕಲಿಸಬೇಕು ಎಂದು ಒತ್ತಾಯಿಸಲಾಗಿದೆ.












Click it and Unblock the Notifications