ತಿಂಗಳಾಂತ್ಯಕ್ಕೆ ಹುಬ್ಬಳ್ಳಿಯಲ್ಲಿ ಅಪರಾಧಗಳ ಸರಮಾಲೆ
ಹುಬ್ಬಳ್ಳಿ, ಸೆಪ್ಟೆಂಬರ್ 1: ನಗರದಲ್ಲಿ ಆಗಸ್ಟ್ ತಿಂಗಳ ಕೊನೆಯ ದಿನವಾದ ಬುಧವಾರದಂದು ವಿವಿಧ ಪೊಲೀಸ್ ಠಾಣೆಗಳಲ್ಲಿ ಹಲವಾರು ಅಪರಾಧ ಪ್ರಕರಣಗಳು ದಾಖಲಾಗಿವೆ. ಸ್ಥಳೀಯ ಕೌಲ್ ಪೇಟೆ ನಿವಾಸಿ ಸಯ್ಯದ್ ಫಜಲ್ ಸಯ್ಯದ್ ಅಬ್ದುಲ್ ದಫೇದಾರ ಅವರ ವಾಹನದ ಡಿಕ್ಕಿಯಲ್ಲಿ ಇಟ್ಟಿದ್ದ 1,75,000 ರು. ಹಣವನ್ನು ಕಳ್ಳರು ಬುಧವಾರ ಲಪಟಾಯಿಸಿದ್ದಾರೆ.
ಕೆಜಿಎನ್ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಸಯ್ಯದ್ ತಮ್ಮ ಕಚೇರಿಗಾಗಿ ಐಸಿಐಸಿಐ ಬ್ಯಾಂಕ್ ನಿಂದ ಹಣ ತೆಗೆದುಕೊಂಡು ತಮ್ಮ ದ್ವಿಚಕ್ರ ವಾಹನದ ಡಿಕ್ಕಿಯಲ್ಲಿಟ್ಟಿದ್ದರು. ಹಣವಿದ್ದ ವಾಹನವನ್ನು ತಮ್ಮ ಕಚೇರಿ ಮುಂದೆ ನಿಲ್ಲಿಸಿ, ಕಚೇರಿಯೊಳಗೆ ಹೋಗಿ ಮರಳಿ ಬಂದು ನೋಡಿದಾಗ ಹಣವಿದ್ದ ಬ್ಯಾಗ್ ನಾಪತ್ತೆಯಾಗಿದೆ. ಘಟನೆ ಕುರಿತು ಗೋಕುಲರಸ್ತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.[ದಾವಣಗೆರೆಯಲ್ಲಿ ಕಿಡ್ನಾಪ್ ಆದ ಬಾಲಕ ಬಚಾವ್]
ಹಣ ಲೂಟಿ: ಗದಗ ಜಿಲ್ಲೆಯ ಕೊಟುಮಚಗಿ ಗ್ರಾಮದ ಉಮರಸಾಬ್ ಹುಸೇನಸಾಬ್ ಗುಳೇದಗುಡ್ಡ ಎಂಬ ಟ್ರಕ್ ಚಾಲಕನ ಹಣವನ್ನು ಮೂವರು ದುಷ್ಕರ್ಮಿಗಳು ಲೂಟಿ ಮಾಡಿ ಪರಾರಿಯಾಗಿದ್ದಾರೆ.
ಬುಧವಾರ ತಮ್ಮ ಕ್ಯಾಂಟರ್ ವಾಹನದಲ್ಲಿ ಹುಬ್ಬಳ್ಳಿಯ ಬೈಪಾಸ್ ಗಬ್ಬೂರನಿಂದ ಕುಂದಗೋಳ ರಸ್ತೆಗೆ ಹೋಗುವ ವೇಳೆ ಬೈಕ್ ನಲ್ಲಿ ಬಂದ ಮೂವರು ದುಷ್ಕರ್ಮಿಗಳು ಅಡ್ಡಗಟ್ಟಿ, ಚಾಕು ತೋರಿಸಿ ಹಣ ದೋಚಿ ಪರಾರಿಯಾಗಿದ್ದಾರೆ. ಈ ಕುರಿತು ಬೆಂಡಿಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.[ಪೊಲೀಸನ ವೇಷ ಧರಿಸಿ ಬಂದ ಅಸಲಿ ಕಾರು ಕಳ್ಳ!]
