ಹುಬ್ಬಳ್ಳಿಯಲ್ಲಿ ಗಾಂಜಾ ಸ್ಪಾಟ್, ಆರಕ್ಷಕರ ಭಯವೇ ಇಲ್ಲ
ಹುಬ್ಬಳ್ಳಿ, ಡಿಸೆಂಬರ್ 21: ನಗರದ ಅಲ್ಲಲ್ಲಿ ಪೊಲೀಸರು ಗಾಂಜಾ ವಶಪಡಿಸಿಕೊಂಡು ಇಷ್ಟು ಜನರನ್ನು ಬಂಧಿಸಿದ್ದೇವೆ ಎಂದು ಪ್ರಕರಣಗಳು ದಾಖಲಾಗುತ್ತಲೇ ಇವೆ ಆದರೆ ಗಾಂಜಾ ಮಾರಾಟ ಕಡಿಮೆಯಾದಂತಿಲ್ಲ. ಸ್ಥಳೀಯ ಆನಂದ ನಗರದ ಕುಷ್ಟರೋಗ ಆಸ್ಪತ್ರೆಯ ಬಳಿ ಇರುವ ರಾಯನಾಳ ಕೆರೆಯ ವಿಶ್ರಾಂತಿ ತಾಣ ಗಾಂಜಾ ಮಾರಾಟ, ನಿತ್ಯ ವ್ಯಸನಿಗಳ ಸ್ಥಳವಾಗಿ ಪರಿಣಮಿಸಿದೆ.[ಬೆಳ್ತಂಗಡಿ, ಪುತ್ತೂರಿನಲ್ಲಿ ಗಾಂಜಾ ಸಾಗಿಸುತ್ತಿದ್ದ ಇಬ್ಬರ ಬಂಧನ]
ಹೌದು, ಈ ಕೆರೆಯಲ್ಲಿ ವಿಶ್ರಾಂತಿ ತಾಣವೊಂದನ್ನು ಹಲವಾರು ವರ್ಷಗಳ ಹಿಂದೆ ನಿರ್ಮಿಸಲಾಗಿದೆ. ಈ ಸ್ಥಳದ ಪಕ್ಕ ವಾಲಿಬಾಲ್ ಆಡಲು ಕೂಡ ಯುವಕರು ಬರುತ್ತಾರೆ. ಆದರೆ ಮುಂಜಾನೆ ಹೊತ್ತಿನಲ್ಲಿ ಮಾತ್ರ ಅವರು ಬರುವುದು. ಸುತ್ತ ಮುತ್ತ ಬರೀಕಾಡು. ಹೀಗಾಗಿ ಇಷ್ಟೆಲ್ಲಾ ಇದ್ದೂ ಕೂಡ ಇಲ್ಲಿನ ವಿಶ್ರಾಂತಿ ತಾಣದಲ್ಲಿ ದಿನವಿಡೀ ಗಾಂಜಾ ಸೇದೋ ಅಮಲುದಾರರೇ ಸೇರಿರುತ್ತಾರೆ. ಜೊತೆಗೆ ಕೆರೆಯ ಹತ್ತಿರದ ಅಂಗಡಿಯೊಂದರಲ್ಲಿ ಕಡಿಮೆ ಬೆಳೆಗೆ ಗಾಂಜಾ ಮಾರಲಾಗುತ್ತದೆ ಎನ್ನುವ ಗುಮಾನಿಯೂ ಇದೆ.[ಮಂಗಳೂರಿನಲ್ಲಿ ಗಾಂಜಾ ಸಾಗಿಸುತ್ತಿದ್ದ ಇಬ್ಬರ ಬಂಧನ]

