ರಾಯರೆಡ್ಡಿ ಸಾಹೇಬ್ರೆ, ವಿವಿಗಳ 500 ಕೋಟಿ ಅಕ್ರಮದ ಕತೆ ಏನಾಯ್ತು?
ಹುಬ್ಬಳ್ಳಿ, ಜುಲೈ 27: ರಾಜ್ಯದ 17 ವಿಶ್ವವಿದ್ಯಾಲಯಗಳಲ್ಲಿ ನಡೆದಿದೆ ಎನ್ನಲಾದ 500 ಕೋಟಿ ರೂಪಾಯಿಗಳ ಅಕ್ರಮ ಬಯಲಿಗೆ ಎಳೆದು ಅಕ್ರಮ ಎಸಗಿದ ಕುಲಪತಿಗಳನ್ನು ಜೈಲಿಗೆ ಹಾಕಿಸುವುದಾಗಿ ಮಾಧ್ಯಮಗಳ ಮುಂದೆ ಬಡಾಯಿ ಕೊಚ್ಚಿಕೊಂಡಿದ್ದರು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ.
ಇದೀಗ ದೊಡ್ಡ ಮಟ್ಟದ ಪ್ರಚಾರ ಗಿಟ್ಟಿಸಿಕೊಂಡಿದ್ದ ಸಚಿವರು ಅಕ್ಷರಶಃ ಮಹಾಭಾರತದ ಉತ್ತರ ಕುಮಾರನಂತಾಗಿದ್ದಾರೆ.
ಈ ಕುರಿತು ತಿಂಗಳುಗಟ್ಟಲೆ ಪ್ರಚಾರ ಗಿಟ್ಟಿಸಿಕೊಂಡಿದ್ದ ರಾಯರೆಡ್ಡಿ, ವಿವಿಗಳಲ್ಲಿ ನಡೆದ ಅಕ್ರಮಗಳ ತನಿಖೆಗಾಗಿ ತಾವೇ ಸಮಿತಿಗಳನ್ನು ನೇಮಿಸಿದ್ದರು. ಇದೀಗ ತಾವೇ ನೇಮಿಸಿದ್ದ ಸಮಿತಿಗಳಿಗೆ ತನಿಖೆ ನಿಲ್ಲಿಸುವಂತೆ ಆದೇಶಿಸಿದ್ದಾರೆ. ಇದಕ್ಕೆ ಅವರು ಕಾನೂನಿನ ನೆಪವೊಡ್ಡಿದ್ದಾರೆ.
ಶಸ್ತ್ರ ತ್ಯಾಗ
ಉನ್ನತ ಶಿಕ್ಷಣ ಸಚಿವರಾಗಿ ಅಧಿಕಾರ ವಹಿಸಿಕೊಂಡ ನಂತರ ವಿಶ್ವವಿದ್ಯಾಲಯಗಳ ಅಕ್ರಮಗಳ ಬಗ್ಗೆ ರಾಯರೆಡ್ಡಿ ಯುದ್ಧೋನ್ಮಾದದಲ್ಲಿದ್ದರು. ಆದರೆ ಈಗ ಒಂದೇ ಏಟಿಗೆ ಶಸ್ತ್ರತ್ಯಾಗ ಮಾಡಿದ್ದಾರೆ.
ಸಚಿವ ಭಿನ್ನ ನಿಲುವು
ತನಿಖೆಗೆ ಆದೇಶಿಸಿದ ಸಚಿವ ರಾಯರೆಡ್ಡಿ, 'ತಮಗೆ ತನಿಖೆ ಮಾಡುವ ಅಧಿಕಾರ ಇಲ್ಲ,' ಎಂದು ಹೇಳುವ ಮೂಲಕ ಪ್ರಕರಣಕ್ಕೆ ಇತಿಶ್ರೀ ಹಾಡಲು ಮುಂದಾಗಿದ್ದಾರೆ.
ಕಾಯ್ದೆಯಲ್ಲಿ ಅವಕಾಶವಿಲ್ಲ
ಕರ್ನಾಟಕ ವಿಶ್ವವಿದ್ಯಾಲಯ ಕಾಯ್ದೆಯಲ್ಲಿ ವಿವಿಗಳಲ್ಲಿ ನಡೆದಿರುವ ಅಕ್ರಮಗಳ ಕುರಿತು ತನಿಖೆ ನಡೆಸಲು ಅವಕಾಶವಿಲ್ಲ. ಈ ಕಾರಣಕ್ಕೆ ವಿಶ್ವವಿದ್ಯಾಲಯ ಕಾಯ್ದೆಗೆ ಸಮಗ್ರ ತಿದ್ದುಪಡಿ ತರಲು ನಿರ್ಧರಿಸಲಾಗಿದೆ ಎಂದು ಹೇಳಿ ಕೈತೊಳೆದುಕೊಳ್ಳಲು ಸಚಿವರು ಮುಂದಾಗಿದ್ದಾರೆ.