ಮತ್ತೊಂದು ಸರಗಳ್ಳತನ : ಸ್ಥಳೀಯ ಲಿಂಗರಾಜನಗರದ ಅಕ್ಕಮಹಾದೇವಿ ಕಲ್ಲಪ್ಪ ಮರಕಟ್ಟಿ ಎಂಬುವವರು ತಮ್ಮ ಮನೆ ಮುಂದೆ ಕಸ ಗುಡಿಸುವಾಗ ಬೈಕ್ ನಲ್ಲಿ ಬಂದ ಸರಗಳ್ಳರು 40 ಗ್ರಾಂ ತೂಕದ ಮಂಗಳಸೂತ್ರವನ್ನು ಕಿತ್ತುಕೊಂಡು ಪರಾರಿಯಾಗಿದ್ದಾರೆ. ವಿಳಾಸ ಕೇಳುವ ನೆಪದಲ್ಲಿ ಮಂಗಳಸೂತ್ರ ಕಿತ್ತುಕೊಂಡಿದ್ದು, ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಧಾರವಾಡದಲ್ಲಿ ಎರಡು ಸರಗಳ್ಳತನ: ಧಾರವಾಡದ ದತ್ತಾ ರೆಸಿಡೆನ್ಸಿಯ ನಿವಾಸಿ ಅಂಜನಾ ಬಾಲಚಂದ್ರ ಕುಲಕರ್ಣಿ ಎಂಬುವರ 22 ಗ್ರಾಂ ತೂಕದ ಬಂಗಾರದ ಸರವನ್ನು ಸರಗಳ್ಳರು ಕಿತ್ತುಕೊಂಡು ಪರಾರಿಯಾಗಿದ್ದಾರೆ.
ತಮ್ಮ ಸೊಸೆ ಮತ್ತು ಮೊಮ್ಮಕ್ಕಳೊಂದಿಗೆ ಗಾಂಧಿನಗರದ ಈಶ್ವರ ದೇವಸ್ಥಾನದಲ್ಲಿ ಗಣೇಶ ಮೂರ್ತಿಯನ್ನು ಬುಕ್ ಮಾಡಿ, ಮರಳಿ ಮನೆಗೆ ಬರುವಾಗ ಬೈಕ್ ನಲ್ಲಿ ಬಂದ ದುಷ್ಕರ್ಮಿಗಳು ಸರಗಳ್ಳತನ ಮಾಡಿದ್ದಾರೆ.[ಹುಬ್ಬಳ್ಳಿ ಪೊಲೀಸರ ಖೆಡ್ಡಕ್ಕೆ ಬಿದ್ದ ಚಾಲಾಕಿ ಮನೆಗಳ್ಳರು]
ಶೆಟ್ಟರ ಕಾಲೋನಿಯಲ್ಲಿ: ಧಾರವಾಡದ ಯಾಲಕ್ಕಿ ಶೆಟ್ಟರ್ ಕಾಲೋನಿಯ ಸಲೋಮಿ ಶ್ಯಾಮರಾವ್ ಸವಣೂರ ಎಂಬ ಮಹಿಳೆಯ 20 ಗ್ರಾಂ. ತೂಕದ ಬಂಗಾರದ ಸರವನ್ನು ಬೈಕ್ ನಲ್ಲಿ ಬಂದ ಸರಗಳ್ಳರು ಕಿತ್ತುಕೊಂಡು ಪರಾರಿಯಾಗಿದ್ದಾರೆ.
ಶೆಟ್ಟರ ಕಾಲೋನಿಯ 1ನೇ ಅಡ್ಡ ರಸ್ತೆಯಲ್ಲಿ ಮಹಿಳೆ ನಡೆದುಕೊಂಡು ಹೋಗುವಾಗ ಬೈಕ್ ನಲ್ಲಿ ಅವರನ್ನು ಹಿಂಬಾಲಿಸಿದ ಸರಗಳ್ಳರು, ಒಮ್ಮೆಲೆ ಸಲೋಮಿಯವರ ಕುತ್ತಿಗೆ ಕೈ ಹಾಕಿ ಬಂಗಾರದ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದಾರೆ. ಎರಡೂ ಸರಗಳ್ಳತನ ಪ್ರಕರಣಗಳು ವಿದ್ಯಾಗಿರಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿವೆ.[ಹುಬ್ಬಳ್ಳಿ-ಧಾರವಾಡದಲ್ಲಿ ಮತ್ತೆರಡು ಸರಗಳ್ಳತನ]
ಸಂಚಾರ ನಿಯಮ ಉಲ್ಲಂಘನೆ: ಸಂಚಾರ ನಿಯಮ ಉಲ್ಲಂಘನೆ ಮಾಡಿದ 607 ಕೇಸ್ ಗಳನ್ನು ದಾಖಲಿಸಿ, 75,500 ರು. ದಂಡ ವಸೂಲಿ ಮಾಡಲಾಗಿದೆ.