'ಬಂಡಾಯ ಶಾಸಕರನ್ನಿಟ್ಟುಕೊಂಡು ಸರ್ಕಾರ ನಡೆಸೋಕೆ ಆಗುತ್ತಾ?': ಬಿಜೆಪಿಗೆ ಸಿದ್ದರಾಮಯ್ಯ ಗುದ್ದು

ಹುಬ್ಬಳ್ಳಿ, ಆಗಸ್ಟ್ 26: 'ಹಾಲುಕುಡಿದ ಮಕ್ಕಳೇ ಬದುಕೊಲ್ಲ. ಇನ್ನು ವಿಷ ಕುಡಿದವರು ಬದುಕುತ್ತಾರಾ?'- ಹೀಗೆ ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರದ ಪತನದ ಬಳಿಕ ರಚನೆಯಾದ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರದ ಉಳಿವಿನ ಬಗ್ಗೆ ವ್ಯಂಗ್ಯವಾಡಿದ್ದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ.

ಪ್ರವಾಹ ಪೀಡಿತ ಪ್ರದೇಶಗಳ ಭೇಟಿಗೆ ಉತ್ತರ ಕರ್ನಾಟಕ ಪ್ರವಾಸ ಕೈಗೊಂಡಿರುವ ಅವರು, ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದರು.

ಬಿಜೆಪಿ ಸರ್ಕಾರದ ಅಸ್ತಿತ್ವದ ಕುರಿತು ಪ್ರತಿಕ್ರಿಯಿಸಿದ ಅವರು, 'ಬಂಡಾಯ ಶಾಸಕರನ್ನು ಇಟ್ಟುಕೊಂಡು ಸರ್ಕಾರ ನಡೆಸುವುದಕ್ಕೆ ಆಗುತ್ತದೆಯೇ? ಕಾಂಗ್ರೆಸ್ ಮತ್ತು ಜೆಡಿಎಸ್‌ನ ಅತೃಪ್ತ ಶಾಸಕರನ್ನು ಜತೆಯಲ್ಲಿಟ್ಟುಕೊಂಡು ಈ ಸರ್ಕಾರ ಒಂದು ವರ್ಷ ನಡೆದರೆ ಹೆಚ್ಚು' ಎಂದು ಹೇಳಿದರು.

Recommended Video

      ಅಧಿಕಾರ ನಡೆಸಲು ಬಾರದೇ ಇರುವವರು ಕುಮಾರಸ್ವಾಮಿ ತರ ಮಾತಾಡ್ತಾರೆ..? | siddaramaiah

      ರಾಜ್ಯದಲ್ಲಿ ಮತದಾರರು ಬಿಜೆಪಿಗೆ ಬಹುಮತ ನೀಡಿಲ್ಲ. ಆದರೂ ಅವರು ಕುದುರೆ ವ್ಯಾಪಾರ ನಡೆಸಿ ವಾಮಮಾರ್ಗದಿಂದ ಸರ್ಕಾರ ರಚಿಸಿದ್ದಾರೆ. ಹಾಗಾಗಿ ಅವರಿಗೆ ಜನರೇ ಸರಿಯಾದ ಪಾಠ ಕಲಿಸುತ್ತಾರೆ ಎಂದರು.

      ಬಿಜೆಪಿಯವರು ಎಷ್ಟು ಜನರನ್ನು ಬೇಕಾದರೂ ಉಪಮುಖ್ಯಮಂತ್ರಿಯನ್ನಾಗಿ ಮಾಡಿಕೊಳ್ಳಲಿ. ನಮಗೂ ಅದಕ್ಕೂ ಸಂಬಂಧವಿಲ್ಲ ಎಂದು ಬಿಜೆಪಿ ಸರ್ಕಾರ ಮೂವರು ಉಪ ಮುಖ್ಯಮಂತ್ರಿಗಳನ್ನು ಮಾಡುತ್ತಿರುವುದರ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದರು. ಜತೆಗೆ ಸರಣಿ ಟ್ವೀಟ್‌ಗಳನ್ನು ಅವರು ಮಾಡಿದ್ದು, ನೆರೆ ಪರಿಹಾರದ ವಿಚಾರದಲ್ಲಿ ಬಿಜೆಪಿಯ ನಿರ್ಲಕ್ಷ್ಯದ ವಿರುದ್ಧ ಹರಿಹಾಯ್ದಿದ್ದಾರೆ.

      ಜೆಡಿಎಸ್‌ನವರನ್ನು ಕಳಿಸಿದ್ದು ಯಾರು?

      ಜೆಡಿಎಸ್‌ನವರನ್ನು ಕಳಿಸಿದ್ದು ಯಾರು?

