ಹೋಟೆಲ್ ಸಿಬ್ಬಂದಿ ಮುಂದೆಯೇ ಚಂದ್ರಶೇಖರ ಗುರೂಜಿ ಹತ್ಯೆ
ಹುಬ್ಬಳ್ಳಿ, ಜುಲೈ 05; ಹುಬ್ಬಳ್ಳಿಯ ಉಣಕಲ್ ಕೆರೆ ಬಳಿಯ ಹೋಟೆಲ್ನಲ್ಲಿ ಸರಳವಾಸ್ತು ಖ್ಯಾತಿಯ ಡಾ. ಚಂದ್ರಶೇಖರ ಗುರೂಜಿ ಹತ್ಯೆ ನಡೆದಿದೆ. ಹೋಟೆಲ್ ಸಿಬ್ಬಂದಿಯ ಸಮ್ಮುಖದಲ್ಲಿಯೇ ಹತ್ಯೆ ನಡೆದಿದೆ.
ಮಂಗಳವಾರ ಗುರೂಜಿ ಉಳಿದುಕೊಂಡಿದ್ದ ಹೊಟೇಲ್ಗೆ ಹಂತಕರು ಬಂದಿದ್ದಾರೆ. ಹೋಟೆಲ್ನ ರಿಸಪ್ಷನ್ಗೆ ಗುರೂಜಿಗೆ ಕರೆಸಿಕೊಂಡಿದ್ದಾರೆ. ಆರೋಪಿಗಳು ಬಂದ ಅರ್ಧಗಂಟೆಯ ತರುವಾಯ ಅಂದರೆ 12.43ಕ್ಕೆ ಸರಿಯಾಗಿ ಹಂತಕರ ಪೈಕಿಯಲ್ಲಿ ಓರ್ವ ಭಕ್ತನಂತೆ ಕಾಲಿಗೆ ಎರಗುತ್ತಾನೆ. ಕಾಲಿಗೆ ಎರಗಿದ್ದೇ ತಡ ಮತ್ತೊಬ್ಬ ಚಾಕುವಿನಿಂದ ಇರಿದಿದ್ದಾನೆ ಬಳಿಕ ಆತನ ಜೊತೆಗೆ ಕಾಲಿಗೆರಗಿದ್ದ ಇನ್ನೊಬ್ಬ ಸಹ ಚಾಕುವಿನಿಂದ ಇರಿದಿದ್ದಾನೆ.
ದಿಕ್ಕಾಪಾಲಾಗಿ ಓಡಿದ ಹೋಟೆಲ್ ಸಿಬ್ಬಂದಿ; ಡಾ. ಚಂದ್ರಶೇಖರ್ ಗುರೂಜಿಯವರು ಹೋಟೆಲ್ನ ರಿಸಪ್ಷನ್ಗೆ ಬರುತ್ತಿದ್ದಂತೆ ಚೇರ್ ಮೇಲೆ ಕುಳಿತಿದ್ದಾರೆ. ಈ ವೇಳೆ ಕಾಲಿಗೆ ಒಬ್ಬ ಬೀಳುತ್ತಿದ್ದಂತೆ ಮತ್ತೊಬ್ಬ ಚಾಕುವಿನಿಂದ ಇರಿಯುತ್ತಾನೆ. ಆಗ ಅಲ್ಲೇ ಇದ್ದ ಹೋಟೆಲ್ನ ಮಹಿಳಾ ಸಿಬ್ಬಂದಿ ಮೊದಲು ಓಡಿ ಹೋಗುತ್ತಾರೆ. ಇತರೆ ಪುರುಷ ಸಿಬ್ಬಂದಿಗಳು ಹತ್ತಿರಕ್ಕೆ ಹೋಗಲು ಪ್ರಯತ್ನಿಸಿದರು ಚಾಕುವನ್ನು ತೋರಿಸಿ ದುಷ್ಕರ್ಮಿಗಳು ಹೋಟೆಲ್ ಸಿಬ್ಬಂದಿಗೆ ಹೆದರಿಸಿದ್ದಾರೆ. ಇದರಿಂದ ಕೆಲವರು ಹೆದರಿ ಹೆದರಿ ಹಿಂದಕ್ಕೆ ಸರಿಯುತ್ತಾರೆ.
ಹಂತಕರು ಚಾಕು ಹಿಡಿದು ಓಡುವ ದೃಶ್ಯ; ಮತ್ತೊಂದು ಸಿಸಿಟಿವಿಯಲ್ಲಿ ಹಂತಕರು ಚಾಕು ಹಿಡಿದು ಹೋಟೆಲ್ನಿಂದ ಹೊರಗೆ ಓಡುವ ದೃಶ್ಯ ಸೆರೆಯಾಗಿದೆ. ಈ ವೇಳೆಯಲ್ಲಿ ಹಂತಕರು ಓಡುತ್ತಿರುವ ದೃಶ್ಯದಲ್ಲಿ ಹಂತಕರ ಮುಖ ಚಹರೆ ಸಹ ಪತ್ತೆಯಾಗಿದೆ. ಸಿಸಿಟಿವಿಯ ದೃಶ್ಯದ ಆಧಾರದಲ್ಲಿ ಆರೋಪಿಗಳು ಯಾರು ಎಂಬುದನ್ನು ಪತ್ತೆ ಹಚ್ಚಲು ಪೊಲೀಸರು ಮುಂದಾಗಿದ್ದಾರೆ.
ಸಿಡಿಆರ್ ಮೊರೆ ಹೋದ ಪೊಲೀಸ್ ತಂಡ; ಡಾ. ಚಂದ್ರಶೇಖರ್ ಗುರೂಜಿಯನ್ನು ಕೊಂದಿದ್ದು ಯಾರು ಎನ್ನುವುದನ್ನು ಪತ್ತೆ ಹಚ್ಚಲು ಈಗಾಗಲೇ ಶ್ವಾನದಳವನ್ನು ಕರೆಸಲಾಗಿದೆ. ಇದರ ಜೊತೆಗೆ ಪೊಲೀಸರು ಸಿಡಿಆರ್ ಮೊರೆಯನ್ನು ಸಹ ಹೋಗಿದ್ದಾರೆ. ಚಂದ್ರಶೇಖರ್ ಗುರೂಜಿಯರಿಗೆ ರಿಸಪ್ಷನ್ಗೆ ಬರುವ ಮೊದಲು ಕರೆ ಮಾಡಿದ್ದು ಯಾರು. ಆ ನಂಬರ್ ಯಾವುದು ಎಂಬುದನ್ನು ಪತ್ತೆ ಮಾಡಿ ಸಿಡಿಆರ್ ಮೊರೆ ಹೋಗಲಿದ್ದಾರೆ.