ಹುಬ್ಬಳ್ಳಿ: ಹಂದಿ ಮಾಲೀಕರು ಬೀದಿನಾಯಿಗಳ ಮಾರಣ ಹೋಮ ಮಾಡಿದ್ರಾ?
ಹುಬ್ಬಳ್ಳಿ, ಡಿಸೆಂಬರ್, 7 : ನಗರದ ಆನಂದ ನಗರ ಮತ್ತು ಹೊಸ ಬಸ್ ನಿಲ್ದಾಣ ಹತ್ತಿರ ಬೀದಿ ನಾಯಿಗಳು ಸತ್ತು ಬೀಳುತ್ತಿವೆ. ಇದರಿಂದ ನಗರದಲ್ಲಿ ಬೀದಿ ನಾಯಿಗಳ ಮಾರಣ ನಡೆಯುತ್ತಿದೆಯಾ ಎಂಬ ಸಂಶಯ ಸಾರ್ವಜನಿಕರಲ್ಲಿ ವ್ಯಕ್ತವಾಗುತ್ತಿದೆ.
ಬೀದಿ ನಾಯಿಗಳು ಹಂದಿ ಮರಿಗಳನ್ನು ತಿನ್ನುಲು ಬೆನ್ನತ್ತಿ ಅವುಗಳ ಕುತ್ತಿಗೆ ಹಿಡಿದು ಸಾಯಿಸುತ್ತಿವೆ. ಇದರಿಂದ ಕೆರಳಿರುವ ಹಂದಿ ಮಾಲೀಕರು ಬೀದಿ ನಾಯಿಗಳನ್ನು ಸಾಯಿಸುತ್ತಿದ್ದಾರೆ ಎಂಬ ಸಂಶಯ ವ್ಯಕ್ತವಾಗಿವೆ.
ಸತ್ತ ನಾಯಿಗಳನ್ನು ನಗರದ ಹೊಸ ಬಸ್ ನಿಲ್ದಾಣದ ಹಿಂದೆ ಇರುವ ಖಾಲಿ ಜಾಗೆಯಲ್ಲಿ ಬಿಸಾಕುತ್ತಿದ್ದಾರೆ. ಕೆಟ್ಟ ವಾಸನೆ ಬೀರಿಲು ಪ್ರಾರಂಭಿಸಿದ ಬಳಿಕ ಸಾರ್ವಜನಿಕರ ದೂರಿನ ಮೇರೆಗೆ ಪಾಲಿಕೆ ಟ್ರ್ಯಾಕ್ಟರ್ ಕಳಿಸಿ ಸತ್ತ ನಾಯಿಯನ್ನು ಎತ್ತಿ ಕೊಂಡು ಹೋಗುತ್ತಿದ್ದಾರೆ.
ಈ ಬೀದಿ ನಾಯಿಗಳ ಮಾರಾಣ ಹೋಮಗಳ ಬಗ್ಗೆ ಸಂಬಂಧಪಟ್ಟ ಪಾಲಿಕೆ ಅಧಿಕಾರಿಗಳಿಗೆ ತಿಳಿಸಲಾಗಿದೆ. ಆದರೆ, ಪಾಲಿಕೆ ಅಧಿಕಾರಿಗಳು ಬೀದಿ ನಾಯಿಗಳು ಸಾಯಲಿ ಬಿಡಿ ಅವುಗಳಿಂದ ತುಂಬಾ ತೊಂದರೆ ಇತ್ತು ಎಂದು ಸಮಜಾಯಿಸಿ ನೀಡಿದ್ದಾರೆ.
ಇನ್ನು ಹಂದಿಗಳಿಂದ ಮಾತ್ರ ತೊಂದರೆ ಇಲ್ಲವೇ ಎಂದು ಪ್ರಶ್ನಿಸಿದರೆ, ನೀವು ಬೇಕಾದರೆ ಪ್ರಾಣಿ ದಯಾ ಸಂಘಕ್ಕೆ ತಿಳಿಸಿ. ನಮಗೆ ಮಾಡಲು ಸಾಕಷ್ಟು ಕೆಲಸಗಳಿವೆ ಎಂದು ಹೇಳಿ ಸುಮ್ಮನಾಗಿದ್ದಾರೆ.
ಬೀದಿ ನಾಯಿಗಳು ಸೆಕ್ಯೂರಿಟಿ ಗಾರ್ಡ್: ಸಾಕಷ್ಟು ಕಡೆಗಳಲ್ಲಿ ಬೀದಿ ನಾಯಿಗಳು ಚಿಕ್ಕ ಮಕ್ಕಳಿಗೆ ಕಡಿದ ಪ್ರಕರಣಗಳು ದಾಖಲಾಗಿದ್ದರೂ ಕೂಡ, ಕೆಲವೊಂದು ಬಡಾವಣೆಗಳಲ್ಲಿ ಬೀದಿ ನಾಯಿಗಳಿಂದ ಕಳ್ಳರ ಕಾಟ ತಪ್ಪಿದೆ. ಅವುಗಳು ಒಂದು ರೀತಿ ಸೆಕ್ಯೂರಿಟಿ ಗಾರ್ಡ್ ಇದ್ದ ಹಾಗೆ ಎಂದು ಶಾಲಿನಿಯವರ ಮಾತು.
ಇನ್ನು ಬೀದಿ ನಾಯಿಗಳನ್ನು ಕೊಲ್ಲುವ ಬಗ್ಗೆ ಹಂದಿ ಮಾಲೀಕರನ್ನು ಕೇಳಿದರೆ ನಾವ್ಯಾಕೆ ಅದನ್ನು ಹೇಳಬೇಕು ಎಂದು ಸುಮ್ಮನಾಗುತ್ತಾರೆ. ಸುಮಾರು 150 ಕ್ಕೂ ಹೆಚ್ಚು ಹಂದಿ ಮಾಲೀಕರು ನಗರದಲ್ಲಿದ್ದು. ಸುಮಾರು 10 ಸಾವಿರಕ್ಕೂ ಹೆಚ್ಚು ಹಂದಿಗಳು ನಗರದಲ್ಲಿ ಆಶ್ರಯ ಪಡೆದಿವೆ.
ಹಂದಿಗಳು ಬೆಳೆದು ದೊಡ್ಡದಾದ ನಂತರ ಅವುಗಳನ್ನು ಗೋವಾ, ಹಾಸನ, ಮೈಸೂರು, ಮಂಡ್ಯಕ್ಕೆ ಮಾರಾಟ ಮಾಡಲಾಗುತ್ತದೆ ಎಂದು ಹಂದಿ ಮಾಲೀಕರು ತಿಳಿಸಿದ್ದಾರೆ.
ಒಟ್ಟಿನಲ್ಲಿ ತಮ್ಮ ಮನೆಯ ಸಾಕು ಪ್ರಾಣಿಗಾಗಿ ಮತ್ತೊಂದು ಸಾಕು ಪ್ರಾಣಿಯನ್ನು ಕೊಲ್ಲುವುದು ಎಷ್ಟೊಂದು ಸರಿ ಎಂಬುದು ಪ್ರಜ್ಞಾವಂತ ನಾಗರಿಕರ ಪ್ರಶ್ನೆ.