Shakti Scheme effect: ಹುಬ್ಬಳ್ಳಿಯಲ್ಲಿ ರಾರಾಜಿಸುತ್ತಿವೆ "ಆಟೋ ಮಾರಾಟಕ್ಕಿದೆ" ಎಂಬ ನಾಮಫಲಕಗಳು
ಹುಬ್ಬಳ್ಳಿ, ಜೂನ್, 26: ಕಾಂಗ್ರೆಸ್ ಸರ್ಕಾರ ಶಕ್ತಿ ಯೋಜನೆಯಡಿ ಕೆಎಸ್ಆರ್ಟಿಸಿ ಬಸ್ನಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶವನ್ನು ಕಲ್ಪಿಸಿದೆ. ಇದರ ಬಿಸಿ ಮೆಟ್ರೋ, ರೈಲು ಅಲ್ಲದೆ ಆಟೋ ಚಾಕಲರಿಗೂ ತಟ್ಟಿದೆ. ಇದರಿಂದ ಬೇಸತ್ತು ಕೆಲವರು ಇದೀಗ ತಮ್ಮ ಆಟೋಗಳನ್ನು ಮಾರಾಟ ಮಾಡಲು ಮುಂದಾಗಿರುವ ಘಟನೆ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ನಡೆದಿದೆ.
ರಾಜ್ಯ ಸರ್ಕಾರ ಘೋಷಣೆ ಮಾಡಿರುವ ಉಚಿತ ಪ್ರಯಾಣದ ಶಕ್ತಿ ಯೋಜನೆ ಎಫೆಕ್ಟ್ ಆಟೋ ಚಾಲಕರಿಗೂ ತಟ್ಟಿದೆ. ಶಕ್ತಿ ಯೋಜನೆಯ ಸೈಡ್ ಎಫೆಕ್ಟ್ನಿಂದ ಹುಬ್ಬಳ್ಳಿಯಲ್ಲಿ ಆಟೋ ಮಾರಾಟಕ್ಕಿದೆ ಎಂಬ ಫಲಕಗಳು ರಾರಾಜಿಸುತ್ತಿವೆ.

ನಿರೀಕ್ಷಿತ ವಹಿವಾಟು ನಡೆಯದೇ ಕಂಗಾಲಾದ ಆಟೋ ಚಾಲಕರು ಬೇರೆ ದಾರಿಯಿಲ್ಲದೆ ಅನಿವಾರ್ಯವಾಗಿ ಆಟೋ ಮಾರಾಟಕ್ಕೆ ಮುಂದಾಗಿದ್ದಾರೆ. ಶಕ್ತಿ ಯೋಜನೆ ಜಾರಿಯಿಂದ ಆಟೋ ಚಾಲಕರ ಮೇಲೆ ನೇರ ಪರಿಣಾಮ ಬೀರಿದೆ. ಯೋಜನೆ ಜಾರಿಯಾದ ಬಳಿಕ ಆಟೋ ಚಾಲಕರು ಪ್ರಯಾಣಿಕರು ಇಲ್ಲದೆ ತತ್ತರಿಸಿ ಹೋಗಿದ್ದಾರೆ.
ವಿದ್ಯಾರ್ಥಿಗಳಿಂದ ಪ್ರತಿಭಟನೆ
ಮತ್ತೊಂದೆಡೆ ಇತ್ತೀಚೆಗಷ್ಟೇ ಸಮರ್ಪಕ ಕೆಎಸ್ಆರ್ಟಿಸಿ ಬಸ್ ವ್ಯವಸ್ಥೆ ಇಲ್ಲದ ಪರಿಣಾಮ ಶಾಲಾ ಕಾಲೇಜು ವಿದ್ಯಾರ್ಥಿಗಳು ಹನೂರಿನಲ್ಲಿ ದಿಢೀರ್ ಪ್ರತಿಭಟನೆ ನಡೆಸಿದ್ದರು.