ಸಚಿವರಿಗೆ ಕಾಯ್ದೆಯ ಅರಿವಿರಲಿಲ್ಲವೇ?
ಆದರೆ, ತನಿಖೆಗೆ ಆದೇಶಿಸುವ ಸಂದರ್ಭದಲ್ಲಿ ಸಚಿವರಿಗೆ ಕಾಯ್ದೆಯ ಅರಿವು ಇರಲಿಲ್ಲವೆ? ಅಥವಾ ಪ್ರಚಾರಕ್ಕಾಗಿ ಮಾಡಿದ ತಂತ್ರವೋ? ಎಂಬ ಸಂಶಯ ಮೂಡಿದೆ. ಅಲ್ಲದೆ ಸಚಿವರ ಮೇಲೆ ಮುಖ್ಯಮಂತ್ರಿಗಳ ಒತ್ತಡವೂ ಇರಬಹುದು ಎಂಬ ಬಲವಾದ ಅನುಮಾನ ಹುಟ್ಟಿಸಿದೆ.
ಏನಿದು ಪ್ರಕರಣ?
ಉನ್ನತ ಶಿಕ್ಷಣ ಖಾತೆ ಸಚಿವರಾಗಿ ಅಧಿಕಾರ ವಹಿಸಿಕೊಂಡ ನಂತರ ವಿಶ್ವವಿದ್ಯಾಲಯಗಳ ಕುಲಪತಿಗಳ ವಿರುದ್ಧ ಸಚಿವ ಬಸವರಾಜ ರಾಯರೆಡ್ಡಿ ಕಿಡಿಕಾರಿದ್ದರು. ವಿಶ್ವವಿದ್ಯಾಲಯದಲ್ಲಿ 500 ಕೋಟಿ ರೂ. ಗಳಿಗೂ ಅಧಿಕ ಸಿವಿಲ್ ಕಾಮಗಾರಿಗಳಲ್ಲಿ ಅಕ್ರಮ ನಡೆದಿದ್ದು, ಇವುಗಳನ್ನು ತನಿಖೆ ಮಾಡಿ ಕುಲಪತಿಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವುದಾಗಿ ಭರವಸೆ ನೀಡಿದ್ದರು.
ಅಧಿಕಾರಿಗಳ ತಂಡ
ಅಲ್ಲದೆ, ಅಕ್ರಮಗಳ ಕುರಿತು ತನಿಖೆಗಾಗಿ ಜಿಲ್ಲಾ ಮಟ್ಟದ ಅಧಿಕಾರಿಗಳ ತಂಡಗಳನ್ನು ರಚಿಸಿ ತನಿಖೆ ನಡೆಸುವಂತೆ ಆದೇಶಿಸಿದ್ದರು.
ತನಿಖಾ ವರದಿಯನ್ನು ೧೫ ದಿನಗಳ ಒಳಗಾಗಿ ಸರ್ಕಾರಕ್ಕೆ ಸಲ್ಲಿಸಬೇಕು ಎಂದೂ ಹೇಳಿದ್ದರು. ಆದರೆ, ಆದೇಶವಾಗಿ ಏಳು ತಿಂಗಳು ಕಳೆದರೂ ತನಿಖಾ ವರದಿ ಸರ್ಕಾರದ ಕೈ ಸೇರುವುದಿರಲಿ ತನಿಖೆಯೇ ಆರಂಭವಾಗಿಲ್ಲ.
ತನಿಖೆ ನಡೆಯಬೇಕಾಗಿರುವ ವಿವಿಗಳು
ಹಂಪಿ ಕನ್ನಡ ವಿಶ್ವವಿದ್ಯಾಲಯ, ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ, ಕಲಬುರಗಿ ವಿಶ್ವವಿದ್ಯಾಲಯ, ಬಳ್ಳಾರಿ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯ, ವಿಜಯಪುರ ಅಕ್ಕಮಹಾದೇವಿ ವಿಶ್ವವಿದ್ಯಾಲಯ, ಬೆಳಗಾವಿ ವಿಶ್ವೇಶ್ವರ ತಾಂತ್ರಿಕ ವಿಶ್ವವಿದ್ಯಾಲಯ, ಬೆಳಗಾವಿ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ, ಶಿಗ್ಗಾವಿ ಕರ್ನಾಟಕ ಜಾನಪದ ವಿಶ್ವವಿದ್ಯಾಲಯ, ದಾವಣಗೆರೆ ವಿಶ್ವವಿದ್ಯಾಲಯ, ಬೆಂಗಳೂರು ವಿಶ್ವವಿದ್ಯಾಲಯ, ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ, ಮೈಸೂರು ವಿಶ್ವವಿದ್ಯಾಲಯ, ಮೈಸೂರು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ, ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ವಿಶ್ವವಿದ್ಯಾಲಯಗಳಲ್ಲಿ ಅಕ್ರಮ ಸಂಬಂಧ ತನಿಖೆ ನಡೆಯಬೇಕಾಗಿದೆ.