ದೇವಸ್ಥಾನವಿದ್ದರೂ ಭಯವಿಲ್ಲ. ಆರಕ್ಷಕರ ತಂಟೆಯಿಲ್ಲ
ದೇವಸ್ಥಾನವಿದೆ, ಇಂಥಹ ಪುಣ್ಯ ಸ್ಥಳದಲ್ಲಿ ಈ ರೀತಿ ಅಕ್ರಮ ಚಟುವಟಿಕೆ ನಡೆಯುತ್ತದೆ. ನಾವು ಹೇಳಲು ಹೋದರೆ ಜೀವ ಬೆದರಿಕೆ ಹಾಕುತ್ತಾರೆ. ಪೊಲೀಸರೇ ಏನೂ ಮಾಡಲ್ಲ ನೀವ್ಯಾರು ಹೇಳಕ್ಕೆ? ಎಂದು ಬೆದರಿಕೆ ಹಾಕುತ್ತಾರೆ. ಈ ಬಗ್ಗೆ ಪೊಲೀಸರಿಗೆ ಹೇಳಿದರೆ ಆಯ್ತು ಬಿಡಮ್ಮ ನೋಡ್ತೇವೆ, ಬರ್ತೇವೆ ಎಂದು ಹೇಳುತ್ತಾರೆಯೇ ಹೊರತು ಬರಲ್ಲ. ಬಂದರೂ ಯಾರೂ ಇಲ್ಲದಾಗ ಬಂದು ಹೋಗುತ್ತಾರೆ ಎಂದು ಹೇಳುತ್ತಾರೆ ಸ್ಥಳೀಯ ನಿವಾಸಿ ಬಸಮ್ಮ.
ಇಲ್ಲಿ ಕನಿಷ್ಠವೆಂದರೂ ದಿನಕ್ಕೆ 50 ಜನರಾದರೂ ಬಂದು ಗಾಂಜಾ ಸೇದಿಕೊಂಡು ಹೋಗುತ್ತಾರೆ ಎನ್ನುವ ಬಸಮ್ಮ, ರಾತ್ರಿ 1 ಗಂಟೆಯವರೆಗೂ ಇಲ್ಲಿ ಯುವಕರು ಬರುತ್ತಿರುತ್ತಾರೆ ಹೀಗಾಗಿ ನಾವು ಜೀವ ಭಯದಿಂದಲೇ ಕಾಲ ಕಳೆಯಬೇಕಾಗಿದೆ ಎನ್ನುತ್ತಾರೆ ಅವರು.

ಕುಡುಕರೂ ಕಡಿಮೆಯೇನಿಲ್ಲ
ಇಲ್ಲಿ ಗಾಂಜಾ ಸೇದುವವರಲ್ಲದೇ ಕುಡುಕರೂ ಕೂಡ ಸಾಕಷ್ಟು ಸಂಖ್ಯೆಯಲ್ಲಿ ಬರುತ್ತಾರೆ. ಹೋಲಸೇಲ್ ಅಂಗಡಿಗಳಿಂದ ಪಾರ್ಸೆಲ್ ತೆಗೆದುಕೊಂಡು ಬಂದು ಇಲ್ಲಿ ಗಾಂಜಾ ಸೇದುತ್ತ ಮದ್ಯವನ್ನು ಸೇವಿಸುತ್ತಾರೆ. ಇದು ನಿತ್ಯ ಇಲ್ಲಿಯ ದೃಶ್ಯವಾಗಿದೆ. ಕೆಲವರಂತೂ ಮದ್ಯದ ಅಮಲಿನಲ್ಲಿ ಹೊಡೆದಾಡಿಕೊಂಡು ಗಾಯಗೊಂಡು ಆಸ್ಪತ್ರೆಯನ್ನು ಸೇರಿದ ಘಟನೆಗಳೂ ಇವೆ.

ಪ್ರೇಮಿಗಳಿಗೂ ಇದೇ ಜಾಗ ಬೇಕು
ಇನ್ನು ಕೆಲವರು ಪ್ರೇಮಿಗಳು ತಮ್ಮ ಪ್ರೇಯಸಿಯನ್ನು ಇಲ್ಲಿ ಕರೆದುಕೊಂಡು ಬಂದು ಅರಣ್ಯದ ಪೊದೆಯೊಳಗೆ ಹೋಗುವುದು ಸಾಮಾನ್ಯವಾಗಿದೆ. ಈ ಬಗ್ಗೆ ಯುವತಿಯರಿಗೂ ತಿಳಿ ಹೇಳಿದರೆ ಅವರು ನಮ್ಮಿಷ್ಟ ನಿಂಗೇನಾತು ಎಂದು ಮಾರುತ್ತರ ನೀಡುತ್ತಾರೆ. ಮಧ್ಯಾಹ್ನದ ಹೊತ್ತು ಸಂಜೆಯ ಹೊತ್ತು ಇಲ್ಲಿ ಪ್ರೇಮಿಗಳ ಅನೈತಿಕ ಚಟುವಟಿಕೆ ಹೆಚ್ಚು.
ಇನ್ನು ಕೆಲವೊಂದು ಕಾಲೇಜುಗಳು ವಿದ್ಯಾರ್ಥಿಗಳಿಗೆ ತಮ್ಮದೇ ಉಡುಪು ನೀಡಿರುವುದರಿಂದ ವಿದ್ಯಾರ್ಥಿನಿಯರು ಉಡುಪು ಧರಿಸಿದ ದಿನ ಇಲ್ಲಿಗೆ ಬರಲ್ಲ. ಸಾಮಾನ್ಯ ಬಣ್ಣದ ಬಟ್ಟೆಗಳನ್ನು ಧರಿಸಿಕೊಳ್ಳುವ ದಿನದಂದು ಇಲ್ಲಿಗೆ ಬರುತ್ತಾರೆ. ಉಡುಪು ಧರಿಸಿದ ದಿನ ಬಂದ್ರೆ ಯಾವ ಕಾಲೇಜು ಎಂಬುದು ಗೊತ್ತಾಗುತ್ತೆ. ಹೀಗಾಗಿ ಇಲ್ಲಿ ಬುಧವಾರ, ಶನಿವಾರ ಹೆಚ್ಚಿನ ಪ್ರಮಾಣದ ಪ್ರೇಮಿಗಳು ಕಾಣ ಸಿಗುತ್ತಾರೆ. ಕೆಲವರಂತೂ ಗಾಂಜಾ ಸೇದಿಯೇ ತಮ್ಮ ಪ್ರೇಯಸಿಯನ್ನು ಸಂತೋಷ ಪಡಿಸುತ್ತಾರೆ . ಇನ್ನು ಕೆಲವರು ಬೀಯರ್ ಸವಿದು ಆನಂದಿಸುತ್ತಾರೆ.