      ಕಾಂಗ್ರೆಸ್‌ನ ಅತೃಪ್ತ ಶಾಸಕ ಬೈರತಿ ಬಸವರಾಜ್ ಸೇರಿದಂತೆ ಕೆಲವರನ್ನು ನಾನೇ ಮುಂಬೈಗೆ ಕಳಿಸಿದ್ದೆ ಎಂದು ಎಚ್ ಡಿ ದೇವೇಗೌಡ ಅವರು ಆರೋಪಿಸಿದ್ದಾರೆ. ಹಾಗಾದರೆ, ಅವರದೇ ಪಕ್ಷದ ಎಚ್ ವಿಶ್ವನಾಥ್, ನಾರಾಯಣ ಗೌಡ ಮತ್ತು ಗೋಪಾಲಯ್ಯ ಅವರನ್ನು ಮುಂಬೈಗೆ ಕಳಿಸಿದ್ದು ಯಾರು? ದೇವೇಗೌಡರಿಗೆ ತಮ್ಮದೇ ಪಕ್ಷದ ಶಾಸಕರನ್ನು ಹಿಡಿದಿಟ್ಟುಕೊಳ್ಳಲು ಆಗಲಿಲ್ಲ. ಕಾಂಗ್ರೆಸ್ ಶಾಸಕರನ್ನು ಕೂಡ ವಿಶ್ವಾಸಕ್ಕೆ ತೆಗೆದುಕೊಳ್ಳಲು ಆಗಲಿಲ್ಲ. ಹೀಗಾಗಿಯೇ ಸರ್ಕಾರ ಬಿದ್ದುಹೋಯ್ತು ಎಂದು ಹೇಳಿದರು.

      'ದೇವೇಗೌಡರು ನನ್ನ ಮೇಲೆ ಗೂಬೆ ಕೂರಿಸಿ ರಾಜಕೀಯ ಲಾಭ ಪಡೆದುಕೊಳ್ಳಲು ನೋಡಿದರು. ಅದು ಸಾಧ್ಯವಾಗಲಿಲ್ಲ. ರಾಜ್ಯದ ಜನರು ಪ್ರಬುದ್ಧರಿದ್ದಾರೆ. ಅವರಿಗೆ ಎಲ್ಲವೂ ತಿಳಿಯುತ್ತದೆ' ಎಂದರು.

      ಸಚಿವರು ಭೇಟಿ ನೀಡಬೇಕಿತ್ತು

      ಸಚಿವರು ಭೇಟಿ ನೀಡಬೇಕಿತ್ತು

      'ರಾಜ್ಯದಲ್ಲಿ ಸಚಿವರು ಈಗಾಗಲೇ ಪ್ರವಾಹಪೀಡಿತ ಜಿಲ್ಲೆಗಳಿಗೆ ಭೇಟಿ ನೀಡಿರಬೇಕಿತ್ತು. ಪ್ರವಾಹದಿಂದ ಉಂಟಾದ ಹಾನಿಯನ್ನು ಪರಿಶೀಲನೆ ನಡೆಸಿ ಜನರ ಸಮಸ್ಯೆಗೆ ಸ್ಪಂದಿಸಬೇಕಿತ್ತು. ಆದರೆ, ಬೆಂಗಳೂರು ಮತ್ತು ದೆಹಲಿ ನಡುವೆ ಪ್ರವಾಸ ಮಾಡುತ್ತಿದ್ದಾರೆ. ಇಷ್ಟಾದರೂ ಅವರಿಗೆ ಕೇಂದ್ರ ಸರ್ಕಾರದಿಂದ ಪರಿಹಾರ ತರಲು ಸಾಧ್ಯವಾಗಿಲ್ಲ ಎಂದು ಟೀಕಿಸಿದರು.

      ಐದು ಸಾವಿರ ಕೋಟಿ ಕೊಡಬೇಕು

      ಐದು ಸಾವಿರ ಕೋಟಿ ಕೊಡಬೇಕು

      ಪ್ರವಾಹ ಉಂಟಾಗಿ ಇಪ್ಪತ್ತು ದಿನ ಕಳೆದಿದೆ. ಕೇಂದ್ರ ಸರ್ಕಾರ ಒಂದು ರೂಪಾಯಿ ಕೂಡ ನೀಡಿಲ್ಲ. ಹಿಂದೆ ಎಂದೂ ಹೀಗೆ ಆಗಿರಲಿಲ್ಲ. ಈಗ ಸಮೀಕ್ಷೆ ನಡೆಸಲು ಅಧಿಕಾರಿಗಳ ತಂಡ ಕಳಿಸಿದ್ದಾರಂತೆ. ಅವರು ಹಾನಿಯ ಕುರಿತು ವರದಿ ನೀಡಿದ ಬಳಿಕ ಪರಿಹಾರ ನೀಡುತ್ತಾರಂತೆ. ಇಷ್ಟೆಲ್ಲ ಹಾನಿಯಾಗಿರುವಾಗ ಅದನ್ನು ರಾಷ್ಟ್ರೀಯ ವಿಕೋಪ ಎಂದು ಘೋಷಿಸಿ ತುರ್ತಾಗಿ ಐದು ಸಾವಿರ ಕೋಟಿ ರೂಪಾಯಿ ಕೊಡಬೇಕಿತ್ತು' ಎಂದು ಅಸಮಾಧಾನ ವ್ಯಕ್ತಪಡಿಸಿದರು.