ಕೆಲವು ದಿನಗಳಿಂದ ಸಮರ್ಪಕ ಬಸ್ ಇಲ್ಲದೆ ಇರುವುದರಿಂದ ಶಾಲಾ-ಕಾಲೇಜುಗಳಿಗೆ ಸರಿಯಾದ ಸಮಯಕ್ಕೆ ತೆರಳಲು ಸಾಧ್ಯವಾಗುತ್ತಿಲ್ಲ. ಹೆಚ್ಚುವರಿ ಬಸ್ಗಳನ್ನು ಬಿಡುವಂತೆ ಮನವಿ ಮಾಡಿದರೂ ಯಾವುದೇ ಪ್ರಯೋಜನ ಇಲ್ಲದಂತಾಗಿದೆ. ಆದ್ದರಿಂದ ನೂರಾರು ವಿದ್ಯಾರ್ಥಿಗಳು ಹನೂರು ಪಟ್ಟಣದ ಕೆಎಸ್ಆರ್ಸಿ ಬಸ್ ನಿಲ್ದಾಣದ ಎಲ್ಲಾ ಕೆಎಸ್ಆರ್ಟಿಸಿ ಬಸ್ಗಳನ್ನು ತಡೆದು ಪ್ರತಿಭಟನೆ ನಡೆಸುತ್ತಿದ್ದೇವೆ ಎಂದು ವಿದ್ಯಾರ್ಥಿಗಳು ಹೇಳಿದ್ದರು.
ವಿಶೇಷ ಜಾತ್ರ ಹಬ್ಬ ಹರಿದಿನಗಳ ಸಂದರ್ಭದಲ್ಲಿ ಬಸ್ಗಳು ಇಲ್ಲದೆ ನಮಗೆ ಶಾಲಾ-ಕಾಲೇಜುಗಳಿಗೆ ಹೋಗಲು ತೊಂದರೆಯಾಗುತ್ತಿದೆ. ಈ ಬಗ್ಗೆ ಹಲವಾರು ಬಾರಿ ಡಿಪೋ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಿದ್ದರೂ ಕೂಡ ಯಾವುದೇ ಪ್ರಯೋಜನ ಆಗಿಲ್ಲ. 10 ನಿಮಿಷ ತಡವಾಗಿ ಹೋದರೂ ಸಹ ನಮ್ಮನ್ನು ಕಾಲೇಜಿಗೆ ಸೇರಿಸಿಕೊಳ್ಳುವುದಿಲ್ಲ. ಇದರಿಂದ ನಮಗೆ ತೀವ್ರ ತೊಂದರೆ ಆಗುತ್ತಿದೆ ಎಂದು ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದರು.
ನಂತರ ರಾಮಪುರ ಗ್ರಾಮದ ಶ್ರೀನಿವಾಸ್ ಮಾತನಾಡಿ, ಕೆಎಸ್ಆರ್ಟಿಸಿ ಬಸ್ನ ನಿರ್ವಾಹಕರು ಹಾಗೂ ಚಾಲಕರು ವಿದ್ಯಾರ್ಥಿಗಳ ಜೊತೆ ಅಸಭ್ಯವಾಗಿ ನಡೆದುಕೊಳ್ಳುತ್ತಿದ್ದಾರೆ. ನಾವು ಮೊದಲೇ ಹಣ ಪಾವತಿ ಮಾಡಿ ಬಸ್ ಪಾಸ್ ಪಡೆದಿದ್ದರೂ ಸಹ ಯಾವುದೇ ಪ್ರಯೋಜನ ಆಗುತ್ತಿಲ್ಲ. ಸಾರಿಗೆ ಇಲಾಖೆ ಅಧಿಕಾರಿಗಳು ಸರಿಯಾಗಿ ಸ್ಪಂದಿಸದೆ ಇರುವುದರಿಂದ ನಮ್ಮ ಶಿಕ್ಷಣಕ್ಕೆ ತೊಂದರೆ ಆಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.












Click it and Unblock the Notifications