ಇಸ್ಪೀಟ್ ಚಟಾ, ಬಡವರಿಗೆ ಭಯ
ಇತ್ತೀಚೆಗೆ ಆನಂದನಗರ ಇಬ್ಬರು ಯುವಕರು ಬೆಳಗ್ಗೆ ಗಾಂಜಾ ಸೇದಿಕೊಂಡು ಬೈಕ್ ವೀಲಿಂಗ್ ಮಾಡಲು ಹೋಗಿ ಪ್ರಾಣ ಕಳೆದುಕೊಂಡಿದ್ದರು. ಇನ್ನು ಇಲ್ಲಿಗೆ ಹಳೇ ಹುಬ್ಬಳ್ಳಿ, ಗೋಕುಲ ರಸ್ತೆ, ಆನಂದ ನಗರ ಸೇರಿದಂತೆ ನಗರದ ವಿವಿಧ ಪ್ರದೇಶಗಳಿಂದ ಬರುವ ಇಸ್ಪೀಟ್ ಆಟಗಾರರಿಗೆ ಸ್ವರ್ಗದಂತಹ ತಾಣವಾಗಿದೆ. ಸುತ್ತಲಿನ ಅರಣ್ಯ ಪ್ರದೇಶದಲ್ಲಿ ಇಸ್ಪೀಟ್ ಆಟಗಾರರು ಇರುವುದರಿಂದ ಕಟ್ಟಿಗೆ ಆರಿಸಲು ಹೋಗುವ ಬಡ ಹೆಣ್ಣು ಮಕ್ಕಳು ಹೆದರಿಕೆಯಿಂದ ತಮ್ಮ ಜೀವನಕ್ಕಾಗಿ ಒಣ ಕಟ್ಟಿಗೆ ಆರಿಸಿಕೊಂಡು ಬರುತ್ತಾರೆ.
ನಗರ ಪ್ರದೇಶದಲ್ಲಿಯೇ ಇರುವ ಈ ಸ್ಥಳದಲ್ಲಿ ಈ ತರಹದ ಅಕ್ರಮ ಚಟುವಟಿಕೆ ನಡೆಯುತ್ತಿರುವಾಗ ಇನ್ನು ನಗರದಿಂದ ದೂರವಿರುವ ಪ್ರದೇಶಗಳಲ್ಲಿ ಇನ್ನೆಷ್ಟು ಅಕ್ರಮಗಳು ನಡೆಯುತ್ತಿರಬಹುದು ಎಂಬುದು ನಾಗರಿಕರ ಪ್ರಶ್ನೆಯಾಗಿದೆ. ಈ ರೀತಿಯ ಚಟುವಟಿಕೆ ನಡೆದರೂ ಯಾವ ಅಧಿಕಾರಿಗಳೂ ತಲೆ ಕೆಡಿಸಿಕೊಳ್ಳದಿರುವುದು ಯಾವುದೋ ಗಂಡಾಂತರದ ಸೂಚನೆಯಂತಿದೆ.












Click it and Unblock the Notifications