      'ಯಡಿಯೂರಪ್ಪ ಅವರು ಪ್ರವಾಹದಿಂದ ಗರಿಷ್ಠ 50 ಸಾವಿರ ಕೋಟಿ ನಷ್ಟವಾಗಿದೆ ಎನ್ನುತ್ತಾರೆ. ಮತ್ತೊಮ್ಮೆ 40 ಸಾವಿರ ಕೋಟಿ ಎನ್ನುತ್ತಿದ್ದಾರೆ. ನನ್ನ ಪ್ರಕಾರ ಪ್ರವಾಹದಿಂದ ಒಂದು ಲಕ್ಷ ಕೋಟಿ ರೂಪಾಯಿ ನಷ್ಟ ಉಂಟಾಗಿ' ಎಂದರು.

      ಮಾನದಂಡ ಸಡಿಲಿಸಲು ಅವಕಾಶವಿದೆ

      ಮಾನದಂಡ ಸಡಿಲಿಸಲು ಅವಕಾಶವಿದೆ

      'ಜನರಿಗೆ ಮನಬಂದಂತೆ ಪರಿಹಾರ ನೀಡುವುದು ಬೇಡ. ವಾಸ್ತವವಾಗಿ ಆಗಿರುವ ನಷ್ಟವನ್ನು ಲೆಕ್ಕಹಾಕಿ ಪರಿಹಾರ ಬಿಡುಗಡೆ ಮಾಡಬೇಕು. ಎನ್‌ಡಿಆರ್‌ಎಫ್ ಮಾನದಂಡಗಳಿಗೂ ಉಂಟಾಗಿರುವ ನಷ್ಟಕ್ಕೂ ಸಂಬಂಧವಿಲ್ಲ. ಎನ್‌ಡಿಆರ್ಎಫ್ ಮಾನದಂಡವನ್ನು ಸಡಿಲಿಸಿ ಪರಿಹಾರ ಕೊಡಲು ಅವಕಾಶವಿದೆ' ಎಂದು ಹೇಳಿದರು.

      ಅಧ್ಯಕ್ಷರ ಬದಲಾವಣೆ ತಿಳಿದಿಲ್ಲ

      ಅಧ್ಯಕ್ಷರ ಬದಲಾವಣೆ ತಿಳಿದಿಲ್ಲ

      'ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಕುರಿತು ನನಗೆ ಏನೂ ತಿಳಿದಿಲ್ಲ. ಕೇಂದ್ರದ ನಾಯಕ ಗುಲಾಂ ನಬಿ ಆಜಾದ್ ಅವರು ಇಂದು ಬರುತ್ತಿದ್ದಾರೆ ಎಂಬುದಷ್ಟೇ ನನಗೆ ಗೊತ್ತು. ಆದರೆ, ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಪರಿಶೀಲನೆ ನಡೆಸಲು ಬಾದಾಮಿಗೆ ತೆರಳುತ್ತಿದ್ದೇನೆ' ಎಂದು ತಿಳಿಸಿದರು.

      ಮಧ್ಯಂತರ ಚುನಾವಣೆ ಬರುತ್ತದೆ

      ಮಧ್ಯಂತರ ಚುನಾವಣೆ ಬರುತ್ತದೆ

      ಮಧ್ಯಂತರ ಚುನಾವಣೆ ಯಾವ ಸಮಯದಲ್ಲಾದರೂ ಬರಬಹುದು, ಈ ಉದ್ದೇಶಕ್ಕಾಗಿ ಪಕ್ಷ ಬಲಪಡಿಸುವಂತೆ ನಮ್ಮವರಿಗೆ ಕರೆ ನೀಡಿದ್ದೇನೆ. ಯಡಿಯೂರಪ್ಪನವರ ಸರ್ಕಾರ ಹೆಚ್ಚು ಕಾಲ ನಿಲ್ಲುವುದು ಕಷ್ಟ. ಬಂಡಾಯ ಶಾಸಕರನ್ನು ಸೇರಿಸಿಕೊಂಡು ಸರ್ಕಾರ ನಡೆಸುವುದು ಸುಲಭದ ಮಾತಲ್ಲ, 'ಹಾಲು ಕುಡಿದ ಮಕ್ಕಳೇ ಬದುಕುವುದು ಕಷ್ಟವಿರುವಾಗ, ವಿಷ ಕುಡಿದ ಮಕ್ಕಳು ಬದುಕುತ್ತವಾ?'

      ನ್ಯಾಯಯುತ ಪರಿಹಾರ ಒದಗಿಸಲಿ

      ನ್ಯಾಯಯುತ ಪರಿಹಾರ ಒದಗಿಸಲಿ

      ಪ್ರವಾಹ ಪರಿಸ್ಥಿತಿ ಸಮೀಕ್ಷೆಗೆ ಕೇಂದ್ರದ ತಂಡ ಆಗಮಿಸಿದೆ. ಪ್ರವಾಹದಿಂದಾಗಿ ಸುಮಾರು 20 ಲಕ್ಷ ಎಕರೆ ಬೆಳೆ ಹಾನಿ, 80 ಜನರ ಪ್ರಾಣ ಹಾನಿಯಾಗಿದೆ, ಲಕ್ಷಾಂತರ ಮನೆಗಳು ನೆಲಸಮಗೊಂಡಿವೆ,ಸಾವಿರಾರು ಜಾನುವಾರುಗಳು ಸಾವಿಗೀಡಾಗಿವೆ. ಇದನ್ನೆಲ್ಲ ಸೂಕ್ತವಾಗಿ ಸಮೀಕ್ಷೆ ನಡೆಸಿ, ನ್ಯಾಯಯುತ ಪರಿಹಾರ ಒದಗಿಸಲಿ ಎಂದು ಒತ್ತಾಯಿಸುವುದಾಗಿ ಹೇಳಿದ್ದಾರೆ.

      ಜನರ ಕಷ್ಟ ಕೇಳುವವರಾರು

      ಜನರ ಕಷ್ಟ ಕೇಳುವವರಾರು

      ಮುಖ್ಯಮಂತ್ರಿಗಳು ಒಳಗೊಂಡಂತೆ ಸರ್ಕಾರದ ಎಲ್ಲ ಮಂತ್ರಿಗಳು ಪ್ರವಾಹಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ, ಜನರ ಸಮಸ್ಯೆಗೆ ಸ್ಪಂದಿಸಬೇಕು. ಇದನ್ನು ಬಿಟ್ಟು ನಿತ್ಯ ಬೆಂಗಳೂರಿನಿಂದ ದೆಹಲಿ, ದೆಹಲಿಯಿಂದ ಬೆಂಗಳೂರಿಗೆ ಓಡಾಡುತ್ತಿದ್ದರೆ ಜನರ ಕಷ್ಟ ಕೇಳುವವರಾರು? ಅನೈತಿಕ ಮಾರ್ಗದ ಮೂಲಕ‌ ಅಧಿಕಾರ ಹಿಡಿದವರ ಕತೆಯೇ ಹೀಗೆ, ಅವರಿಗೆ ಜನಪರ ಕಾಳಜಿಯಿರಲ್ಲ ಎಂದು ಟೀಕಿಸಿದರು.

      ಸರ್ಕಾರ ಕಣ್ಮುಚ್ಚಿ ಕುಳಿತಿದೆ

      ಸರ್ಕಾರ ಕಣ್ಮುಚ್ಚಿ ಕುಳಿತಿದೆ

      ಪ್ರವಾಹ ಸಂತ್ರಸ್ತರಿಗೆ ತಾತ್ಕಾಲಿಕ ಆಶ್ರಯ ತಾಣ ಒದಗಿಸುವಂತೆ ಕಳೆದ ವಾರವೇ ಆಗ್ರಹಿಸಿದ್ದೆ, ಸರ್ಕಾರ ಇನ್ನೂ ಕಣ್ಣುಮುಚ್ಚಿ ಕೂತಿದೆ. ಎರಡು ಮೂರು ಸಾವಿರ ಪರಿಹಾರ ನೀಡಿದರೆ ಕಷ್ಟ ದೂರಾಗುವುದಿಲ್ಲ. ನಷ್ಟವನ್ನು ಸರಿಯಾಗಿ ಅಂದಾಜಿಸಿ, ಪರಿಹಾರ ಒದಗಿಸಬೇಕು. ಇದಕ್ಕೆ ಬೇಕಾದ ಅನುದಾನವನ್ನು ಕೇಂದ್ರ ಅಥವಾ ರಾಜ್ಯ ಸರ್ಕಾರವೇ ಭರಿಸಲಿ ಎಂದು ಸಿದ್ದರಾಮಯ್ಯ ಟ್ವೀಟ್‌ನಲ್ಲಿ ಹೇಳಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+